
ರಾಮನಗರ: ರಾಗಿ ಖರೀದಿ ಕೇಂದ್ರಕ್ಕೆ ಸಂಸದ ಡಾ.ಸಿ.ಎನ್.ಮಂಜುನಾಥ್ ದಿಢೀರ್ ಭೇಟಿ ನೀಡಿ ಕೇಂದ್ರದಲ್ಲಿ ಆಗುತ್ತಿದ್ದ ಅಕ್ರಮ ಮತ್ತು ದಲ್ಲಾಳಿ ಹಾವಳಿಗೆ ಕಡಿವಾಣ ಹಾಕಲು 48 ಗಂಟೆಯೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

j3tvkannada
ನಗರದ ಬೈಪಾಸ್ ರಸ್ತೆ ಬಳಿ ಇರುವ ಎಪಿಎಂಸಿ ಮಾರುಕಟ್ಟೆಯಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರಕ್ಕೆ ಸಂಸದ ಡಾ.ಸಿ.ಎನ್.ಮಂಜುನಾಥ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳನ್ನು ಆಲಿಸಿ ಕೇಂದ್ರಕ್ಕೆ ಸಿಸಿಟಿವಿ ಅಳವಡಿಸುವಂತೆ ತಿಳಿಸಿದರು.
ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಬೆಳೆದಂತಹ ರೈತರಿಗಿಂತ ದಲ್ಲಾಳಿಗಳು, ಮಧ್ಯವರ್ತಿಗಳು, ತಮಿಳುನಾಡಿನಿಂದ ರಾಗಿ ಖರೀದಿ ಮಾಡಿ ರೈತರ ಹೆಸರಿನಲ್ಲಿ ರಾಗಿ ಕೇಂದ್ರಕ್ಕೆ ಮಾರಾಟ ಮಾಡುತ್ತಿದ್ದಾರೆ. ಆದರೆ, ರೈತರು ರಾಗಿ ತಂದರೆ, ನೀವು ಕಡಿಮೆ ರಾಗಿ ತಂದಿದ್ದೀರಿ ತೂಕ ಮಾಡಿ ಖರೀದಿ ಮಾಡಲಾಗುವುದಿಲ್ಲ ಎಂದು ಸಬೂಬು ಹೇಳಿ ವಾಪಸ್ ಕಳಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆ ಹಿನ್ನೆಲೆಯಲ್ಲಿ ಸಂಸದರು ರಾಗಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳು ಹಾಗೂ ರೈತರಿಂದ ಅಲ್ಲಿನ ವಸ್ತುಸ್ಥಿತಿ ಮತ್ತು ರೈತರ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡರು.
ದಲ್ಲಾಳಿಗಳು ಗುಣಮಟ್ಟ ಇಲ್ಲದ ರಾಗಿಯನ್ನು ಖರೀದಿ ಮಾಡಿ ರೈತರ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಅಕ್ರಮಕ್ಕೆ ಇಲ್ಲಿನ ಕೆಲ ಅಧಿಕಾರಿಗಳು ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪಗಳು ವ್ಯಕ್ತವಾದವು. ಈ ವೇಳೆ ದಿಶಾ ಕಮಿಟಿ ಸದಸ್ಯೆ ಶೋಭಾ, ಗ್ರಾಮ ಪಂಚಾಯಿತಿ ಸದಸ್ಯ ಕುಮಾರಸ್ವಾಮಿ ಮಾತನಾಡಿ, ದಲ್ಲಾಳಿಗಳು ರಾಗಿ ಕೇಂದ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲವೂ ಸಲೀಸಾಗಿ ನಡೆಯುತ್ತಿದೆ ಎಂದು ಮಾಹಿತಿ ನೀಡಿ ಜಿಲ್ಲಾಧಿಕಾರಿಗಳನ್ನು ದಾರಿ ತಪ್ಪಿಸಿದ್ದಾರೆ ಎಂದು ಸಂಸದರ ಗಮನಕ್ಕೆ ತಂದರು.
ರಾಗಿ ಬೆಳೆದ ರೈತರು ಟ್ರ್ಯಾಕ್ಟರ್, ಟೆಂಪೋಗಳನ್ನು ಬಾಡಿಗೆಗೆ ಪಡೆದು ರಾಗಿ ತುಂಬಿಕೊಂಡು ಬಂದರೆ ತೂಕ ಮಾಡದೆ ಎರಡು ಮೂರು ದಿನ ಕಳೆದರೂ ರಾಗಿ ಖರೀದಿ ಮಾಡದೆ ವಿಳಂಬ ಮಾಡುತ್ತಾರೆ. ಇದರಿಂದ ರೈತರು ದುಪ್ಪಟ್ಟು ಬಾಡಿಗೆ ನೀಡಬೇಕಾಗುತ್ತದೆ ಎಂದರು. ರಾಗಿ ಕೇಂದ್ರದಲ್ಲಿನ ಸಮಸ್ಯೆಗಳನ್ನು ಆಲಿಸಿದ ಸಂಸದರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತಮಿಳುನಾಡಿನಿಂದ ಕಡಿಮೆ ಬೆಲೆ ರಾಗಿ ತಂದು ನಮ್ಮ ರಾಜ್ಯದ ಖರೀದಿ ಕೇಂದ್ರಕ್ಕೆ ಹಾಕುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಹಾಗಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ರಾಗಿ ಖರೀದಿ ಕೇಂದ್ರದ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಮಧ್ಯವರ್ತಿಗಳ ಮೇಲೆ ನಿಗಾ ವಹಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ರಾಗಿ ಮಾರಾಟ ಮಾಡುವವರ ಗುರುತಿನ ಚೀಟಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಮಾಗಡಿ, ಕನಕಪುರ, ಹಾರೋಹಳ್ಳಿ ಸೇರಿದಂತೆ ಜಿಲ್ಲೆಯಲ್ಲಿ ಒಂದು ಲಕ್ಷ ಕ್ವಿಂಟಲ್ಗೂ ಹೆಚ್ಚು ರಾಗಿ ಖರೀದಿಗೆ ರೈತರು ನೋಂದಣಿ ಮಾಡಿದ್ದಾರೆ. ಇಲ್ಲಿ ಖರೀದಿಯಾಗುವ ರಾಗಿಯನ್ನು ಆನೇಕಲ್ ಗೋದಾಮಿಗೆ ಸಾಗಣೆ ಮಾಡಲಾಗುತ್ತಿದೆ. ಇದರಿಂದ ರೈತರಿಂದ ರಾಗಿ ಖರೀದಿ ವಿಳಂಬವಾಗುತ್ತಿದೆ. ಜೊತೆಗೆ ಸಾಗಾಣೆ ವೆಚ್ಚವನ್ನು ಸರ್ಕಾರ ಹೆಚ್ಚು ಭರಿಸಬೇಕು. ಹಾಗಾಗಿ ಜಿಲ್ಲೆಯಲ್ಲೇ ಒಂದು ರಾಗಿ ದಾಸ್ತಾನು ಕೇಂದ್ರವನ್ನು ಮಾಡಲು ಉಗ್ರಾಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ರೈತರಿಂದ ರಾಗಿ ಖರೀದಿ ಮಾಡುತ್ತಿರುವುದು ಕೇಂದ್ರ ಸರ್ಕಾರದ ಮಹತ್ತರ ಯೋಜನೆ. ರೈತರಿಗೆ ಅನುಕೂಲವಾಗಲಿ ಎಂದು ಪ್ರೋತ್ಸಾಹ ಧನ ನೀಡಿ ರಾಗಿ ಖರೀದಿ ಮಾಡುತ್ತಿದೆ. ರೈತರಿಗೆ ಅನುಕೂಲವಾಗುವ ಈ ಯೋಜನೆ ಮಧ್ಯವರ್ತಿಗಳಿಂದ ರೈತರಿಗೆ ಅನ್ಯಾಯ ಆಗಬಾರದು, ಇದರ ಅನುಕೂಲ ನೈಜವಾದ ರೈತರಿಗೆ ಸಿಗಬೇಕಿದೆ ಎಂದರು. ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಹಾರೋಹಳ್ಳಿ ರಾಗಿ ಖರೀದಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಕೇಂದ್ರದ ವ್ಯವಸ್ಥಾಪಕರು ಕನಕಪುರದಲ್ಲಿ, ಕೆಲಸ ನಿರ್ವಹಿಸಬೇಕಾದ ಕೇಂದ್ರದ ವ್ಯವಸ್ಥಾಪಕರು ಹಾರೋಹಳ್ಳಿ ರಾಗಿ ಖರೀದಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಪರಿಶೀಲನೆ ವೇಳೆ ಸಂಸದರ ಗಮನಕ್ಕೆ ಬಂದಿತು. ಸಂಸದರು ತಕ್ಷಣವೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಯಾವ ಯಾವ ಅಧಿಕಾರಿಗಳು ಎಲ್ಲಿ ಕೆಲಸ ಮಾಡಬೇಕೋ ಅಲ್ಲೇ ಕೆಲಸಕ್ಕೆ ನಿಯೋಜನೆ ಮಾಡಬೇಕೆಂದು ಸೂಚನೆ ನೀಡಿದರು.