
ಮೈಸೂರು: ವಾಜಮಂಗಲ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕ ಹಾಗೂ ಪ್ಲೆಕ್ಸ್ಗೆ ಮಲ ಬಳಿದಿರುವ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿ ಮಂಗಳವಾರ ಗ್ರಾಮದಿಂದ ನಗರದ ಸಿದ್ದಾರ್ಥ ನಗರದ ಬುದ್ಧನ ಪ್ರತಿಮೆವರೆಗೆ ದಲಿತ ಸಂಘಟನೆಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು.

j3tvkannada
ಡಾ.ಬಿ.ಆರ್.ಅಂಬೇಡ್ಕರ್ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಮುಖಂಡರು, ಕಾರ್ಯಕರ್ತರು ಹೆಜ್ಜೆ ಹಾಕಿದರು. ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳದೆ ಪೊಲೀಸ್ ಇಲಾಖೆ ಹಾಗೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಬೇರೆ ಪ್ರಕರಣಗಳಲ್ಲಿ ಕೃತ್ಯ ನಡೆದ 3 ದಿನದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚುತ್ತಾರೆ. ಆದರೆ, ವಾಜಮಂಗಲ ಪ್ರಕರಣ ನಡೆದ 12 ದಿನವಾದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಇದರ ಹಿಂದೆ ಷಡ್ಯಂತ್ರವಿದೆ. ಕಿಡಿಗೇಡಿಗಳನ್ನು ಬಂಧಿಸಿ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಸಿಂಧುವಳ್ಳಿಯಲ್ಲೂ ಜನವರಿಯಲ್ಲಿ ಅಂಬೇಡ್ಕರ್ ನಾಮಫಲಕ ವಿರೂಪಗೊಳಿಸಲಾಗಿತ್ತು.
ಮೂರು ತಿಂಗಳಾದರೂ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ದಲಿತರು, ಶೋಷಿತರೆಂದರೆ ಇಷ್ಟೊಂದು ನಿರ್ಲಕ್ಷ್ಯವೇ? ನ್ಯಾಯಯುತವಾಗಿ ಬದುಕಲು ಅವಕಾಶವಿಲ್ಲವೆ, ಎಂದು ಪ್ರಶ್ನಿಸಿದರು. ಸಂಸದ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, ಸಮಾಜದಲ್ಲಿ ವಿಷ ಬೀಜ ಬಿತ್ತಲು ಜಾತಿವಾದಿ ಹಾಗೂ ಕೋಮುವಾದಿ ಶಕ್ತಿಗಳು ಕೆಲಸ ಮಾಡುತ್ತಿವೆ. ಎಲ್ಲಾ ಜಾತಿಯವರು ಸಾಮರಸ್ಯದಿಂದಿದ್ದ ವಾಜಮಂಗಲ ಗ್ರಾಮದಲ್ಲಿ ಒಡಕು ಮೂಡಿಸಲಾಗಿದೆ ಎಂದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಘಟನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿದ್ದು, ವಾರದೊಳಗೆ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಿದರು. ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಲೇಖಕ ಸಿದ್ದಸ್ವಾಮಿ, ಮುಖಂಡರಾದ ಶಂಭುಲಿಂಗಸ್ವಾಮಿ, ಆಲಗೂಡು ಶಿವಕುಮಾರ್, ಮಣಿಯಯ್ಯ, ಕಲ್ಲಹಳ್ಳಿ ಕುಮಾರ್, ಹಾರೋಹಳ್ಳಿ ಸುರೇಶ್, ಮಲ್ಲಹಳ್ಳಿ ನಾರಾಯಣ, ಬನ್ನಳ್ಳಿ ಸೋಮಣ್ಣ, ನಗರ್ಲೆ ವಿಜಯಕುಮಾರ್, ಚೆನ್ನಯ್ಯ, ಭೀಮರಾಜ್, ಶಿವು, ರಾಜಣ್ಣ, ದೂರ ನಂದೀಶ್, ಚಿನ್ನಸ್ವಾಮಿ, ಸುರೇಶ್, ಮಂಜು ಪಾಲ್ಗೊಂಡಿದ್ದರು.