
ಚಿತ್ರದುರ್ಗ: ಹೊಸದುರ್ಗ ತಾಲ್ಲೂಕು ರಾಜ್ಯದಲ್ಲೇ ಅತೀ ಹೆಚ್ಚು ‘ಸಿರಿಧಾನ್ಯ ಬೆಳೆಯುವ ನಾಡು ಎಂದು ಗುರುತಿಸಿಕೊಂಡಿದೆ. ಆದರೆ, ಅಲ್ಲಿ ಹೆಚ್ಚು ಬೆಳೆಯುವ ಸಾಮೆ ಬೆಲೆ ಪಾತಾಳಕ್ಕೆ ಕುಸಿದಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ಬಾರಿ ಉತ್ತಮ ಮಳೆಯಾಗುತ್ತಿದ್ದರೂ ಮತ್ತೆ ಸಿರಿಧಾನ್ಯ ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕೋಟೆನಾಡು ಭಿನ್ನ ಪರಿಸರಕ್ಕೆ ಹೆಸರುವಾಸಿಯಾಗಿದ್ದು, ಹೊಸದುರ್ಗ ತಾಲ್ಲೂಕು ಭಾಗದ ಕೆಂಪು ಮಣ್ಣು ಸರಿಧಾನ್ಯ ಬೆಳೆಗೆ ಹೇಳಿ ಮಾಡಿಸಿದಂತಿದೆ. ಬಹುತೇಕ ರೈತರು ಸಾಮೆ ಬೆಳೆ ಬಿತ್ತನೆ ಮಾಡುತ್ತಾರೆ. ಅಪಾರ ಪೋಷಕಾಂಶ ಹೊಂದಿರುವ ಇಲ್ಲಿಯ ಸಾಮೆ ರಾಜ್ಯ, ಹೊರರಾಜ್ಯಗಳಿಗೆ ರವಾನೆಯಾಗುತ್ತದೆ. ಪೂರ್ವ ಮುಂಗಾರು ಆರಂಭವಾಗುತ್ತಿದ್ದಂತೆ ಮೇ ಮೊದಲ ವಾರದಲ್ಲಿ ರೈತರು ಸಾಮೆ ಬಿತ್ತನೆ ಆರಂಭಿಸುತ್ತಾರೆ.

j3tvkannada
ಈ ಬಾರಿ ಪೂರ್ವ ಮುಂಗಾರು ಮಳೆ ಉತ್ತಮವಾಗಿದ್ದು, ಜಮೀನು ಬಿತ್ತನೆಗೆ ಸಿದ್ದಗೊಂಡಿದೆ. ಆದರೆ, ಕಳೆದ ವರ್ಷ ಸಾಮೆ ಬಿತ್ತನೆ ಮಾಡಲು ರೈತರಲ್ಲಿ ಇದ್ದ ಉತ್ಸಾಹ, ಸಂಭ್ರಮ ಈ ಬಾರಿ ಇಲ್ಲವಾಗಿದೆ. ಈಚೆಗೆ ಮಾರುಕಟ್ಟೆಯಲ್ಲಿ ಸಾಮೆ ಬೆಲೆ ಕನಿಷ್ಠ ಮಟ್ಟಕ್ಕೆ ಕುಸಿದಿರುವುದೇ ರೈತರ ಈ ನಿರಾಸಕ್ತಿಗೆ ಕಾರಣವಾಗಿದೆ. ಹೊಸದುರ್ಗ ತಾಲ್ಲೂಕಿನ ನೂರಾರು ರೈತರು ಕಳೆದ ವರ್ಷ ಬೆಳೆದ ಸಾಮೆ ಮಾರಾಟ ಮಾಡದೇ ಮನೆಯಲ್ಲಿ ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ. ಈಗ ಮತ್ತೆ ಸಾಮೆ ಬೆಳೆದರೆ ನಷ್ಟ ಮತ್ತಷ್ಟು ಹೆಚ್ಚುತ್ತದೆ ಎಂಬ ಭಯಕ್ಕೆ ರೈತರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪೂರ್ವ ಮುಂಗಾರು ಮಳೆ ಆರಂಭವಾಗಿದ್ದರೂ ರೈತರಲ್ಲಿ ಬಿತ್ತನೆಯ ಸಂಭ್ರಮ ಕಾಣದಾಗಿದೆ.