ಹಾವೇರಿ: ಇತ್ತೀಚೆಗೆ ಯುವಕ ಯುವತಿಯರು ಪ್ರೀತಿಸುವುದು, ಕೈಕೊಡುವುದು ಸಾಮಾನ್ಯವಾಗಿದೆ. ಪ್ರೀತಿ ಮಾಯೆ ಅನ್ನುವ ಹಾಗೆ ಯಾವ ಕ್ಷಣದಲ್ಲಿ ಬೇಕಾದರೂ ಇಂದಿನ ಯುವ ಜನತೆಯನ್ನು ಈ ಪ್ರೀತಿ ಆವರಿಸಿಕೊಳ್ಳಬಹುದು. ಈಗೀಗ ಕೆಲ ಯುವ ಜನತೆ ಮೋಜಿಗಾಗಿ ಪ್ರೀತಿಯೆಂಬ ಹೆಸರನ್ನು ಬಳಸಿಕೊಂಡು ಪ್ರೀತಿಸಿದ ಬಳಿಕ ಕೈ ಕೊಡುವ ಪ್ರಸಂಗ ಹೆಚ್ಚಾಗುತ್ತದೆ.

ಇದೀಗ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಪ್ರೀತಿಸಿದವಳು ಕೈ ಕೊಟ್ಟಿದ್ದಕ್ಕೆ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪ್ರೀತಿಸಿದ ಯುವತಿಯ ಹೆಸರು ಚಂದ್ರಕಲಾ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ನಿವಾಸಿಯಾಗಿದ್ದಾಳೆ. ಇವಳ ಪ್ರೀತಿಯ ಬಲೆಗೆ ಬಿದ್ದು ಸಾವಿನ ಮನೆ ಸೇರಿದ ಈ ಯುವಕನ ಹೆಸರು ಶಶಿಧರ್. ಈತ ಬ್ಯಾಡಗಿ ಪಟ್ಟಣ ನಿವಾಸಿಯಾಗಿದ್ದ. ಇವರಿಬ್ಬರು ಹಲವು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪಾರ್ಕ್, ದೇವಸ್ಥಾನ ಅಂತ ಗಲ್ಲಿ ಗಲ್ಲಿ ಸುತ್ತಾಡಿ ಕೊನೆಗೆ ಜಾತಿ ಬೇರೆ ಎಂದು ಕೈಕೊಟ್ಟಿದ್ದಾಳೆ. ಪ್ರಿಯಕರ ಎಷ್ಟೇ ಗೋಗರೆದರೂ ಪ್ರೀತಿಯನ್ನು ನಿರಾಕರಿಸಿದಕ್ಕೆ ಕೊನೆಗೆ ನೇಣಿಗೆ ಶರಣಾಗಿದ್ದಾನೆ.
ಬ್ಯಾಡಗಿ ತಾಲೂಕಿನ ಯುವತಿ ಚಂದ್ರಕಲಾ ಹಾಗೂ ಶಶಿಧರ್ ಲವ್ ಬರ್ಡ್ಸ್ ಆಗಿ ಸುತ್ತಾಡಿಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಏನಾಯಿತೋ ಗೊತ್ತಿಲ್ಲ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಬಳಿಕ ಲವ್ ಬ್ರೇಕಪ್ ಮಾಡಿಕೊಳ್ಳಲು ಚಂದ್ರಕಲಾ ಮುಂದಾಗಿದ್ದಾಳೆ . ಇದರಿಂದ ಮನ ನೊಂದು ಶಶಿಧರ್ ನೇಣಿಗೆ ಶರಣಾಗಿದ್ದಾನೆ. ತಮ್ಮ ಪುತ್ರ ಆತ್ಮಹತ್ಯೆ ಮಾಡಿಕೊಳ್ಳಲು ಚಂದ್ರಕಲಾ ಕಾರಣ ಎಂದು ಶಶಿಧರ್ ಪೋಷಕರು ಆರೋಪಿಸಿದ್ದು, ಈ ಬಗ್ಗೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಮೃತ ಶಶಿಧರ್ ತಾಯಿ ಹುಲಿಗೆಮ್ಮ ದೂರು ದಾಖಲಿಸಿದ್ದಾರೆ.
ಕಳೆದ ಜನೆವರಿ 26 ರಂದು ಕೆಲಸಕ್ಕೆ ಹೋಗಿ ಬರೋದಾಗಿ ಮನೆಯವರಿಗೆ ಹೇಳಿ ಶಶಿಧರ್ ಮನೆ ಬಿಟ್ಟು ಹೋಗಿದ್ದ. ಮಾರನೇ ದಿನ ಬ್ಯಾಡಗಿ ಬಳಿ ಕದರಮಂಡಲಿ ರೋಡ್ ಹತ್ತಿರ ಶಶಿಧರ್ ಶವ ಪತ್ತೆಯಾಗಿತ್ತು. ರೋಡ್ ಬಳಿಯ ಮರದ ಕೊಂಬೆಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಮೊದಲಿಗೆ ಶಶಿಧರ್ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ ಎಂದು UDR ದಾಖಲು ಮಾಡಲಾಗಿತ್ತು. ಬಳಿಕ ಮೃತ ಶಶಿಧರ್ ಅವರ ಮೊಬೈಲನ್ನು ಪರಿಶೀಲಿಸಿದ್ದ ಪೋಷಕರಿಗೆ ಶಾಕ್ ಕಾದಿತ್ತು.
ಜೀವನದಲ್ಲಿ ಹತ್ತಾರು ಕನಸ್ಸುಗಳನ್ನು ಕಂಡು ಕೂಲಿ ಕೆಲಸ ಮಾಡಿ ಹೆತ್ತವರನ್ನು ಸಾಕುತ್ತಿದ್ದ ಯುವಕ ಮಾಯಾಂಗಿಯೊಬ್ಬಳ ಮೋಸದಾಟಕ್ಕೆ ಬಲಿಯಾಗಿ. ನೀನೇ ಜೀವ, ನೀನೇ ಪ್ರಾಣ ಎಂದು ಸುತ್ತಾಡಿ ಇದೀಗ ಕೈ ಕೊಟ್ಟಿದ್ದರಿಂದ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಒಬ್ಬನೇ ಮಗನನ್ನು ಕಳೆದುಕೊಂಡು ತಂದೆ- ತಾಯಿ ಈಗ ಅನಾಥರಾಗಿದ್ದು, ಮನೆಗೆ ಆಧಾರವಾಗಿದ್ದ ಮಗ ಪ್ರೀತಿ ಹಿಂದೆ ಬಿದ್ದು ಸಾವಿಗೆ ಶರಣಾಗಿದ್ದಾನೆ.