
ತುಮಕೂರು: ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಟ್ಟಣದ ಡಿಗ್ರಿ ಕಾಲೇಜಿನ ಸಮೀಪ ತಡರಾತ್ರಿ ಈ ದುರ್ಘಟನೆ ನಡೆದಿದ್ದು, ಮನೆಯ ಮುಂದೆ ನಿಂತಿದ್ದ ದ್ವಿಚಕ್ರ ವಾಹನಗಳಿಗೆ ರಾತ್ರಿ 10 ಗಂಟೆಯ ಸಮಯದಲ್ಲಿ ವಾಹನಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ ಆರೋಪಿಯನ್ನು ಕೊರಟಗೆರೆ ಪಿಎಸೈ ಚೇತನ್ ಕುಮಾರ್ ನೇತೃತ್ವದ ತಂಡ ಘಟನೆ ನಡೆದ ಕೇವಲ 8 ಗಂಟೆಯೊಳಗೆ ಬಂಧಿಸಿದ್ದಾರೆ. ಕೊರಟಗೆರೆ ಪಟ್ಟಣದ ಹೊರವಲಯದ ಹನುಮಂತಪುರದ ಡಿಗ್ರಿ ಕಾಲೇಜಿನ ಪಕ್ಕದಲ್ಲಿನ ಸಂತೋಷ್ ಅವರಿಗೆ ಸೇರಿದ್ದ ಸ್ಟೇಷನರಿ ಸ್ಟೋರಿನ ಮುಂಭಾಗ ನಿಂತಿದ್ದ ಎರಡು ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು. ಪ್ರಥಮ ದರ್ಜೆ ಕಾಲೇಜು ಸಮೀಪ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಅಂಗಡಿ ಮಳಿಗೆಯ ಮುಂದೆ ನಿಲ್ಲಿಸಿದ ಎರಡು ವಾಹನಗಳಿಗೆ ತಡರಾತ್ರಿ ಬೆಂಕಿ ಹಚ್ಚಿದ ಪರಿಣಾಮ ಎರಡು ವಾಹನಗಳು ಸುಟ್ಟು ಕರಕಲಾಗಿ ಅಂಗಡಿ ಮುಂಭಾಗದ ಸೀಟ್ಗಳು ಸಹ ಸುಟ್ಟು ಹೋಗಿದ್ದವು.

ಮುಖ್ಯರಸ್ತೆ ಪಕ್ಕದಲ್ಲಿಯೇ ದ್ವಿಚಕ್ರ ವಾಹನಗಳು ಹೊತ್ತಿ ಉರಿಯುತ್ತಿರುವುದನ್ನ ನೋಡಿದ ವಾಹನ ಸವಾರರು ಅಂಗಡಿಯ ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ. ಮನೆಯ ಮೇಲಿಂದ ಕೆಳಗೆ ಬರುವಷ್ಟರಲ್ಲಿ ಎರಡು ವಾಹನಗಳು ಸುಟ್ಟು ಹೋಗಿವೆ. ಮನೆಯ ಮುಂದೆ ನಿಂತಿದ್ದ ದ್ವಿಚಕ್ರ ವಾಹನಗಳಿಗೆ ಕಾರಿನಲ್ಲಿ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹೋಗಿರುವ ವಿಡಿಯೋ ಹಿಡಿದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ವಾಹನ ಆಗಮಿಸಿ ಅಂಗಡಿ ಮತ್ತು ಮಹಡಿ ಮೇಲಿನ ಮನೆಗೆ ಆವರಿಸಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಕೊರಟಗೆರೆ ಪಿಎಸೈ ಚೇತನ್ ಕುಮಾರ್, ಕ್ರೈಂ ಸಿಬ್ಬಂಧಿಗಳಾದ ದೊಡ್ಡಲಿಂಗಯ್ಯ ಮತ್ತು ಮೋಹನ್ ನೇತೃತ್ವದಲ್ಲಿ, ಘಟನೆ ನಡೆದ ಕೇವಲ 8 ಗಂಟೆಯೊಳಗೆ ಆರೋಪಿ ಕಾರ್ತಿಕ್ ನನ್ನು ಬಂಧಿಸಿ ಆತನಿಂದ ಸ್ವಿಪ್ಟ್ ಕಾರನ್ನು ವಶಕ್ಕೆ ಪಡೆದಿದ್ದಾರೆ.