
ಕೆಜಿಎಫ್: ಸಿ.ಇ.ಟಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕು ವಿಪ್ರ ಸಮಾಜದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ತಾಲ್ಲೂಕು ಆಡಳಿತ ಸೌಧಕ್ಕೆ ಮೆರವಣಿಗೆಯಲ್ಲಿ ತೆರಳಿದ ಸಮುದಾಯದ ಮುಖಂಡರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಘೋಷಣೆಗಳನ್ನು ಕೂಗಿದರು.

j3tvkannada
ಮುಖಂಡ ನಾರಾಯಣಮೂರ್ತಿ ಮಾತನಾಡಿ, ಜನಿವಾರವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ದೇಶದಲ್ಲಿ ಪ್ರತಿಯೊಬ್ಬರಿಗೂ ಅವರವರ ಧರ್ಮಗಳನ್ನು ಪಾಲಿಸುವ ಹಕ್ಕು ಇದೆ. ಹೀಗಿರುವಾಗ ಪರೀಕ್ಷೆಯಲ್ಲಿ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಜನಿವಾರ ತೆಗೆಸಿರುವುದು ಅಮಾನವೀಯ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ, ಸರ್ಕಾರ ಕ್ರಮ ವಹಿಸಬೇಕು ಎಂದರು.
ಸರ್ಕಾರದಿಂದ ಸವಲತ್ತುಗಳನ್ನು ಪಡೆಯುವಲ್ಲಿ ಮೊದಲಿನಿಂದಲೂ ಬ್ರಾಹ್ಮಣರು ಹಿಂದುಳಿದಿದ್ದಾರೆ. ಯಾವುದೇ ಹೋರಾಟವನ್ನು ಮಾಡಿಲ್ಲ. ಆದರೆ ನಮ್ಮ ಧಾರ್ಮಿಕ ಆಚರಣೆಗೆ ಧಕ್ಕೆ ಬಂದಿರುವುದು ಅತ್ಯಂತ ಆಘಾತ ತರುವ ವಿಷಯ. ನಾವು ಬೀದಿಗಳಿದು ಹೋರಾಟ ಮಾಡುವ ಪರಿಸ್ಥಿತಿಯನ್ನು ಸರ್ಕಾರ ತರಬಾರದು ಎಂದು ರಾಜ್ಯ ಮುಜರಾಯಿ ಅರ್ಚಕರು ಮತ್ತು ಆಗಮಿಕರ ಸಂಘದ ಸಂಚಾಲಕ ಗುರು ದೀಕ್ಷಿತ್ ಹೇಳಿದರು.
ನಂತರ ಉಪ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು. ಸನಾತನ ಧರ್ಮ ಸಭಾ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ದೇಶಪಾಂಡೆ, ಶ್ರೀಶುಕ್ಲ ಯಜುರ್ವೇದ ಸೇವಾ ಟ್ರಸ್ಟ್ ಕಾರ್ಯದರ್ಶಿ ಸಿ.ಎ.ಮುರಳಿಧರಾವ್, ಪುರೋಹಿತ್ ಸಂಘದ ಅಧ್ಯಕ್ಷರಾದ ಮಂಜುನಾಥ ದೀಕ್ಷಿತ್, ಲಕ್ಷ್ಮೀನಾರಾಯಣ ಶರ್ಮ, ಗಣೇಶ್ ದೀಕ್ಷಿತ್, ನರೇಂದ್ರ ದೀಕ್ಷಿತ್, ಚಂದ್ರಶೇಖರ್ ದೀಕ್ಷಿತ್, ರಮೇಶ್, ವೆಂಕಟ ಚಲಪತಿ, ರಾಮಕೃಷ್ಣ, ನಟರಾಜ್ ಅಯ್ಯರ್, ರಾಜಶೇಖರ್, ನಾಗರಾಜ್, ಬಾಲಾಜಿ, ಶ್ರೀ ರಾಮ್, ವಿಶ್ವನಾಥ್, ವೆಂಕಟರಮಣ, ಪ್ರಸಾದ್, ಸುರೇಶ್, ಕೃಷ್ಣಮೂರ್ತಿ, ವಿಜಯ್ ಕುಮಾರ್, ರಾಮ್ ಮೂರ್ತಿ ಮುಂತಾದವರು ಇದ್ದರು.