
ವಿಜಯನಗರ: ತಾಲ್ಲೂಕಿನ ವಿವಿಧ ರಸ್ತೆ ಬದಿಗಳಲ್ಲಿ ಬೆಳೆದು ನಿಂತಿರುವ ಹೊಂಗೆ ಮರದ ಕಾಯಿಗಳನ್ನು ಸಂಗ್ರಹಿಸಿ 8ರಿಂದ 10 ಕುಟುಂಬಗಳು ಬದುಕು ಕಟ್ಟಿಕೊಂಡಿವೆ.

j3tvkannada
ಹರಪನಹಳ್ಳಿ ತಾಲ್ಲೂಕು ನಜೀರ್ ನಗರದಿಂದ ಚಿಗಟೇರಿ ವರೆಗೂ, ಕ್ರಾಸ್ ನಿಂದ ಹರಪನಹಳ್ಳಿಗೆ ಬರುವ ರಸ್ತೆ, ಕೊಟ್ಟೂರು ರಸ್ತೆ, ಹೊಂಬಳಗಟ್ಟಿ ರಸ್ತೆಗಳಲ್ಲಿ ಅರಣ್ಯ ಇಲಾಖೆಯವರು ನೆಟ್ಟು ಪೋಷಿಸಿರುವ ತಮಾಲ ಗಿಡಗಳೀಗ ವೃಕ್ಷಗಳಾಗಿ ನಳನಳಿಸುತ್ತಿವೆ. ರಸ್ತೆ ಬದಿ ಓಡಾಡುವ ಜನರಿಗೆ ತಂಪಾದ ನೆರಳು, ತಣ್ಣನೆ ಗಾಳಿ ಕೊಡುತ್ತಿವೆ.
ಏರುತ್ತಿರುವ ತಾಪಮಾನಕ್ಕೆ ಬೇಸತ್ತು ವಿಶ್ರಾಂತಿಗಾಗಿ ಈ ಮರದ ನೆರಳಿನ ಆಶ್ರಯ ಪಡೆದರೆ ಬಿಳುಪು, ಪರ್ಪಲ್ ರೆಡ್, ನೀಲಿ ಬಣ್ಣದಲ್ಲಿ ಕಂಗೊಳಿಸುವ ಹೂವುಗಳಿಗೆ ಜೇನು ನೊಣಗಳು ಮುತ್ತಿಕ್ಕಿರುವ ದೃಶ್ಯ ಆಕರ್ಷಿಸುತ್ತದೆ. ಹಸಿರಿನಿಂದ ಕಂಗೊಳಿಸುವ ಮರಗಳು ಮನಸ್ಸಿಗೆ ಮುದ ನೀಡುತ್ತವೆ. ಬದಾಮಿಯಂತೆ ಕಾಣುವ ಇದರ ಬೀಜಗಳಿಗಾಗಿ ಈ ಭಾಗದಲ್ಲಿ ಬೆಳೆದ ಗಿಡಗಳ ಸುತ್ತಲೂ ಹಲವು ಕುಟುಂಬಗಳು ಕಾಯಿ ಸಂಗ್ರಹಿಸಿ, ಇದರಿಂದ ತಮ್ಮ ಜೀವನ ರೂಪಿಸಿಕೊಂಡಿವೆ. ಕೂಡ್ಲಿಗಿಯಿಂದ 30 ರಿಂದ 35 ಕಿ.ಮೀ. ದೂರದಲ್ಲಿರುವ ನಜೀರ್ ನಗರ ಕ್ರಾಸ್ನಿಂದ ಚಿಗಟೇರಿ ವರೆಗೆ ಆಕರ್ಷಿಸುವ ರಸ್ತೆ ಬದಿ ತಮಾಲ ವೃಕ್ಷ (ಹೊಂಗೆ) ಅಥವಾ ಬತ್ತಿ ಸೊಪ್ಪಿನ ಮರದ ನೆಡು ತೋಪಿನಲ್ಲಿ ಹೊಂಗೆ ಮರದ ಬೀಜಗಳು ಹೇರಳವಾಗಿ ದೊರೆಯುತ್ತವೆ.

j3tvkannada
ಹೊಂಗೆ ಬೀಜ ಸಂಗ್ರಹಿಸಲು ಬೈಕ್ ಮೇಲೆ ಬರುವ ದಂಪತಿ ನಿತ್ಯ 2-3 ಚೀಲ ತುಂಬಿಸುತ್ತಾರೆ. ಇವು ಮಾರಾಟ ಮಾಡಿದರೆ ಕೆ.ಜಿ.ಗೆ ₹60ರಿಂದ ₹70 ದೊರಕುತ್ತದೆ. ಇವುಗಳಿಗಾಗಿ ಕೂಡ್ಲಿಗಿಯ ಕೆಲ ಕುಟುಂಬಗಳು ಕೊಟ್ಟೂರು, ಉಜ್ಜಯಿನಿ, ಹರಪನಹಳ್ಳಿ, ಉಚ್ಚಂಗಿದುರ್ಗ ಭಾಗಗಳಲ್ಲಿ ನೆಟ್ಟಿರುವ ಹೊಂಗೆ ಮರದ ಸಾಲುಗಳಿಗೆ ಮುಗಿ ಬೀಳುತ್ತವೆ. ಏಪ್ರಿಲ್ ಮೇ ತಿಂಗಳಲ್ಲಿ ಹೂವು ಬಿಡುತ್ತದೆ. ಜೂನ್ ಜುಲೈ ತಿಂಗಳಲ್ಲಿ ಕಾಯಿಗಳು ಬರುತ್ತವೆ. ಈಗಾಗಲೇ ಸಾಕಷ್ಟು ಕಾಯಿಗಳು ಒಣಗಿವೆ. ಈಗ ಮರಗಳಲ್ಲಿ ಹೂವು ಇರುವ ಕಾರಣ ಕೋಲಿನಿಂದ ಹೊಡೆಯದೇ ಒಣಗಿದ ಕಾಯಿ ಮಾತ್ರ ಕೀಳುತ್ತಾರೆ.
ಬಾದಾಮಿ ಬೀಜದಂತೆ ಕಾಣುವ ಹೊಂಗೆ ಬೀಜಗಳಿಂದ ಉತ್ಪತ್ತಿಯಾಗುವ ಎಣ್ಣೆಗೆ ಜಾಗತಿಕ ಮಟ್ಟದಲ್ಲಿ ಉತ್ತಮ ಬೇಡಿಕೆಯಿದೆ. ಕಾಯಿಗೆ ದಪ್ಪನೆಯ ಸಿಪ್ಪೆ ಇರುತ್ತದೆ. ಅದರ ತೂಕ 5 ರಿಂದ 6 ಗ್ರಾಂನಷ್ಟಿರುತ್ತದೆ. ಒಳಗಿನ ಬೀಜ 1.3 ರಿಂದ 1.50 ಗ್ರಾಂ ಇರುತ್ತದೆ. ಇದು ಸಹ ಜನರ ಜೀವನಕ್ಕೆ ಆಧಾರವಾದ ಬಗೆಯೇ ಕುತೂಹಲಕಾರಿ ಎನ್ನುತ್ತಾರೆ ಸ್ಥಳೀಯರು.