
ಹಾವೇರಿ: ಹಾನಗಲ್ನಿಂದ ವಿಶಾಲಗಡ್ಗೆ ಹೋಗುವ ಬಸ್ಸಿನ ಸೀಟಿನಲ್ಲಿಯೇ ಚಾಲಕ ನಯಾಜ್ ಮುಲ್ಲಾ ಅವರು ನಮಾಜ್ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ವಾಕರಸಾಸಂ) ಭದ್ರತಾ ವಿಭಾಗದ ಅಧಿಕಾರಿಗಳು ತನಿಖೆ ಆರಂಭಿಸಿದ್ದು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಲಾಗಿದೆ.

j3tvkannada
ಹಾನಗಲ್ ಡಿಪೊದಲ್ಲಿ ಕೆಲಸ ಮಾಡುತ್ತಿರುವ ಚಾಲಕ ನಯಾಜ್, ಬಸ್ಸಿನ ಸೀಟಿನಲ್ಲಿ ನಮಾಜ್ ಮಾಡಿರುವ ಸಂಗತಿ ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಭದ್ರತಾ ವಿಭಾಗದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅವರು ವರದಿ ನೀಡಿದ ಬಳಿಕ ಪರಿಶೀಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ವಾ.ಕ.ರ.ಸಾ.ಸಂ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಜಿ. ತಿಳಿಸಿದರು.
ಪ್ರಯಾಣಿಕನಿಂದ ವಿಡಿಯೊ ಚಿತ್ರೀಕರಣ: ಚಾಲಕ ನಯಾಜ್, ಹಾನಗಲ್ನಿಂದ ವಿಶಾಲಗಡಕ್ಕೆ ಹೋಗುವ (ಕೆಎ-27, ಎಫ್-0914) ಬಸ್ನಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಾಲಕ ಹಾಗೂ ನಿರ್ವಾಹಕ ಎರಡೂ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಅಪಘಾತ ರಹಿತ ಗಣನೀಯ ಸೇವೆಗಾಗಿ ನಯಾಜ್ ಅವರಿಗೆ ಚಿನ್ನದ ಪದಕವೂ ಲಭಿಸಿದೆ ಎಂದು ವಾ.ಕ.ರ.ಸಾ.ಸಂಸ್ಥೆ ಮೂಲಗಳು ಹೇಳಿವೆ.
ಇತ್ತೀಚೆಗೆ ವಿಶಾಲಗಡಕ್ಕೆ ಹೊರಟಿದ್ದ ಚಾಲಕ, ನಮಾಜ್ ಸಮಯದಲ್ಲಿ ಮಾರ್ಗಮಧ್ಯೆಯೇ ಬಸ್ ನಿಲ್ಲಿಸಿದ್ದರು. ಚಾಲಕನ ಹಿಂಬದಿಯ ಸೀಟಿನಲ್ಲಿದ್ದ ಪ್ರಯಾಣಿಕರನ್ನು ಎಬ್ಬಿಸಿ ಬೇರೆಡೆ ಕಳುಹಿಸಿದ್ದರು. ನಂತರ, ಅದೇ ಸೀಟಿನಲ್ಲಿ ಕುಳಿತು ನಮಾಜ್ ಮಾಡಿದ್ದರು. ಇದೇ ದೃಶ್ಯವನ್ನು ಪ್ರಯಾಣಿಕರೊಬ್ಬರು ಚಿತ್ರೀಕರಣ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ತಿಳಿಸಿದೆ.
ಸರ್ಕಾರಿ ಸಾರಿಗೆ ಬಸ್ನಲ್ಲಿ ಚಾಲಕ ನಮಾಜ್ ಮಾಡಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಚಾಲಕ ಈಗ ನಮಾಜ್ ಮಾಡಿದ್ದಾರೆ. ಮತ್ತೊಬ್ಬರು ಹೋಮ-ಹವನ ಮಾಡುತ್ತಾರೆ. ಸರ್ವ ಜನಾಂಗದವರು ಬಳಸುವ ಸಾರಿಗೆ ಬಸ್ನಲ್ಲಿ ಇಂಥ ಆಚರಣೆಗೆ ಕಡಿವಾಣ ಹಾಕಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ವಿಡಿಯೊ ಪೋಸ್ಟ್ ಮಾಡಿರುವ ಬಿ.ಜೆ.ಪಿ ಜಿಲ್ಲಾ ಘಟಕ ಈ ಚಾಲಕನ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.