
ಬಾಗಲಕೋಟೆ: ಜಿಲ್ಲೆಯ ರೈತ ಶ್ರೀಶೈಲ ತೇಲಿ, ಕಾಶ್ಮೀರದಲ್ಲಿ ಬೆಳೆಯುವ ಸೇಬು ಹಣ್ಣುಗಳನ್ನು ಯಶಸ್ವಿಯಾಗಿ ಬೆಳೆದು ಪ್ರಧಾನಿ ಮೋದಿಯವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಬ್ಬು ಮತ್ತು ದ್ರಾಕ್ಷಿ ಬೆಳೆಯುತ್ತಿದ್ದ ಅವರು, 7 ಎಕರೆ ಪ್ರದೇಶದಲ್ಲಿ ಸೇಬು ಕೃಷಿ ಮಾಡಿ 15 ಲಕ್ಷ ರೂ. ಆದಾಯ ಗಳಿಸಿದ್ದಾರೆ.

j3tvkannada.in
ಅವರ ಈ ಸಾಧನೆಯನ್ನು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಮುಧೋಳ ತಾಲೂಕಿನ ಕುಳಲಿಯ ರೈತ ಶ್ರೀಶೈಲ ತೇಲಿ ಹಲವು ವರ್ಷಗಳಿಂದ ಕಬ್ಬು, ದ್ರಾಕ್ಷಿ ಬೆಳೆಯುತ್ತ ಬಂದಿದ್ದರು. ಕಾಶ್ಮೀರದಲ್ಲಿ ಬೆಳೆಯುವ ಸೇಬು ಹಣ್ಣುಗಳನ್ನು ನಮ್ಮ ಜಮೀನಿನಲ್ಲೂ ಏಕೆ ಬೆಳೆಯಬಾರದು ಎಂಬ ಚಿಂತನೆ ಹುಟ್ಟಿಕೊಂಡಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಈ ರೈತ 7 ಎಕರೆಯಲ್ಲಿ ಸೇಬು ಕೃಷಿ ಕೈಗೊಂಡು ಯಶಸ್ಸು ಕಂಡಿದ್ದಾರೆ.
ಪ್ರಧಾನಿ ಮೋದಿ ಅವರು, ಶೀತ ಪ್ರದೇಶದಲ್ಲಿ ಬೆಳೆಯುವ ಸೇಬುವನ್ನು 35 ರಿಂದ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲೂ ರುಚಿಕರವಾಗಿ ಬೆಳೆದು ತೋರಿಸಿದ ರೈತನ ಕುರಿತು ಗುಣಗಾನ ಮಾಡಿದರು. ಹನಿ ನೀರಾವರಿ ಬಳಸಿ ಕೃಷಿ ಕೈಗೊಂಡಿರುವ ಇವರು ಸೇಬು ಗಿಡಗಳ ಜತೆಗೆ ಕರಬೂಜ, ಕಲ್ಲಂಗಡಿ, ತರಕಾರಿ, ಅರಿಷಿಣ ಬೆಳೆಗಳನ್ನೂ ಬೆಳೆದು ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ. ಕೆ.ಜಿಗೆ 120 ರಿಂದ 150 ರೂ. ವರೆಗೆ ಸೇಬು ಮಾರಾಟ ಮಾಡಿದ್ದು, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯವರೆಗೂ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದ್ದಾರೆ.
ಈ ಭಾಗದಲ್ಲಿ ವಾಣಿಜ್ಯ ಬೆಳೆ ಕಬ್ಬಿಗೆ ಪ್ರಧಾನ ಸ್ಥಾನವಿದೆ. ಆದರೆ ಶೀತ ಪ್ರದೇಶದಲ್ಲಿ ಬೆಳೆಯುವ ಬೆಳೆಯನ್ನು ಈ ಭಾಗದಲ್ಲೂ ಬೆಳೆದು ತೋರಿಸಬೇಕೆಂಬ ಛಲ ಇತ್ತು. ಅದನ್ನು ಮಾಡಿ ತೋರಿಸಿದೆ. ಈ ಕುರಿತು ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ನಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿರುವುದು ಖುಷಿ ಹಾಗೂ ಹೆಮ್ಮೆ ಮೂಡಿಸಿದೆ ಎಂದು ಕುಳಲಿಯ ಸೇಬು ಬೆಳೆಗಾರ ಶ್ರೀಶೈಲ ತೇಲಿ ಸಂತಸ ವ್ಯಕ್ತಪಡಿಸಿದ್ದಾರೆ.