
ಬೀದರ್: ಭಾರತೀಯ ವಕೀಲರ ಪರಿಷತ್ ಸಹ ಅಧ್ಯಕ್ಷ ಸದಾಶಿವರೆಡ್ಡಿ ಅವರ ಮೇಲೆ ಬೆಂಗಳೂರಿನ ಅವರ ಕಚೇರಿಗೆ ನುಗ್ಗಿ ಹಲ್ಲೆ ನಡೆಸಿರುವ ಘಟನೆ ಖಂಡಿಸಿ ನಗರದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

j3tvkannada
ನಗರದ ನ್ಯಾಯಾಲಯದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಸಮಾರೋಪಗೊಂಡಿತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವಶರಣಪ್ಪಾ ಪಾಟೀಲ (ಪುಟ್ಟು) ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ತಮ್ಮ ತೋಳಿಗೆ ಕೆಂಪು ಪಟ್ಟಿ ಧರಿಸಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಶಿವಶರಣಪ್ಪ ಪಾಟೀಲ ಮಾತನಾಡಿ, ವಕೀಲ ಸದಾಶಿವರೆಡ್ಡಿ ತಮ್ಮ ಸಹದ್ಯೋಗಿ ಜೊತೆಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಒಳನುಗ್ಗಿ ಪೈಪ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ದುಷ್ಕರ್ಮಿಗಳಿಗೆ ಪೊಲೀಸ್ರ ಭಯ ಇಲ್ಲದಂತಾಗಿದೆ. ಇತ್ತೀಚೆಗೆ ನಗರದ ನ್ಯಾಯಾಲಯ ಪಕ್ಕದ ಬ್ಯಾಂಕ್ ಎ.ಟಿ.ಎಂ ಬಳಿ ದರೋಡೆಕೋರರು ಗುಂಡು ಹಾರಿಸಿ ಹಣ ದೋಚಿಕೊಂಡು ಹೋಗಿದ್ದಾರೆ. ಈವರೆಗೂ ಆರೋಪಿಗಳು ಪತ್ತೆಯಾಗಿಲ್ಲ. ಈ ಘಟನೆ ಮಾಸುವ ಮುನ್ನವೇ ನಗರದಲ್ಲಿ ನ್ಯಾಯಾಧೀಶರ ಮನೆಗೂ ಕನ್ನ ಹಾಕಲಾಗಿದೆ. ಜಿಲ್ಲಾ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಎಸ್. ಬಿರಾದಾರ್, ಉಪಾಧ್ಯಕ್ಷ ಗುಂಡರೆಡ್ಡಿ ಗುಡಾಡಿ, ಖಜಾಂಚಿ ಪ್ಯಾರುಸಾಬ್ ಎಂ ಶೇಕ್, ಹಿರಿಯ ವಕೀಲರಾದ ಬಾಬುರಾವ್ ಹೊನ್ನಾ, ಬಿ.ಕೃಷ್ಣಪ್ಪಾ, ನಾರಾಯಣ ಗಣೇಶ್, ರತ್ನಾ ಅಗ್ರೆ ಹಾಗೂ ಇನ್ನಿತರರು ಇದ್ದರು.