
ಮಂಡ್ಯ: ಗ್ರಾಮ ಪಂಚಾಯಿತಿಯಲ್ಲಿ ನಿರ್ವಹಿಸಲಾಗುತ್ತಿರುವ ಬೀದಿದೀಪ, ಕುಡಿಯುವ ನೀರಿನ ಕೊಳವೆಬಾವಿಗಳಿಗೆ ಬಳಕೆ ಮಾಡುವ ವಿದ್ಯುತ್ ಬಿಲ್ ಅನ್ನು ನಿಗದಿತವಾಗಿ ಪಾವತಿ ಮಾಡಬೇಕು ಎಂದು ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಸೂಚಿಸಿದರು.

j3tvkannada
ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಡನೆ ಸಮಾಲೋಚನಾ ಸಭೆ ನಡೆಸಿ ಮಾತನಾಡಿದರು. ವಿದ್ಯುತ್ ಬಿಲ್ ಅನ್ನು ಸರ್ಕಾರ ರೀಕನ್ಸಿಲೇಷನ್ (ಹೊಂದಾಣಿಕೆ) ಮಾಡಿಸುತ್ತದೆ ಎಂಬ ಧೋರಣೆಯನ್ನು ಬಿಡಬೇಕು ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹಳಷ್ಟು ನಿರುಪಯುಕ್ತ ಬೋರ್ವೆಲ್ಗಳಿರುತ್ತವೆ. ಅವುಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ. ಕೆಲವು ಬಾರಿ ಹಳೆಯ ವಿದ್ಯುತ್ ಬಿಲ್ಗಳ ಮೊತ್ತ ಸೇರಿಕೊಂಡು ಬಿಲ್ ಬರುತ್ತಿರುತ್ತದೆ. ಪರಿಶೀಲಿಸಿ ಹಣ ಪಾವತಿ ಮಾಡಿ ಎಂದು ಕಿವಿಮಾತು ಹೇಳಿದರು. ಸಭೆಯಲ್ಲಿ ಹಾಜರಿದ್ದ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಿದರು. ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಣಕಾಸು ಆಯೋಗ ಕಳುಹಿಸಿರುವ ಪ್ರಶ್ನಾವಳಿ ಕುರಿತ ಮಾಹಿತಿಯನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.
ಪಂಚಾಯಿತಿ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯಾಚರಣೆ, ಹುದ್ದೆಗಳು, ಆಯವ್ಯಯ, ವೆಚ್ಚಗಳ ವಿವರ ರಾಜ್ಯ ಮತ್ತು ಕೇಂದ್ರ ಹಣಕಾಸು ಆಯೋಗದ ಅನುದಾನ, ಹಂಚಿಕೆ, ಬಿಡುಗಡೆ, ಮಾಡಲಾದ ವೆಚ್ಚ ಕುರಿತ ವಿವರವನ್ನು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಧನುಷ್ ಅವರು ವಿವರಿಸಿದರು. ಸಭೆಯಲ್ಲಿ ಮಂಡ್ಯ ನಗರಸಭೆ ಅಧ್ಯಕ್ಷ ನಾಗೇಶ್, 5ನೇ ಹಣಕಾಸು ಆಯೋಗದ ಸದಸ್ಯರಾದ ಆರ್.ಎಸ್. ಪೋಂಡೆ, ಮಹಮ್ಮದ್ ಸನಾಉಲ್ಲಾ, ಕಾರ್ಯದರ್ಶಿ ಆರ್. ಸ್ನೇಹಲ್, ಸಮಾಲೋಚಕ ಕೆಂಪೇಗೌಡ, ಸಿ.ಜಿ. ಸುಪ್ರಸನ್ನ, ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳಾದ ಕೆ. ಯಾಲಕ್ಕಿಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾಯಣ್ಣಗೌಡ ಉಪಸ್ಥಿತರಿದ್ದರು. ನಿರುಪಯುಕ್ತ ಬೋರ್ವೆಲ್ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಜಿಪಂ, ತಾಪಂಗೆ ಪ್ರತ್ಯೇಕ ನಿಯಮ ರೂಪಿಸಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ.
ಅನುದಾನ ಬಳಕೆ: ನಿಯಮ ಸಡಿಲಿಕೆಗೆ ಮನವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಮಾತನಾಡಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಯಿಂದ ಯೋಜನೆ ರೂಪಿಸಲು ಬೇರೆ ನಿಯಮಗಳಿದ್ದರೆ ಉತ್ತಮ. ಎರಡು ಒಂದೇ ರೀತಿಯಾದರೆ ಡುಪ್ಲಿಕೇಷನ್ ಆಗುವ ಸಾಧ್ಯತೆ ಇರುತ್ತದೆ. ಕುಡಿಯುವ ನೀರಿನ ಘಟಕ ರಸ್ತೆ ಸೇರಿದಂತೆ ವಿವಿಧ ಆಸ್ತಿಗಳ ನಿರ್ವಹಣೆಗೆ ಅವಕಾಶ ನೀಡಬೇಕು ಎಂದರು. ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುದಾನ ಬಳಕೆ ಮಾಡುವ ಸಂದರ್ಭದಲ್ಲಿ ಕೆಲವು ಸ್ಥಳಗಳಲ್ಲಿ ಪರಿಶಿಷ್ಟ ಜಾತಿ ಪಂಗಡದ ಜನಾಂಗದವರ ಜನಸಂಖ್ಯೆ ಕಡಿಮೆ ಇರುತ್ತದೆ, ಕೆಲವು ಕಡೆ ಹೆಚ್ಚಿರುತ್ತದೆ. ಹೆಚ್ಚು ಜನಸಂಖ್ಯೆ ಇರುವ ಕಡೆ ಕಡಿಮೆ ಜನಸಂಖ್ಯೆ ಇರುವ ಕಡೆ ಬಳಕೆಯಾಗದೆ ಉಳಿಕೆಯಾಗುವ ಅನುದಾನ ಬಳಕೆಗೆ ಸಡಲಿಕೆ ಮಾಡಿಕೊಡಬೇಕು ಎಂದರು. ರಸ್ತೆ ಅಭಿವೃದ್ಧಿಗೆ ಕೇವಲ ಶೇ 10ರ ಅನುದಾನ ಬಳಕೆಗೆ ಅವಕಾಶವಿದೆ. ಆದರೆ ಇದು ಸಾಕಾಗುತ್ತಿಲ್ಲ ಹೆಚ್ಚಿನ ಹಣ ಬಳಕೆಗೆ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದರು.