
ಮುಧೋಳ: ಘಟಪ್ರಭಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಮುಖಂಡರು ಹಾಗೂ ನಗರವಾಸಿಗಳು ತಹಶೀಲ್ದಾರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

j3tvkannada
ತಾಲ್ಲೂಕಿನ ಜೀವನಾಡಿ ಆಗಿರುವ ಘಟಪ್ರಭಾ ನದಿಯು ಕಳೆದೊಂದು ವಾರದಿಂದ ಬತ್ತಿಹೋಗಿದೆ. ನದಿ ಪಾತ್ರದ ಗ್ರಾಮಗಳಿಗೆ ತೊಂದರೆಯಾಗುತ್ತಿದೆ. ಬೇಸಿಗೆ ದಿನಮಾನದಲ್ಲಿ ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ ಅಗಾಧವಾಗಿ ಕಾಡಲಿದ್ದು, ಕೂಡಲೇ ನದಿಗೆ 2 ಟಿ.ಎಂ.ಸಿ ನೀರನ್ನು ಹರಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಇದೇ ವೇಳೆ ಕಬ್ಬಿನ ಬಾಕಿ ಹಣವನ್ನು ನೀಡುವಲ್ಲಿ ಕಾರ್ಖಾನೆಯವರು ವಿಳಂಬ ನೀತಿ ಅನುಸರಿಸುತ್ತಿದ್ದು, ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಕಬ್ಬು ಬೆಳೆಗಾರರಿಗೆ ಬಾಕಿ ಹಣವನ್ನು ನೀಡುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಗುರಪಾದ ಕುಳಲಿ, ಕಬ್ಬು ಬೆಳೆಗಾರರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಸೋರಗಾವಿ, ಅನಂತರಾವ ಘೋರ್ಪಡೆ, ತಿಮ್ಮಣ್ಣ ಬಟಕುರ್ಕಿ, ಸುಗೂರಪ್ಪ ಅಕ್ಕಿಮರಡಿ, ಪ್ರತಾಪರಾವ ಚಂದನಶಿವ, ದುಂಡಪ್ಪ ನೀಲಿ, ಬಿ.ಎಲ್ ಬಬಲಾದಿ ಸೇರಿದಂತೆ ಇತರರು ಇದ್ದರು.