
ರಾಮನಗರ: ಚನ್ನಪಟ್ಟಣ ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ತಾಲ್ಲೂಕು ಮುಜರಾಯಿ ಸಂಘದ ವತಿಯಿಂದ ಮೇ 2ರಂದು ನಗರದ ಶತಮಾನೋತ್ಸವ ಭವನದಲ್ಲಿ ತಾಲ್ಲೂಕು ಅರ್ಚಕರ ವಾರ್ಷಿಕ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಟಿ. ವೆಂಕಟೇಶ್ ತಿಳಿಸಿದರು.

j3tvkannada
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಸಿ.ಪಿ.ಯೋಗೇಶ್ವರ್ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. ತಹಶೀಲ್ದಾರ್ ನರಸಿಂಹಮೂರ್ತಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಬಿ.ಟಿ.ವೆಂಕಟೇಶ್, ಡಾ.ಜಿ.ರವೀಂದ್ರಕುಮಾರ್, ಇತರರು ಭಾಗವಹಿಸುವರು ಎಂದು ತಿಳಿಸಿದರು.
ಸಮಾವೇಶದಲ್ಲಿ ಅರ್ಚಕರ ಬೇಡಿಕೆಗಳಾದ ತಸ್ತಿಕ್ ಹಣವನ್ನು ನೇರವಾಗಿ ಅರ್ಚಕರ ಖಾತೆಗೆ ವರ್ಗಾವಣೆ ಮಾಡಬೇಕು. ಅರ್ಚಕರು ಮರಣಹೊಂದಿದ್ದಲ್ಲಿ ಅವರ ಕುಟುಂಬದವರಿಗೆ ₹2 ಲಕ್ಷ ಪರಿಹಾರ ನೀಡಬೇಕು. ಅರ್ಚಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸರ್ಕಾರದಿಂದ ಸೌಲಭ್ಯ ದೊರಕಿಸಿಕೊಡಬೇಕು.
ತಾಲ್ಲೂಕಿನಲ್ಲಿ ಸಿ ಮತ್ತು ಬಿ ದೇವಾಲಯಗಳ ಜೀರ್ಣೋದ್ದಾರ ಮತ್ತು ಪುನರ್ ಅಷ್ಟಬಂಧನ ಮಾಡಿಸುವುದು. ಧಾರ್ಮಿಕ ದತ್ತಿ ದೇವಾಲಯದ ಅರ್ಚಕರಿಗೆ ವಸತಿ ನಿಲಯ ಕಟ್ಟಿಸಲು ಹಣ ಬಿಡುಗಡೆ ಮಾಡಲು ಒತ್ತಾಯಿಸಲಾಗುವುದು ಎಂದರು.
ತಾಲ್ಲೂಕಿನ ದೇವಾಲಯಗಳಲ್ಲಿ ಹುಂಡಿ ಇರುವ ಮತ್ತು ಅಭಿವೃದ್ಧಿ ಹೊಂದಿರುವ ದೇವಾಲಯಗಳನ್ನು ಗುರುತಿಸಿ ಸಿಸಿ ಕ್ಯಾಮೆರಾ ಅಳವಡಿಸಿವುದು. ತಾಲ್ಲೂಕಿನ ಅರ್ಚಕರ ಬಾಕಿ ಇರುವ ತಸ್ತಿಕ್ ಹಣವನ್ನು ಬಿಡುಗಡೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಭಾರಧ್ವಜ್, ಖಜಾಂಚಿ ಪರಮೇಶ್ವರ್, ಪದಾಧಿಕಾರಿಗಳಾದ ಶ್ರೀನಿಧಿ ಅಯ್ಯಂಗಾರ್, ಭಾರದ್ವಾಜ್, ಚಂದ್ರಶೇಖರ್, ವೈ.ವಿ.ರಾಘವೇಂದ್ರ, ಪಿ.ಕೆ.ವೆಂಕಟೇಶಮೂರ್ತಿ, ನಾಗೇಶ್ ರಾವ್, ಚಂದ್ರಶೇಖರ್, ನಿಂಗಪ್ಪ, ವಿಜಯ್ ಕುಮಾರ್, ನಾಗೇಂದ್ರ, ಕೆ.ಆರ್.ರಾಮಸ್ವಾಮಿ, ಇತರರು ಹಾಜರಿದ್ದರು.