
J3tvkannada.in
ಧಾರವಾಡ: ಮಹದಾಯಿ ಜಲ ವಿವಾದ ಇಂದು ಅಂತ್ಯಗೊಳ್ಳುತ್ತದೆ, ನಾಳೆ ಅಂತ್ಯಗೊಳ್ಳುತ್ತದೆ ಎನ್ನುವಾಗಲೆ, ಇದೀಗ ಮಹದಾಯಿ ಜಲ ವಿವಾದದ, ನ್ಯಾಯಾಧೀಕರಣ ಅವಧಿ ಮತ್ತೆ ಆರು ತಿಂಗಳು ವಿಸ್ತರಣೆ ಮಾಡಲಾಗಿದೆ. ಪದೇ ಪದೇ ಇದೇ ರೀತಿಯಾಗಿ ಅವಧಿಯನ್ನು ವಿಸ್ತರಿಸುತ್ತಿರುವುದರಿಂದ,ಇದು ಮಹದಾಯಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಈ ನಿರ್ಣಯವು ಸಹಜವಾಗಿ ಮಹದಾಯಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ 2018ರ ಆಗಸ್ಟ್ 14ರಂದು ಇದೇ ನ್ಯಾಯಾಧೀಕರಣ ಮಧ್ಯಂತರ ತೀರ್ಪಿನಲ್ಲಿ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಿತ್ತು. ಆದರೆ ಅದು ಇನ್ನೂ ಸಹಾ ಕಾರ್ಯರೂಪಕ್ಕೆ ಬಂದಿಲ್ಲ.ಈ ನಡುವೆ ಮತ್ತೆ ಅವಧಿ ವಿಸ್ತರಣೆಯಾಗಿದೆ. ಹೀಗಾಗಿ ಮಲಪ್ರಭಾ ನದಿಯಲ್ಲಿನ ನಮ್ಮ ನೀರು ನಾವು ಕಾಪಾಡಿಕೊಳ್ಳುತ್ತೇವೆ, ಆಗ ಈ ಜನಪ್ರತಿನಿಧಿಗಳು ತಮ್ಮ ಮತದಾರರಿಗೆ ಎಲ್ಲಿಂದ ನೀರು ಕೊಡುತ್ತಾರೆ ನೋಡೋಣ ಎಂದು ಹೋರಾಟಗಾರರು ಸವಾಲು ಹಾಕಿದ್ದಾರೆ.
ಮಹದಾಯಿ ನ್ಯಾಯಾಧೀಕರಣ 2010ರ ನವೆಂಬರ್ 16ರಂದು ರಚನೆಯಾಗಿತ್ತು, ಅದಾದ 3 ವರ್ಷದೊಳಗೆ ಅಂದರೆ 2013ರ ನವೆಂಬರ್ 15ರೊಳಗೆ ಅಂತಿಮ ವರದಿ ಸಲ್ಲಿಸುವಂತೆ ನ್ಯಾಯಮಂಡಳಿಗೆ ಗಡುವು ನೀಡಲಾಗಿತ್ತು. ಆದರೆ ಅಂದು ಇನ್ನಷ್ಟು ಕಾಲಾವಕಾಶ ಕೇಳಿದ್ದ ನ್ಯಾಯಮಂಡಳಿ ಯಾವುದೇ ವರದಿ ನೀಡಿರಲಿಲ್ಲ. ಈ ಮಧ್ಯೆ 2016ರಲ್ಲಿ ಕರ್ನಾಟಕಕ್ಕೆ ವ್ಯತಿರಿಕ್ತವಾದ ತೀರ್ಪು ಬಂದಾಗ ನವಲಗುಂದ-ನರಗುಂದ ಭಾಗದಲ್ಲಿ ಮಹದಾಯಿ ಹೋರಾಟ ಹಿಂಸಾತ್ಮಕ ರೂಪ ಪಡೆದುಕೂಂಡಿತ್ತು.ಆ ಸಮಯದಲ್ಲಿ ನೂರಾರು ರೈತರು ಜೈಲು ಪಾಲಾಗಿದ್ದರು. ಬಳಿಕ 2018ರ ಆಗಸ್ಟ್ 14ರಂದು ನ್ಯಾಯಮಂಡಳಿಯಿಂದ ಮಧ್ಯಂತರ ತೀರ್ಪು ಪ್ರಕಟವಾಗಿತ್ತು, ಆಗಿನಿಂದ ಹೋರಾಟ ಸ್ವಲ್ಪ ತಣ್ಣಗಾಗುತ್ತ ಬಂದಿದೆ. ಆದರೆ ಈಗ ಮತ್ತೆ ಅವಧಿ ವಿಸ್ತರಣೆಯಾದ, ಹಿನ್ನೆಲೆಯಲ್ಲಿ,ಮತ್ತೆ ಮಹದಾಯಿ ಯೋಜನೆಗೆ ಹೋರಾಟದ ಕಹಳೆ, ಮೊಳಗುವ ಲಕ್ಷಣಗಳು ಗೋಚರಿಸುತ್ತಿವೆ.