
ಮೈಸೂರು: ದೇವಾಲಯದ ಹೆಸರಿನಲ್ಲಿರುವ ಆಸ್ತಿಗಳ ಸಂರಕ್ಷಣೆಗೆ ಮುಂದಾಗಿರುವ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ, ಕಳೆದ 6 ತಿಂಗಳಿಂದ ನಡೆಸಿದ ಕಾರ್ಯಾಚರಣೆ ಫಲವಾಗಿ ಚಾಮುಂಡೇಶ್ವರಿ ದೇವಿ, ತ್ರಿಪುರಸುಂದರಮ್ಮಣ್ಣಿ ಹೆಸರಿನಲ್ಲಿದ್ದ ಅಂದಾಜು 50 ಕೋಟಿ ರೂ. ಬೆಲೆಬಾಳುವ 14 ಎಕರೆ ಜಾಗವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ತನ್ನ ವ್ಯಾಪ್ತಿಗೆ ಬರುವ 24 ದೇಗುಲಗಳ ಹೆಸರಿನಲ್ಲಿರುವ ಆಸ್ತಿಗಳ ಪರಿಶೀಲನೆಗೆ ಕೂಡಾ ಮುಂದಾಗಿದೆ.

ಮುಜರಾಯಿ ಇಲಾಖೆ ದೇವಾಲಯಗಳ ವ್ಯಾಪ್ತಿಗೆ ಬರುವ ಆಸ್ತಿಗಳನ್ನು ಸಂರಕ್ಷಿಸುವಂತೆ ಆದೇಶ ಹೊರಡಿಸಿದೆ. ಅದರಂತೆ ಕಾರ್ಯೋನ್ಮುಖವಾಗಿರುವಾಗಿದೆ. ಮೊದಲ ಹಂತದಲ್ಲಿ ಚಾಮುಂಡೇಶ್ವರಿ ದೇವಾಲಯ ಹಾಗೂ ಜ್ವಾಲಾಮುಖಿ ತ್ರಿಪುರಸುಂದರಮ್ಮಣ್ಣಿ ದೇವಸ್ಥಾನದ ವ್ಯಾಪ್ತಿಗೆ ಸೇರುವ ದೇಗುಲಗಳ ಕಾರ್ಯಾಚರಣೆಯಾಗಿದೆ.
ಚಾಮುಂಡೇಶ್ವರಿ ಹೆಸರಲ್ಲಿ 6.6 ಎಕರೆ ವಶ:
ಮೈಸೂರು ತಾಲೂಕು ವರುಣ ಹೋಬಳಿ ಹಡಜನ ಗ್ರಾಮದ ಚಿಕ್ಕೇಗೌಡನ ಹುಂಡಿಯಲ್ಲಿ ಸರ್ವೆ ನಂ. 81/4 ಮತ್ತು 81/5 ರಲ್ಲಿ 6 ಎಕರೆ 6 ಗುಂಟೆ ಜಾಗ ಚಾಮುಂಡೇಶ್ವರಿ ದೇವಾಲಯದ ಹೆಸರಿನಲ್ಲಿರುವುದು ರೆವಿನ್ಯೂ ಇಲಾಖೆಯಿಂದ ಪಡೆದ ದಾಖಲೆಗಳ ಪ್ರಕಾರ ಖಾತ್ರಿ ಪಡಿಸಿಕೊಳ್ಳಲಾಯಿತು. ಅದರ ಆಧಾರದಲ್ಲಿ ಕೆಲವರು ಅನಧಿಕೃತವಾಗಿ ಶೆಡ್ಗಳನ್ನು ನಿರ್ಮಿಸಿಕೊಂಡಿರುವುದನ್ನು ತೆರವುಗೊಳಿಸಲಾಗಿದೆ.
ತ್ರಿಪುರಸುಂದರಮ್ಮಣ್ಣಿ4.34 ಎಕರೆ ವಶ:
ವರುಣ ಹೋಬಳಿ ಸರಕಾರಿ ಉತ್ತನಹಳ್ಳಿಯ ಸರ್ವೆ ನಂ. 163ರಲ್ಲಿ4.34 ಎಕರೆ ಜ್ವಾಲಾಮುಖಿ ತ್ರಿಪುರಸುಂದರಮ್ಮಣ್ಣಿ ದೇವಸ್ಥಾನದ ಹೆಸರಿನಲ್ಲಿದೆ. ಕೆಲವು ಸ್ಥಳೀಯರು ಈ ಜಾಗದಲ್ಲಿಕೃಷಿ ಮಾಡುತ್ತಿದ್ದು, ಇದನ್ನು ವಶಕ್ಕೆ ಪಡೆಯಲಾಗಿದೆ. ಇದಲ್ಲದೆ ಉತ್ತನಹಳ್ಳಿ ಸರ್ವೆ ನಂ. 197/1 ರಲ್ಲಿಎರಡು ಎಕರೆ ಇದ್ದು, ಇದನ್ನು ತೆರವುಗೊಳಿಸಲಾಗುತ್ತಿದೆ. ಇದಲ್ಲದೇ ಹಡಜನ ಗ್ರಾಮದಲ್ಲಿ1.16 ಎಕರೆ ಜಾಗವಿರುವುದು ತಿಳಿದುಬಂದಿದ್ದು ದಾಖಲೆಗಳನ್ನು ಪರಿಶೀಲಿಸಿ ವಶಕ್ಕೆ ಪಡೆಯಲಾಗುತ್ತಿದೆ.
ಬೆಟ್ಟದಲ್ಲಿ 3.17 ಎಕರೆ ತೆರವು:
ಚಾಮುಂಡಿ ಬೆಟ್ಟದ ಮೇಲ್ಭಾಗದ ಮೈಸೂರು ತಾಲೂಕು ಚಾಮುಂಡಿಬೆಟ್ಟ ಗ್ರಾಮ, ಕಸಬಾ ಹೋಬಳಿ ಸರ್ವೆ ನಂಬರ್ 27ರಲ್ಲಿಒಟ್ಟು 5.06 ಎಕರೆ ಸರಕಾರಿ ಗೋಮಾಳವಿದೆ ಎಂದು ಗುರುತಿಸಲಾಗಿದೆ. ಇದರಲ್ಲಿ1.24 ಎಕರೆ ಜಾಗವನ್ನು ದೇವಾಲಯದ ಮೂಲ ಸೌಕರ್ಯಕ್ಕಾಗಿ ಮಂಜೂರು ಮಾಡಿದೆ. ಇದರಲ್ಲಿದಾಸೋಹ ಭವನ, ಕಲ್ಯಾಣ ಮಂಟಪ, ಅತಿಥಿಗೃಹ ನಿರ್ಮಿಸಲಾಗಿದೆ. ಗೆಸ್ಟ್ ಹೌಸ್, ಗೋಶಾಲೆ ಕಟ್ಟಲಾಗಿದೆ.
ಇನ್ನುಳಿದ 3.17 ಎಕರೆ ಜಾಗವನ್ನು ತೆರವುಗೊಳಿಸಲಾಗಿದೆ. ಇದನ್ನು ದೇವಸ್ಥಾನದ ಮೂಲ ಸೌಕರ್ಯಕ್ಕೆ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಈ ಜಾಗದ 5 ಗುಂಟೆ ಪ್ರದೇಶದಲ್ಲಿಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಉಳಿದುದನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಕೆಗೆ ಪಡೆಯಲಾಗುತ್ತಿದೆ.
ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿರುವ 14 ದೇವಾಲಯಗಳ ಆಸ್ತಿಗಳ ಪರಿಶೀಲನೆ ಆರಂಭಿಸಲಾಗಿದ್ದು, ಮೊದಲ ಹಂತದಲ್ಲಿ ಚಾಮುಂಡೇಶ್ವರಿ, ಉತ್ತನಹಳ್ಳಿ ತ್ರಿಪುರಸುಂದರಮ್ಮಣ್ಣಿ ಹೆಸರಿನ 14 ಎಕರೆ ಜಾಗ ವಶಕ್ಕೆ ಪಡೆದಿದ್ದೇವೆ. ಕಾರ್ಯಾಚರಣೆ ಮುಂದುವರಿಯಲಿದೆ.