
ಮೈಸೂರು: ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಸಮೀಪ ₹1.41 ಕೋಟಿ ವೆಚ್ಚದ ಯುದ್ಧ ಸ್ಮಾರಕ ನಿರ್ಮಾಣಕ್ಕೆ ವೇಗ ಸಿಕ್ಕಿದೆ. ವಾರದ ಹಿಂದಷ್ಟೇ ಸ್ಮಾರಕಕ್ಕೆ ಕಪ್ಪು ಶಿಲೆಯನ್ನು ಕ್ರೇನ್ ಮೂಲಕ ಇಡಲಾಗಿದ್ದು, ಜುಲೈ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

j3tvkannada
ಎನ್.ಸಿ.ಸಿ ಪರೇಡ್ ಮೈದಾನದಲ್ಲಿ 2022ರ ಜುಲೈ 29ರಂದು ಸರ್ವಧರ್ಮದ ಪ್ರಾರ್ಥನೆಯೊಂದಿಗೆ ಮಾಜಿ ಯೋಧರು, ಸಂತ್ರಸ್ತ ಕುಟುಂಬಗಳ ಸದಸ್ಯರೊಂದಿಗೆ ಜಿಲ್ಲಾಡಳಿತ ಭೂಮಿಪೂಜೆ ನೆರವೇರಿಸಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಸ್ತುವಾರಿಯಲ್ಲಿ ಲೋಕೋಪಯೋಗಿ ಇಲಾಖೆಯು ಪಾರಂಪರಿಕ ಶೈಲಿಯಲ್ಲಿ ನಿರ್ಮಾಣ ಕಾಮಗಾರಿ ನಡೆಸುತ್ತಿದೆ.
ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಇದೀಗ ಸ್ಮಾರಕದ ಕೇಂದ್ರ ಬಿಂದುವಾದ 33 ಅಡಿ ಎತ್ತರ ಸ್ತಂಭವನ್ನು ಅಳವಡಿಸಲಾಗಿದೆ. ಚಾಮರಾಜನಗರದ ಅಮಚವಾಡಿಯ ಪಟೇಲ್ ಪುಟ್ಟಮಾದಯ್ಯ ಕೊಡುಗೆಯಾಗಿ ನೀಡಿರುವ ₹1 ಕೋಟಿ ಮೌಲ್ಯದ ಕಪ್ಪು ಶಿಲೆಯಲ್ಲಿ ಸ್ತಂಭ ನಿರ್ಮಿಸಲಾಗಿದೆ. ಶ್ರೀನಾಥ್ ಎಂಬುವವರು 200 ಟನ್ ಕಲ್ಲುಗಳನ್ನು ನೀಡಿದ್ದು, ಹಾಸನದ ದಾನಿಯೊಬ್ಬರು ₹ 25 ಲಕ್ಷ ಮೌಲ್ಯದ ಹಾಸನದ ಹಸಿರು ಗ್ರಾನೈಟ್ ಕಲ್ಲುಗಳನ್ನು ನೀಡಿದ್ದಾರೆ.
ಅನುದಾನದ ಜೊತೆ ಸುಮಾರು ₹ 1.5 ಕೋಟಿ ಕೊಡುಗೆಯಾಗಿ ಸಿಕ್ಕಿದೆ. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಸೂಚನೆ ಹಾಗೂ ಸಲಹೆಯಂತೆ ಕಾಮಗಾರಿ ವೇಗ ಪಡೆದಿದೆ. ಯುದ್ಧ ಸ್ಮಾರಕದ ಸ್ತಂಭ ಅಳವಡಿಸಲಾಗಿದ್ದು, ಭೂ ಸೇನೆ, ನೌಕಾ ಪಡೆ ಹಾಗೂ ವಾಯು ಪಡೆಗಳ ಲೋಗೊಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಅವುಗಳಿಗೆ ಹೊಳಪು ನೀಡುವ ಕಾರ್ಯ ನಡೆಯುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಅವರು ತಿಳಿಸಿದರು.
1.41 ಕೋಟಿ ವೆಚ್ಚದ ಯೋಜನೆಯಲ್ಲಿ ₹ 50 ಲಕ್ಷ ಆಡಳಿತಾತ್ಮಕ ಅನುದಾನ ಮಂಜೂರಾಗಿದೆ. ಯುದ್ಧ ಸ್ಮಾರಕದ ಆವರಣದಲ್ಲಿ ಯುದ್ಧ ವಿಮಾನಗಳು, ಕಾಪ್ಟರ್, ಟ್ಯಾಂಕರ್, ಯುದ್ಧನೌಕೆ ಹಾಗೂ ಸೇನಾ ಪರಿಕರಗಳು ಬರಲಿದ್ದು, ಅದಕ್ಕಾಗಿ ರಕ್ಷಣಾ ಸಚಿವಾಲಯದ ಸೇನಾ ಪ್ರಧಾನ ಕಚೇರಿಯೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸೋಮವಾರ (ಇಂದು) ಹೊಸದಾಗಿ ಪತ್ರ ಕಳುಹಿಸುತ್ತಿದೆ ಎಂದರು. ಯುದ್ಧ ಪರಿಕರಗಳ ಸಾಗಣೆ ಹಾಗೂ ಇನ್ನಿತರೆ ವೆಚ್ಚವನ್ನು ನಾವೇ ಭರಿಸಬೇಕಿದ್ದು, ಎಲ್ಲ ವೆಚ್ಚವೂ ಸೇರಿದರೆ ₹ 3 ಕೋಟಿ ಆಗಲಿದೆ ಎಂದು ತಿಳಿಸಿದರು.