
ಕೋಲಾರ: ಬಂಗಾರಪೇಟೆಯಲ್ಲಿ ಬಂಗಾರ ಮತ್ತು ಬೆಳ್ಳಿ ಆಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆರೋಪಿಯನ್ನು ಬಂಧಿಸಿರುವ ಪೊಲೀಸರು ಸುಮಾರು 4.17 ಲಕ್ಷ ಬೆಲೆ ಬಾಳುವ ಆಭರಣ ವಶಕ್ಕೆ ಪಡೆದಿದ್ದಾರೆ.

j3tvkannada
ಬಂಗಾರಪೇಟೆ ನಿವಾಸಿ ರುಕ್ಕಮ್ಮ ಬಂಧಿತ ಮಹಿಳೆ. ಆಕೆಯಿಂದ 43 ಗ್ರಾಂ ತೂಕದ ಚಿನ್ನ ಮತ್ತು 1 ಕೆ.ಜಿ 454 ಗ್ರಾಂ ಬೆಳ್ಳಿ ಆಭರಣವನ್ನು ವಶಕ್ಕೆ ಪಡೆದಿರುವ ಬಂಗಾರಪೇಟೆ ಠಾಣೆ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಬಂಗಾರಪೇಟೆ ವಾಸಿ ಲಕ್ಷ್ಮಿದೇವಮ್ಮ ಎಂಬುವವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಮೂರು ದಿನ ತವರು ಮನೆಗೆ ಹೋಗಿದ್ದರು. ಆಗ ಯಾರೋ ನಕಲಿ ಬೀಗವನ್ನು ಉಪಯೋಗಿಸಿ ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿದ್ದರು.
ಈ ಸಂಬಂಧ ಲಕ್ಷ್ಮಿದೇವಮ್ಮ ದೂರು ನೀಡಿದ್ದರು. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಏ.28 ರಂದು ಕಳ್ಳತನ ಪ್ರಕರಣ ದಾಖಲಾಗಿತ್ತು. ಕೇವಲ ಮೂರು ದಿನಗಳಲ್ಲಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಮಾಡಲು ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಹಾಗೂ ಡಿ.ವೈ.ಎಸ್ಪಿ ಎಸ್. ಪಾಂಡುರಂಗ ಅವರ ಮಾರ್ಗ ದರ್ಶನದಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆರ್.ದಯಾನಂದ್ ನೇತೃತ್ವದಲ್ಲಿ ಪಿ.ಎಸ್.ಐ ಪ್ರಕಾಶ್ ನರಸಿಂಗ್ ಮತ್ತು ತಂಡದವರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಬಂಗಾರಪೇಟೆ ಪಿ.ಎಸ್.ಐ ಪ್ರಕಾಶ್ ನರಸಿಂಗ್, ಸಿಬ್ಬಂದಿ ನಾಗೇಶ್, ಚಲಪತಿ, ಮಧುಕುಮಾರ್, ಸುನೀಲ್ ಮತ್ತು ಮುನೇಂದ್ರ ಅವರ ಕೆಲಸವನ್ನು ಎಸ್ಪಿ ಶಾಂತರಾಜು ಪ್ರಶಂಸಿಸಿದ್ದಾರೆ.