
ಮೈಸೂರು: ʻಆಪರೇಷನ್ ಸಿಂಧೂರ’ದ ಮೂಲಕ ಪಹಲ್ಗಾಮ್ನಲ್ಲಿ ಮೃತಪಟ್ಟವರಿಗೆ ನ್ಯಾಯ ದೊರಕಿಸಲಾಗಿದೆ. ನಮ್ಮ ಸೇನೆಗಳು ಉಗ್ರರಿಗೆ ತಕ್ಕ ಉತ್ತರ ನೀಡಿವೆ. ಉಗ್ರರ 9 ಶಿಬಿರಗಳ ಮೇಲೆ ದಾಳಿ ಮಾಡಿ 100ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ. ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನಲ್ಲಿ ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯದುವೀರ್, ಅಮೆರಿಕದ ಸೇನಾ ಮುಖ್ಯಸ್ಥರಿಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥರ ಮನವಿ ಮೇರೆಗೆ ಕದನ ವಿರಾಮ ಘೋಷಿಸಲಾಗಿದೆ. ಸಕಾಲದಲ್ಲಿ ಈ ಬಗ್ಗೆ ಪ್ರಧಾನಿ ಉತ್ತರಿಸುತ್ತಾರೆ. ಯುದ್ಧದ ಸಮಯದಲ್ಲಿ ಕೆಲವೊಂದು ಶಿಷ್ಟಾಚಾರ ಪಾಲನೆ ಇರುವುದರಿಂದ ಸರ್ವಪಕ್ಷಗಳ ಸಭೆ ಕರೆದು ಘೋಷಣೆ ಮಾಡಲು ಸಾಧ್ಯವಾಗಿಲ್ಲ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು, ಎಂದರು.

j3tvkannada
ಪಾಕಿಸ್ತಾನ ಹೊರತು ಪಡಿಸಿ ಜಗತ್ತಿನ ಎಲ್ಲಾ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಇವೆ. ಇಸ್ಲಾಮಿಕ್ ರಾಷ್ಟ್ರಗಳು ಕೂಡ ಉಗ್ರರ ಕೃತ್ಯಗಳನ್ನು ಖಂಡಿಸಿವೆ. ಪಾಕಿಸ್ತಾನದ ಭಯೋತ್ಪಾದಕ ಕೃತ್ಯಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ನಾವು ಪಾಕಿಸ್ತಾನದೊಳಕ್ಕೆ ನುಗ್ಗಿ ಹೊಡೆದಿದ್ದೇವೆ. ಯಾವುದೇ ಪರಿಸ್ಥಿತಿ ಎದುರಾದರೂ ಭಾರತ ಸರ್ವ ಸನ್ನದ್ದವಾಗಿದೆ ಎಂಬ ಸಂದೇಶವನ್ನು ಭಾರತ ವಿಶ್ವಕ್ಕೆ ರವಾನಿಸಿದೆ ಎಂದು ಯದುವೀರ್ ಮಾತನಾಡಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ಹಿಂದೂಗಳನ್ನೇ ಗುರುತಿಸಿ ಕೊಂದದ್ದನ್ನು ನಾವೆಲ್ಲರೂ ಗಮನಿಸಿದ್ದೇವೆ. ನಾವು ಅವರಿಗೆ ಸರಿಯಾದ ರೀತಿಯಲ್ಲೇ ಉತ್ತರ ನೀಡಿದ್ದೇವೆ. ನಾವೇನು ಸೇಡಿನ ಯುದ್ಧ ನಡೆಸಿಲ್ಲ, ಬದಲಾಗಿ ನಿಖರವಾಗಿ ಉಗ್ರರನ್ನೇ ಗುರುತಿಸಿ ಯುದ್ಧ ಮಾಡಿದ್ದೇವೆ.

j3tvkannada
ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿ ಕುರಿತು ನಡೆಯುತ್ತಿರುವ ಚರ್ಚೆ ವಿಚಾರವಾಗಿ , ಅಂದಿನ ಕಾಲಕ್ಕೆ ತಕ್ಕಂತೆ ಇಂದಿರಾ ಗಾಂಧಿ ಕೆಲಸ ನಿರ್ವಹಿಸಿದ್ದಾರೆ. ಇಂದಿನ ಕಾಲಕ್ಕೆ ತಕ್ಕಂತೆ ನರೇಂದ್ರ ಮೋದಿ ಅವರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಈ ವಿಚಾರದಲ್ಲಿ ಇಂದಿರಾಗಾಂಧಿ ಹಾಗೂ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿ ಮಾತನಾಡೋದು ಸರಿಯಲ್ಲ ಎಂದರು. ಆಪರೇಷನ್ ಸಿಂಧೂರ ಯಶಸ್ಸುಗೊಳಿಸಿದ ಸೈನಿಕರಿಗೆ ಗೌರವ ಸಲ್ಲಿಸಲು ಮೇ 16ರಂದು ಬೆಳಗ್ಗೆ 10 ಗಂಟೆಗೆ ಮೈಸೂರಲ್ಲಿ ತಿರಂಗಯಾತ್ರೆ ನಡೆಸುವುದಾಗಿ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಹೇಳಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಆರಂಭವಾಗುವ ತಿರಂಗಯಾತ್ರೆ ಇರ್ವಿನ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಚಿಕ್ಕಗಡಿಯಾರ ವೃತ್ತ, ದೇವರಾಜ ಅರಸು ರಸ್ತೆ ಮಾರ್ಗವಾಗಿ ಸಾಗಲಿದೆ. ‘ರಾಷ್ಟ್ರ ರಕ್ಷಣೆಗಾಗಿ ನಾಗರೀಕರು ಶೀರ್ಷಿಕೆಯಡಿ ತಿರಂಗ ಯಾತ್ರೆ ನಡೆಯಲಿದೆ. ಮಾಜಿ ಸೈನಿಕರು, ಎಲ್ಲಾ ಸಮಾಜದ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು, ದೇಶಾಭಿಮಾನಿಗಳು ಭಾಗವಹಿಸುವಂತೆ ಕೋರುತ್ತೇವೆ, ಎಂದರು. ಜೆ.ಡಿ.ಎ.ಸ್ ಮುಖಂಡರನ್ನು ಭೇಟಿ ಮಾಡಿ ಆಹ್ವಾನಿಸುತ್ತೇವೆ. ರಾಜ್ಯ ಉಸ್ತುವಾರಿಗಳಾದ ರಾಧಾಮೋಹನ್ ದಾಸ್ ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.