
ಚಾಮರಾಜನಗರ: ಬಾಲಕರು ಟಯರ್ ಬಂಡಿ ಓಡಿಸುತ್ತಾ ಖುಷಿ ಪಟ್ಟರೆ, ಬಾಲೆಯರು ಉಯ್ಯಾಲೆ ಜೀಕುತ್ತ ಸಂಭ್ರಮಿಸಿದರು. ಕೆಲವರು ಶ್ಲೋಕಗಳನ್ನು ಪಠಿಸುತ್ತ ಕಾಲ ಕಳೆದರೆ, ಹಲವರು ತೋಪಿನ ನಿಸರ್ಗವನ್ನು ಚಿತ್ರಕಲೆಯಲ್ಲಿ ಹಿಡಿದಿಡುವ ಪ್ರಯತ್ನದಲ್ಲಿದ್ದರು. ಹೀಗೆ ಹತ್ತಾರು ಗ್ರಾಮೀಣ ಆಟೋಟಗಳಲ್ಲಿ ಭಾಗಿಯಾಗುವ ಅವಕಾಶವನ್ನು ಬೆಂಗಳೂರು ಲೋಕಾ ಸೇವಾ ಪ್ರತಿಷ್ಠಾನ ಕಲ್ಪಿಸಿತು. ತಾಲ್ಲೂಕಿನ ಕಂದಹಳ್ಳಿ ಮಹದೇಶ್ವರ ದೇವಾವಲಯದ ತೋಪಿನ ಪರಿಸರದಲ್ಲಿ ಬೇಸಿಗೆ ರಜೆ ಆರಂಭದಲ್ಲಿ 5 ದಿನಗಳ ಕಾಲ ಆಯೋಜಿಸಿದ್ದ ಬಾಲ ಸಂಗಮ ಕಾರ್ಯಕ್ರಮ ಹಳ್ಳಿ ಸೊಗಡಿನ ಆಟ, ಪಾಠಗಳನ್ನು ಪರಿಚಯಿಸಿತು. ಕುಂಟೆ ಬಿಲ್ಲೆ, ಚೌಕಾ-ಬಾರಾ, ಬುಗುರಿ, ಮರಕೋತಿ ಆಟಗಳು ಮಕ್ಕಳನ್ನು ಆಕರ್ಷಿಸಿದವು. 5 ಕ್ಲಸ್ಟರ್ಗಳ 500 ಮಕ್ಕಳು ಬೇಸಿಗೆ ರಜೆಯ ಮಜಾ ಅನುಭವಿಸಿದರು. ಮಕ್ಕಳು ಮೊಬೈಲ್ ಹಾಗೂ ಟಿವಿ ಮರೆತು ದೇಸಿ ಆಟಗಳಲ್ಲಿ ಮೈಮರೆತು ಸಂಭ್ರಮಿಸಿದರು.

j3tvkananda
ಜನಪದ ಕ್ರೀಡೆಗಳಿಗೆ ಮನಸ್ಸು ಅರಳಿಸುವ ಹಾಗೂ ಬಾಲ್ಯದ ನೆನಪುಗಳನ್ನು ಮತ್ತೆ ಹೊತ್ತು ತರುವ ಶಕ್ತಿ ಇದೆ. ನಮ್ಮ ನೆಲಮೂಲ ಸಂಸ್ಕೃತಿಯಲ್ಲಿ ಅರಳಿದ ಅದೆಷ್ಟೋ ಆಟಗಳು ಇಂದಿಗೂ ಮಕ್ಕಳ ಮನಮುಟ್ಟುವಂತಿದೆ. ಬುದ್ದಿ ಚುರುಕುಗೊಳಿಸಿ, ಕಲಿಕೆಗೂ ನೆರವಾಗುತ್ತದೆ. ಆಧುನಿಕ ಜೀವನಶೈಲಿಯ ಧಾವಂತದಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುವುದನ್ನು ತಪ್ಪಿಸಿ ಮುನ್ನಲೆಗೆ ತರಲು ಸಹಕಾರಿಯಾಗಿದೆ ಎನ್ನುತ್ತಾರೆ ವಿಕಾಸ ಕೇಂದ್ರದ ಸಂಯೋಜಕ ಸಿದ್ದರಾಜು. ಗೋಣಿ ಚೀಲದೊಳಗೆ ಕುಪ್ಪಳಿಸುವುದು, ಮೌನವಾಗಿ ಸಂವಹನ ಮಾಡುವ ಕಲೆ, 7 ರೀತಿಯ ಕೊಕ್ಕೊ ಆಟ, ಕಾಲಿಗೆ ಬಲೂನ್ ಕಟ್ಟಿಕೊಂಡು ಹೋರಾಡುವುದು, ಹೀಗೆ ಹಲವು ಕ್ರೀಡೆಗಳನ್ನು ಶಿಬಿರದಲ್ಲಿ ಕಲಿತೆವು.

j3tvkannada
ತಂಪು ತುಂಬಿದ ಪರಿಸರದಲ್ಲಿ 5 ದಿನಗಳ ಕಾಲ ಪಕ್ಷಿಗಳ ಪರಿಚಯ, ಕೀಟಗಳ ಗುರುತು, ಜೇನು, ಇರುವೆಗಳ ಮಹತ್ವವನ್ನು ಅರಿತೆವು ಎಂದು ಮಕ್ಕಳಾದ ಮಹಾದೇವಿ ಹಾಗೂ ಮನು ಹೇಳಿದರು. ಬಾಲ ಸಂಗಮ ಕಾರ್ಯಕ್ರಮ ಬೇಸಿಗೆ ಸಮಯದಲ್ಲಿ ಮಕ್ಕಳು ಜನಪದ ಕ್ರೀಡೆ, ಹಾಡು, ಶ್ಲೋಕ, ಕತೆ, ಆಟ ಮತ್ತಿತರ ಪ್ರಕಾರಗಳನ್ನು ಕಲಿಯುವ ಅವಕಾಶ ಕಲ್ಪಿಸಿದೆ. ಹೆಚ್ಚುವರಿ ಶುಲ್ಕ ಇಲ್ಲದೆ, ಕ್ಲಸ್ಟರ್ ವ್ಯಾಪ್ತಿಯಲ್ಲಿ ಮಕ್ಕಳ ಮಾನಸಿಕ ಮತ್ತು ದೈಹಿಕ ವಿಕಸನಕ್ಕೆ ಬೇಕಾದ ಪರಿಕಲ್ಪನೆಯನ್ನು ಸರಳವಾಗಿ ಕಟ್ಟಿಕೊಟ್ಟಿದೆ ಎಂದು ಬಿ.ಆರ್.ಪಿ ಸತೀಶ್ ಹೇಳಿದರು.
ಲೋಕ ಸೇವಾ ಪ್ರತಿಷ್ಠಾನ 9 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಚಾಮರಾಜನಗರ ಜಿಲ್ಲೆಯ ರಾಮಾಪುರ ಹನೂರು ಯಳಂದೂರು ತಾಲ್ಲೂಕಿನ 1352 ಮಕ್ಕಳಿಗೆ ಗ್ರಾಮ ಸಂಸ್ಕೃತಿ ಬಿಂಬಿಸುವ ಕ್ರೀಡೆಗಳನ್ನು ಪರಿಚಯಿಸಲಾಯಿತು. ಯಳಂದೂರು ಮತ್ತು ಸಂತೇಮರಹಳ್ಳಿ ಹೋಬಳಿಗಳ 40 ಹಳ್ಳಿಗಳಲ್ಲಿ 7 ಆಯಾಮಗಳನ್ನು ಮುಖ್ಯವಾಗಿಸಿ ಸಮಾಜಮುಖಿ ಕಾರ್ಯಕ್ರಮ ನಡೆಸುತ್ತದೆ. ಆರೋಗ್ಯ ಸಂಪತ್ತು ಶಿಕ್ಷಣ ಸಂಸ್ಕಾರ ಸಾಮಾಜಿಕ ಸಾಮರಸ್ಯ ಸ್ವಾವಲಂಬನೆ ಗ್ರಾಮ ಸುರಕ್ಷತೆ ಪ್ರಕೃತಿ ಹಾಗೂ ಗೋ ಆಧಾರಿತ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ ಎಂದು ಜಿಲ್ಲಾ ಸಂಯೋಜಕ ಕೊಮಾರನಪುರ ಅರುಣ್ ಹೇಳಿದರು.