
ಯಾದಗಿರಿ: ತಾಲ್ಲೂಕಿನ ಹಾಲಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡ್ಡೆಸೂಗುರು ಗ್ರಾಮದಲ್ಲಿ ಭೀಮಾ ನದಿಯಿಂದ ನೀರು ಪೂರೈಕೆ ಮಾಡುವ ಪೈಪ್ ಹಾಳಾಗಿರುವದರಿಂದ ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿದ್ದಾರೆ.

j3tvkannada
ಗಡ್ಡೆಸೂಗುರು ಗ್ರಾಮಕ್ಕೆ ಈ ಹಿಂದೆ ಭೀಮಾ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಗ್ರಾಮಸ್ಥರು ನದಿ ನೀರನ್ನು ಕುಡಿಯಲು, ಬಟ್ಟೆ ತೊಳೆಯಲು ಉಪಯೋಗಿಸುತ್ತಿದ್ದರು. ಕಳೆದ ಹಲವು ದಿನಗಳಿಂದ ಭೀಮಾ ನದಿಯಿಂದ ಸರಬರಾಜು ಮಾಡುವ ನೀರಿನ ಪೈಪ್ ಒಡೆದಿದ್ದರಿಂದ ನೀರು ಪೂರೈಕೆ ಸ್ಥಗಿತವಾಗಿದೆ. ಮಹಿಳೆಯರು ಖಾಲಿ ಕೊಡ ಗಳನ್ನು ಹಿಡಿದುಕೊಂಡು ನೀರಿಗಾಗಿ ಅಲೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹಣ ಇದ್ದವರು ಟ್ಯಾಂಕರ್ ನೀರು ಖರೀದಿ ಮಾಡಿ ಮನೆಗಳಿಗೆ ನೀರು ತರುತ್ತಿದ್ದಾರೆ. ಬಡವರು ಭೀಮಾನದಿಗೆ ತೆರಳಿ ನೀರು ತರುವ ಅನಿವಾರ್ಯತೆ ಇದೆ. ಗ್ರಾಮದಲ್ಲಿ ಇರುವ ಬಹುತೇಕ ಬೋರ್ವೆಲ್ ನೀರು ಲವಣಾಂಶದಿಂದ ಕೂಡಿರುವುದರಿಂದ ಗ್ರಾಮಸ್ಥರು ಆ ನೀರನ್ನು ಬಟ್ಟೆ ಒಗೆಯಲು ಹಾಗೂ ಇನ್ನಿತರ ಕೆಲಸಗಳಿಗೆ ಬಳಕೆ ಮಾಡುತ್ತಾರೆ.
ಮಹಿಳೆಯರು ಈ ನೀರು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ತಲೆ, ಸೊಂಟದ ಮೇಲೆ ಒಂದೊಂದು ಕೊಡ ಇಟ್ಟುಕೊಂಡು ಚುನಾಯಿತ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ನೀರು ತರುತ್ತಾರೆ. ಶಾಲಾ ಬಾಲಕರು ಸಹ ತ್ರಿಚಕ್ರ ವಾಹನದಲ್ಲಿ ಕೊಡಗಳನ್ನು ತುಂಬಿಕೊಂಡು ತಳ್ಳುತ್ತಾ ನೀರು ತುರುವುದು ಸಾಮಾನ್ಯ ದೃಶ್ಯವಾಗಿದೆ. ಗಡ್ಡೆಸೂಗುರು ಗ್ರಾಮದಲ್ಲಿ ಸುಮಾರು 1 ಕೋಟಿ ರೂಪಾಯಿಗಳ ವೆಚ್ಚದಲ್ಲಿ 317 ಮನೆಗಳಿಗೆ ನೀರನ್ನು ಸರಬರಾಜು ಮಾಡಬೇಕು. ಜಲ ಜೀವನ್ ಮಿಷನ್ ಅಡಿ ಮನೆ ಮನೆಗೆ ಗಂಗೆ ಎಂಬ ಯೋಜನೆಗೆ 2023ರ ಮಾರ್ಚ್ನಲ್ಲಿ ಸರ್ಕಾರ ಕಾರ್ಯಾದೇಶ ನೀಡಿದೆ. ಕಾಮಗಾರಿ ಪೂರ್ಣವಾಗಿ ವರ್ಷಗಳೇ ಕಳೆದರೂ ಒಂದೇ ಒಂದು ಹನಿ ನೀರು ಮನೆಗಳಿಗೆ ಸರಬರಾಜು ಆಗಿಲ್ಲ.