
ರಾಯಚೂರು: ರೈಲ್ವೆ ಇಲಾಖೆ ರಾಷ್ಟ್ರದ ಬೆನ್ನಲುಬು ಆಗಿದ್ದು, ದೇಶದಲ್ಲಿ ನನೆಗುದಿಗೆ ಬಿದ್ದಿರುವ ಎಲ್ಲ ರೈಲ್ವೆ ಯೋಜನೆಯ ಕಾಮಗಾರಿಯನ್ನು ಪುನರ್ ಕೈಗೆತ್ತಿಕೊಂಡು ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿ ಮೂರು ವರ್ಷಗಳಲ್ಲಿ ಪೂರ್ಣಗಳಿಸುವ ಸಂಕಲ್ಪ ಮಾಡಿದೆ ಎಂದು ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ನಗರದ ರೈಲ್ವೆ ನಿಲ್ದಾಣ ಬಳಿ ನೈರುತ್ಯ ರೈಲ್ವೆ ಇಲಾಖೆ ವ್ಯಾಪ್ತಿಯ ಸಿಂಧನೂರು-ರಾಯಚೂರು 81 ಕಿ.ಮೀ ಹೊಸ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

j3tvkannada
ಸಿಂಧನೂರು-ರಾಯಚೂರು 81 ಕಿ.ಮೀ.ವರೆಗೆ ಕಾಮಗಾರಿಗೆ ಚಾಲನೆ ನೀಡಿದ್ದು, ಹಿರೇಕೊಟ್ನೇಕಲ್ವರೆಗೆ ಡಿಸೆಂಬರ್-2026ಕ್ಕೆ, ಮಾರ್ಚ್-2027ಕ್ಕೆ ಪೂರ್ಣಗೊಳಿಸಿ ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ರಸಗೊಬ್ಬರ ಸರಬರಾಜಿಗಾಗಿ ಗೂಡ್ಸ್ ರೈಲು ಬಿಡುವ ಜೊತೆಗೆ ಸಿಂಧನೂರು ರೈಲ್ವೆ ನಿಲ್ದಾಣದಲ್ಲಿರುವ ಎಲ್ಲ ಬಾಕಿ ಕೆಲಸಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು. ಬಳ್ಳಾರಿ, ಸಿರಗುಪ್ಪ, ಸಿಂಧನೂರು, ಮಸ್ಕಿ, ಲಿಂಗಸುಗೂರು ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಿದರೆ ಈ ಬಗ್ಗೆ ಸರ್ವೆ ಮಾಡಿಸಿ, ಮಂಜೂರಿಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಸಿಂಧನೂರು ತಾಲ್ಲೂಕಿಗೆ ಅತಿಹೆಚ್ಚು ರಸಗೊಬ್ಬರ ದಾಸ್ತಾನು ಬರುತ್ತಿದ್ದು, ಪ್ರತ್ಯೇಕ ಗೂಡ್ಸ್ ಯಾರ್ಡ್ ವ್ಯವಸ್ಥೆ ಕಲ್ಪಿಸಬೇಕು. ಪ್ರಸ್ತುತ ಹುಬ್ಬಳ್ಳಿ ಮತ್ತು ಬೆಂಗಳೂರಿಗೆ ತೆರಳುವ ರೈಲುಗಳಿಗೆ ಎಸಿ ಸ್ಲೀಪರ್ ಸೌಕರ್ಯ ಒದಗಿಸಬೇಕು ಜೊತೆಗೆ ಸಿಂಧನೂರು, ಬಳ್ಳಾರಿ, ಗುಂತಗಲ್ ಮೂಲಕ ಬೆಂಗಳೂರಿಗೆ ತೆರಳಲು ಮಾರ್ಗ ಬದಲಾಯಿಸಬೇಕು ಎಂದರು. ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿದರು. ರೈಲ್ವೆ ಇಲಾಖೆಯ ಸಿಎಸಿ ಅಜಯ್ ಶರ್ಮಾ, ಡಿಆರ್ಎಂ ಬೇಲಾ ಮೀನಾ, ಆರ್ಸಿಸಿಎಂ ಎಸ್.ಪಿ.ಶಾಸ್ತ್ರಿ, ಎಡಿಸಿಎಂ ಸಂತೋಷ ಹೆಗಡೆ, ಉಮಾ ಮಹೇಶ್ವರ್ ವೇದಿಕೆಯಲ್ಲಿ ಇದ್ದರು.