
ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕೋಲಾರ ತಾಲೂಕು ಭೂ ದಾಖಲೆಗಳ ಇಲಾಖೆಯ ಸರ್ವೇ ಸೂಪರ್ವೈಸರ್ ಸುರೇಶ್ ಬಾಬುಗೆ ನಾಲ್ಕು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಲೋಕಾಯುಕ್ತ ದಾಳಿ ನಡೆಸಿದೆ. ಮಧ್ಯ ರಾತ್ರಿವರೆಗೂ ಮಾಲೂರು, ಕೋಲಾರ, ಹೊಸಕೋಟೆ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರ ಅಧಿಕೃತ ಗಳಿಕೆಗಿಂತ 145% ರಷ್ಟು ಅಂದರೆ ಸುಮಾರು 8.18 ಕೋಟಿ ರೂ.ಗೂ ಅಧಿಕ ಆಸ್ತಿ ಪತ್ತೆಯಾಗಿದೆ.

j3tvkannada
ಸುರೇಶ್ ಬಾಬು ಮತ್ತು ಅವರ ಅಪ್ತರ 6 ಕಡೆಗಳಲ್ಲಿ ದಾಳಿ ನಡೆದಿದ್ದು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯ ಲೋಕಾಯುಕ್ತ ಸಿಬ್ಬಂದಿಯನ್ನು ದಾಳಿಗೆ ಬಳಸಿಕೊಳ್ಳಲಾಗಿತ್ತು.
ದಾಳಿಯ ವೇಳೆ ಸುಮಾರು 30 ಲಕ್ಷ ರೂ. ಮೌಲ್ಯದ 3 ನಿವೇಶನಗಳು, 2.81 ಕೋಟಿ ರೂ. ಮೌಲ್ಯದ ಐದು ಮನೆಗಳು, 3.38 ಕೋಟಿ ರೂ. ಬೆಲೆಯ ಐದು ಕೃಷಿ ಭೂಮಿ ಸೇರಿದಂತೆ ಒಟ್ಟು 6.50 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಅದೇ ರೀತಿ 3 ಲಕ್ಷ ರೂ. ನಗದು ಹಣ, 18.24 ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ ಚಿನ್ನಾಭರಣ, 80 ಲಕ್ಷ ರೂ. ಬೆಲೆಯ 9 ವಾಹನಗಳು ಹಾಗೂ ಇತರೆ 66.87 ಲಕ್ಷ ರೂ. ಮೌಲ್ಯದ ವಸ್ತುಗಳು ಸೇರಿದಂತೆ ಒಟ್ಟು 1.68 ಕೋಟಿ ರೂ. ಚರಾಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
ಚರ ಮತ್ತು ಸ್ಥಿರಾಸ್ತಿಗಳ ಒಟ್ಟು ಮೊತ್ತ 8.18 ಕೋಟಿ ರೂ.ಗಳಾಗಿದ್ದು, ಇದು ಅವರ ಆದಾಯಕ್ಕಿಂತ 145% ರಷ್ಟು ಹೆಚ್ಚಾಗಿದೆ. ಇದನ್ನು ಆದಾಯ ಮೀರಿದ ಅಕ್ರಮ ಆಸ್ತಿ ಎಂದು ಪರಿಗಣಿಸಿ ಲೋಕಾಯುಕ್ತದಲ್ಲಿ ಕೇಸು ದಾಖಲಿಸಲಾಗಿದೆ. ಕೋಲಾರದಲ್ಲಿರುವ ಸುರೇಶ್ ಬಾಬು ಮನೆ ಮತ್ತು ಕಚೇರಿ, ಮಾಲೂರು ತಾಲೂಕು ನಿಡಘಟ್ಟದಲ್ಲಿರುವ ಅವರ ಮನೆ ಮತ್ತು ಜಮೀನುಗಳು ಹಾಗೂ ಸ್ನೇಹಿತರ ಮನೆ ಸೇರಿ 6 ಕಡೆಗಳಲ್ಲಿ ಗುರುವಾರ ಇಡೀ ದಿನ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ಸುರೇಶ್ ಬಾಬು ಅವರ ಇಬ್ಬರು ಅಣ್ಣಂದಿರ ಮನೆ, ತಮ್ಮ ವೈದ್ಯನ ಮನೆ, ಗೆಳೆಯನಾದ ನಿವೃತ್ತ ಪಿ.ಡಿ.ಒ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿತ್ತು. ನಾಲ್ಕು ತಿಂಗಳ ಹಿಂದೆಯಷ್ಟೆ ಸುರೇಶ್ ಬಾಬು ಮನೆ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು ನೂರಾರು ಸರ್ಕಾರಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದ ತನಿಖೆ ಇನ್ನೂ ಮುಂದುವರೆದಿರುವಾಗಲೇ ಆದಾಯ ಮೀರಿದ ಗಳಿಕೆ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಎರಡನೇ ದಾಳಿ ನಡೆಸಿದೆ.