
ರಾಮನಗರ: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ತಾಲ್ಲೂಕಿನ ಬಿಡದಿ ಬಳಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ರಿಕ್ಕಿ ಅಂಗರಕ್ಷಕ ಮನ್ನಪ್ಪ ವಿಠಲ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಮೊದಲ ಆರೋಪಿ ಕಾಂಗ್ರೆಸ್ ಮುಖಂಡ ರಾಕೇಶ್ ಮಲ್ಲಿಯನ್ನು ಮಂಗಳವಾರ ಬಿಡದಿ ಠಾಣೆಯಲ್ಲಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದರು.

j3tvkannada
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರಿಕ್ಕಿಯ ಮೂವರು ಅಂಗರಕ್ಷಕರು, ಚಾಲಕ ಸೇರಿದಂತೆ ಮನೆಯಲ್ಲಿದ್ದ ಏಳು ಮಂದಿಯನ್ನು ಸತತ ಮೂರು ದಿನ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ವಿಠಲ್ ಮೇಲೆ ಅನುಮಾನ ಬಂದಿದ್ದರಿಂದ ವಶಕ್ಕೆ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ. ವಿಚಾರಣೆ ನಡುವೆ ವಿಠಲ್ಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುತ್ತಪ್ಪ ರೈಗೂ ಅಂಗರಕ್ಷಕನಾಗಿದ್ದ ವಿಠಲ್, ನಂತರ ಕರಿಯಪ್ಪನದೊಡ್ಡಿ ಮನೆಯ ಮೇಲ್ವಿಚಾರಣೆ ಜೊತೆಗೆ ಭದ್ರತಾ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ. ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ರಾಕೇಶ್ ಮಲ್ಲಿ ಅವರು ತಮ್ಮ ವಕೀಲರೊಂದಿಗೆ ಮಧ್ಯಾಹ್ನ ಬಿಡದಿ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ನೇತೃತ್ವದಲ್ಲಿ ಡಿವೈಎಸ್ಪಿಗಳು ಮತ್ತು ಇನ್ಸ್ಪೆಕ್ಟರ್ಗಳನ್ನು ಒಳಗೊಂಡ ತಂಡ ರಾಕೇಶ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತು.
ವಿಚಾರಣೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ರಾಕೇಶ್, ಕಳೆದ 22 ವರ್ಷಗಳಿಂದ ನನ್ನ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ. ಮುತ್ತಪ್ಪ ರೈ ಇರುವಾಗಲೇ ನನ್ನ ಮತ್ತು ಅವರ ನಡುವೆ ವೈಮನಸ್ಸು ಉಂಟಾಗಿ ಸಂಬಂಧ ಅಂತ್ಯಗೊಂಡಿತ್ತು. ನನ್ನ ಪಾಡಿಗೆ ಕುಟುಂಬದೊಂದಿಗೆ ಇದ್ದೇನೆ. ಹೀಗಿರುವಾಗ, ಕೇಸ್ ಹಾಕಿರುವುದರಲ್ಲಿ ಅರ್ಥವಿಲ್ಲ ಎಂದರು. ರಿಕ್ಕಿ ರೈ ಮತ್ತು ನನಗೂ ಯಾವುದೇ ಸಂಬಂಧವಿಲ್ಲ. ಆದರೂ ಈ ಪ್ರಕರಣದಲ್ಲಿ ನನ್ನನ್ನು ಸೇರಿಸಿದ್ದಾರೆ. ಪೊಲೀಸರ ನೋಟಿಸ್ ಮೇರೆಗೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನೆ. ಇದಿಷ್ಟು ಬಿಟ್ಟು ಬೇರೇನೂ ಹೇಳಲಾರೆ. ವಿಚಾರಣೆ ಮುಗಿಯಲಿ. ಮುಂದೆ ನಾನೇ ಸುದ್ದಿಗೋಷ್ಠಿ ಕರೆದು ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವೆ ಎಂದು ಹೇಳಿದರು. ಬಿಡದಿ ಬಳಿಯ ಕರಿಯಪ್ಪನದೊಡ್ಡಿಯಲ್ಲಿರುವ ಮನೆಯಿಂದ ರಿಕ್ಕಿ ರೈ ಏ. 18ರಂದು ರಾತ್ರಿ 12.50ರ ಸುಮಾರಿಗೆ ಕಾರಿನಲ್ಲಿ ಬೆಂಗಳೂರಿಗೆ ಹೊರಡುವಾಗ, ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ ರಿಕ್ಕಿ ಕಿವಿ ಮತ್ತು ತೋಳಿಗೆ ಗುಂಡೇಟು ಬಿದ್ದಿತ್ತು. ಸದ್ಯ ರಿಕ್ಕಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

j3tvkannada
ಜೊತೆಗಿದ್ದವರೇ ರಿಕ್ಕಿ ರೈ ಚಲನವಲನಗಳ ಮಾಹಿತಿ ನೀಡಿರುವ ಅನುಮಾನ ವ್ಯಕ್ತವಾಗಿದೆ. ಒಬ್ಬನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು ಆತನಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೇತರಿಸಿಕೊಂಡ ಬಳಿಕ ವಿಚಾರಣೆ ಮುಂದುವರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು. ದೂರಿನಲ್ಲಿ ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ. ಅದರಲ್ಲಿ ಮೂವರು ವಿಚಾರಣೆಗೆ ಬರುವುದಾಗಿ ಹೇಳಿದ್ದರು. ಎರಡನೇ ಆರೋಪಿ ಅನುರಾಧ (ರಿಕ್ಕಿ ಮಲತಾಯಿ) ಸಂಪರ್ಕಕ್ಕೆ ಸಿಕ್ಕಿಲ್ಲ. ಸದ್ಯಕ್ಕೆ ಅನುಮಾನ ಇದ್ದವರನ್ನು ವಿಚಾರಣೆ ಮಾಡುತ್ತಿದ್ದೇವೆ. ಯಾವ ಕಾರಣಕ್ಕೆ ಗುಂಡಿನ ದಾಳಿ ನಡೆದಿದೆ ಎಂಬುದು ಇದುವರೆಗೆ ತಿಳಿದಿಲ್ಲ ಎಂದರು. ದಾಳಿ ನಡೆದ ಸ್ಥಳದಲ್ಲಿ ಡಮ್ಮಿ ಮೊಬೈಲ್ ಹಾಗೂ ಖಾಲಿ ಕಾಟ್ರಿಡ್ಜ್ ಇಟ್ಟು ಹೋಗಿದ್ದಾರೆ. ಘಟನೆ ದಿನ ರಿಕ್ಕಿ ರೈ ಕಡೆಯವರು ಕೂಡ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಹಾಗಾಗಿ ಅಂಗರಕ್ಷಕರು ಬಂದೂಕುಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಎಲ್ಲಾ ಆಯಾಮದಿಂದಲೂ ತನಿಖೆ ನಡೆಯುತ್ತಿದೆ ಎಂದು ಶ್ರೀನಿವಾಸ ಗೌಡ ಹೇಳಿದರು.
ರಾಕೇಶ್ ಮಲ್ಲಿ ಮುತ್ತಪ್ಪ ರೈ ತಮಗೆ ಯಾರು ಹೊಡೆದಿದ್ದರೊ ಅವರೊಂದಿಗೇ ಸೇರಿ ನನ್ನನ್ನು ಹೊಡೆಯಲು ಪ್ರಯತ್ನಿಸಿದ್ದರು. ಈಗ ಅವರಿಲ್ಲ. ಆದರೆ ಅವರ ಮಕ್ಕಳು ಅದೇ ಕೆಲಸ ಮಾಡುತ್ತಿದ್ದಾರೆ. ಮುಂದೇನಾಗುತ್ತದೆ ಎಂದು ನೋಡೋಣ. ಸತತ ಆರು ತಾಸು ಪೊಲೀಸ್ ವಿಚಾರಣೆ ಎದುರಿಸಿದ ಪ್ರಕರಣದ ಮೊದಲ ಆರೋಪಿ ರಾಕೇಶ್ ಮಲ್ಲಿ ಅವರು ಮಾಧ್ಯಮದವರಿಗೆ ನೀಡಿದ ಪ್ರತಿಕ್ರಿಯೆ. ಮುತ್ತಪ್ಪ ರೈ ಸಾಯುವುದಕ್ಕೆ ಮುಂಚೆ ತಮ್ಮ ಜೊತೆಗಿದ್ದವರಿಗೆ ಹಾಗೂ ಕೆಲಸಗಾರರಿಗೆ ಒಂದಿಂಚೂ ಭೂಮಿ ಕೊಟ್ಟಿಲ್ಲ. ಆದರೆ ರೈ ಅವರು ನಿವೇಶನ ಸೇರಿದಂತೆ ಏನೇನೊ ಕೊಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುಳ್ಳು ಪ್ರಸಾರ ಮಾಡಲಾಗಿದೆ. ಹಾಗೇನಾದರೂ ಭೂಮಿ ಕೊಟ್ಟಿದ್ದರೆ ಸ್ಥಳೀಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಹೋಗಿ ಪರಿಶೀಲಿಸಿ ನೋಡಿ. ಆಗ ಸತ್ಯ ಗೊತ್ತಾಗಲಿದೆ ಎಂದರು. ರೈ ವಿರುದ್ಧದ ಪ್ರಕರಣ ಮುಗಿದ ಬಳಿಕ ಕೊಡುವುದಾಗಿ ಹೇಳಿದ್ದರೆ ಇದೀಗ ಅವರು ತೀರಿ ಹೋಗಿಯೇ ನಾಲ್ಕು ವರ್ಷವಾಯಿತು. ಆದರೂ ಯಾಕೆ ಕೊಟ್ಟಿಲ್ಲ. ಅವರಿಗಾಗಿ ತುಂಬಾ ಕೆಲಸ ಮಾಡಿರುವ ಪಾಪದವರಿದ್ದಾರೆ. ಅವರಿಗೂ ಒಳ್ಳೆಯದಾಗಬೇಕಲ್ಲವೆ ಎಂದು ಕೇಳಿದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಪಲ್ಲಮಜಲು ನಿವಾಸಿಯಾದ ರಾಕೇಶ್ ಮಲ್ಲಿ ಒಂದು ಕಾಲದಲ್ಲಿ ಮುತ್ತಪ್ಪ ರೈ ಅವರಿಗೆ ಬಲಗೈ ಬಂಟನಂತಿದ್ದರು. ನಂತರ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕುಂಟಾಗಿತ್ತು. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ರೈ ಅವರು ನನಗೆ ವಂಚನೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ರಾಕೇಶ್ ಬೆಂಗಳೂರು ಪೊಲೀಸರಿಗೆ ದೂರು ಕೊಟ್ಟಿದ್ದರು. ರೈ ನಿಧನದ ಬಳಿಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ರಾಕೇಶ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕುಂದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು.