
ರಾಯಚೂರು: ಗುಜರಾತ್, ರಾಜಸ್ಥಾನ, ತೆಲಂಗಾಣದಿಂದ ರಾಜ್ಯದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಮಣ್ಣಿನ ಮಡಿಕೆಗಳ ಮಾರಾಟ ಬಿಸಿಲೂರಲ್ಲಿ ಭರ್ಜರಿಯಾಗಿ ನಡೆದಿದೆ. ಬಿಸಿಲೂರಲ್ಲಿ ಬೇಸಿಗೆಯಲ್ಲೇ ಪ್ರತಿ ವರ್ಷ ₹ 75 ಲಕ್ಷದಿಂದ ₹ 80 ಲಕ್ಷದವರೆಗೂ ವಹಿವಾಟು ನಡೆಯುತ್ತಿದೆ.

j3tvkannada
ಜಿಲ್ಲೆಯಲ್ಲಿ ನಾಲ್ಕು ತಿಂಗಳು ಬಿಸಿಲ ಧಗೆ ಹಾಗೂ ಸೆಕೆ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ರಾಯಚೂರು ನಗರದಲ್ಲೇ 20 ಕುಂಬಾರರು ದೊಡ್ಡಮಟ್ಟದಲ್ಲಿ ವ್ಯಾಪಾರು ವಹಿವಾಟು ನಡೆಸಿದ್ದು, ಜಿಲ್ಲೆಯ ಜನರಿಗೆ ಎಲ್ಲ ಬಗೆಯ ಮಣ್ಣಿನ ಮಡಿಕೆಗಳನ್ನು ತಂದು ಪೂರೈಸುತ್ತಿದ್ದಾರೆ.
ವಿದ್ಯುತ್ ಕೈಗೊಟ್ಟಾಗ ರೆಫ್ರಿಜಿರೇಟರ್ನಲ್ಲೂ ತಣ್ಣನೆ ನೀರು ಸಿಗುವುದಿಲ್ಲ. ಮನೆ ಮಂದಿಗೆಲ್ಲ ಅಧಿಕ ಪ್ರಮಾಣದಲ್ಲಿ ಕುಡಿಯುವ ನೀರು ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಶ್ರೀಮಂತರು ನೋಡಲು ಚೆಂದ ಇರುವ ಹಾಗೂ ಆಕರ್ಷಕ ಮಣ್ಣಿನ ಮಡಿಕೆಗಳನ್ನೇ ಕೊಂಡುಕೊಳ್ಳುತ್ತಾರೆ. ಬಡವರು ಸಹ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಮಡಿಕೆಗಳನ್ನು ಖರೀದಿಸುತ್ತಿದ್ದಾರೆ.

j3tvkannada
ರಾಯಚೂರಲ್ಲಿ ಏಪ್ರಿಲ್ ಮುಗಿತು ಇನ್ನೇನು ಬಿಸಿಲು ಕಡಿಮೆ ಆಯಿತು ಎನ್ನುವ ಹಾಗೆಯೇ ಇಲ್ಲ. ಮೇ ಹಾಗೂ ಜೂನ್ ಅಂತ್ಯದವರೆಗೂ ಜಿಲ್ಲೆಯಲ್ಲಿ ಬಿಸಿಲ ಧಗೆ ಇರುತ್ತದೆ. ವ್ಯಾಪಾರ ಸ್ವಲ್ಪ ಕಡಿಮೆಯಾದರೂ ಮಣ್ಣಿನ ಗಡಿಗೆಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಜನ ಈಗಲೂ ಮಡಿಕೆಗಳನ್ನು ಕೊಂಡೊಯ್ಯುತ್ತಿದ್ದಾರೆ.
ಗುಜರಾತಿನ ಮಣ್ಣಿನ ಮಡಿಕೆಗಳು ನೋಡಲು ಹೆಚ್ಚು ಆಕರ್ಷಕವಾಗಿರುವ ಕಾರಣ ₹ 300ರಿಂದ 350ರ ವರೆಗೆ ಮಾರಾಟವಾಗುತ್ತಿವೆ. ತೆಲಂಗಾಣದ ನಾರಾಯಣಪೇಟೆಯ ಮಡಿಕೆಗಳು ಈ ಭಾಗದಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿವೆ. ಅವು ₹200ರಿಂದ ₹ 250ಕ್ಕೆ ಹಾಗೂ ಕಲರಗಿಯ ಮಡಿಕೆಗಳು ₹200ರಿಂದ 250ಕ್ಕೆ ಮಾರಾಟವಾಗುತ್ತಿವೆ. ಕಲಬುರಗಿಯ ಮಡಿಕೆಗಳು ಕಪ್ಪು ಬಣ್ಣದ್ದಾಗಿವೆ. ಸ್ವಲ್ಪ ಬೇಡಿಕೆ ಕಡಿಮೆ. ಯಾದಗಿರಿ ಜಿಲ್ಲೆಯಲ್ಲಿ ಮಾಡಿದ ಮಣ್ಣಿನ ಮಡಿಕೆಗಳು ಪೂರ್ಣ ಮಾನವ ನಿರ್ಮಿತವಾಗಿವೆ. ಇವುಗಳಲ್ಲಿ ನೀರು ಹೆಚ್ಚು ತಂಪಾಗಿರುತ್ತದೆ. ಜನ ಇವುಗಳನ್ನು ಕೇಳಿ ಖರೀದಿಸುತ್ತಾರೆ. ಈ ವರ್ಷ ವ್ಯಾಪಾರವೂ ಚೆನ್ನಾಗಿ ಆಗಿದೆ ಎಂದು ಮಾರಾಟಗಾರರು ಹೇಳುತ್ತಾರೆ.
ಪ್ರತಿ ವರ್ಷ ಗುಜರಾತಿನಿಂದ 2,500 ಮಣ್ಣಿನ ಮಡಿಕೆಗಳನ್ನು ಕಂಟೇರ್ನಲ್ಲಿ ತರುತ್ತೇನೆ. ವಾಹನ ಬಾಡಿಗೆಯೇ ₹ 1 ಲಕ್ಷ ಆಗುತ್ತದೆ. ನಾನೇ 3500ರಿಂದ 4 ಸಾವಿರ ಮಡಿಕೆಗಳನ್ನು ಮಾರಾಟ ಮಾಡಿರುವೆ. ಜಿಲ್ಲೆಯಲ್ಲಿ ಮಣ್ಣಿನ ಮಡಿಕೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆಧುನಿಕ ಉಪಕರಣ ಬಳಿಸಿ ಜಿಲ್ಲೆಯಲ್ಲೇ ತಯಾರು ಮಾಡಿದರೆ ಕುಂಬಾರರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮಾನ್ವಿಯ ಮಣ್ಣಿನ ಗಡಿಗೆಗಳ ವ್ಯಾಪಾರಿ ವೀರೇಶ ತಿಳಿಸಿದರು. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕುಂಬಾರರಿಗೆ ಆಧುನಿಕ ಉಪಕರಣಗಳನ್ನು ಬಳಸಿ ಮಡಿಕೆಗಳನ್ನು ತಯಾರಿಸುವ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯ ಕುಂಬಾರರಿಗೂ ತರಬೇತಿ ಕೊಟ್ಟರೆ ಅವರ ಬದುಕಿಗೆ ಅನುಕೂಲವಾಗಲಿದೆ. ಸಂಬಂಧಪಟ್ಟ ಇಲಾಖೆಯವರು ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.