
ರಾಯಚೂರು: ಮಸ್ಕಿ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಡುಗು-ಸಿಡಿಲು ಸಹಿತ ಮಳೆ ಸುರಿದಿದೆ.

j3tvkannada
ತಾಲ್ಲೂಕಿನ ಸುಂಕನೂರು, ಕಡಬೂರು, ಉದ್ಘಾಳ ಸುತ್ತಮುತ್ತ ರಾಶಿ ಮಾಡಿದ್ದ ಭತ್ತ ಮಳೆಯಿಂದಾಗಿ ಸಂಪೂರ್ಣವಾಗಿ ಹಾಳಾಗಿದೆ. ಕಣದ ಸುತ್ತಮುತ್ತ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾದ ಕಾರಣ ರೈತರು ಇಡೀ ರಾತ್ರಿ ಭತ್ತ ಸಂರಕ್ಷಿಸಲು ಪರದಾಡ ಬೇಕಾಯಿತು. ಪಟ್ಟಣದ ಸಜ್ಜಿ ಹೊಲದ ಬಳಿ ವಿದ್ಯುತ್ ಕಂಬಗಳಲ್ಲಿನ ವೈರ್ಗಳು ಒಂದಕ್ಕೊಂದು ತಳಕು ಹಾಕಿಕೊಂಡಿದ್ದರಿಂದ ಸುತ್ತಮುತ್ತಲಿನ 8ಕ್ಕೂ ಹೆಚ್ಚು ಮನೆಗಳಲ್ಲಿನ ಟಿವಿ, ಫ್ರಿಡ್ಜ್, ಫ್ಯಾನ್ಗಳು ಬ್ಲಾಸ್ಟ್ ಆಗಿವೆ. ನಿದ್ದೆಯ ಮಂಪರಿನಲ್ಲಿದ್ದ ಮನೆಯವರು ಗಾಬರಿಯಿಂದ ಎದ್ದು ನೋಡಿದಾಗ ಬೆಂಕಿ ಹೊತ್ತಿಕೊಂಡಿದ್ದು ಕಂಡಿದೆ. ಕೂಡಲೇ ಜೆಸ್ಕಾಂ ಸಹಾಯವಾಣಿಗೆ ಕರೆ ಮಾಡಿದ್ದಾರೆ.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ವಿದ್ಯುತ್ ಲೈನ್ ದುರಸ್ತಿಗೊಳಿಸಿದ್ದಾರೆ. ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಕಟ್ಟಲಾಗಿದ್ದ ಸ್ವಾಗತ ಕಟೌಟ್ಗಳು ಗಾಳಿಗೆ ಹಾರಿ ಹೋಗಿವೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಬೆಳಿಗ್ಗೆ ಪುರಸಭೆ ಸಿಬ್ಬಂದಿ ವಿವಿಧೆಡೆ ಕಟ್ಟಲಾಗಿದ್ದ ಕಟೌಟ್ ಗಳನ್ನು ತೆರವುಗೊಳಿಸಿದ್ದಾರೆ. ಪಟ್ಟಣದಲ್ಲಿ ಗಾಳಿ ಮಳೆಗೆ ಹಾಳಾದ ವೈರ್ಗಳನ್ನು ಜೆಸ್ಕಾಂ ಸಿಬ್ಬಂದಿ ಸರಿಪಡಿಸಿದರು.