
ಬೆಂಗಳೂರು ಗ್ರಾಮಾಂತರ: ಆಹಾರ ಪದಾರ್ಥಗಳಿಗೆ ಯತೇಚ್ಛವಾಗಿ ತೆಂಗಿನಕಾಯಿಯನ್ನು ಬಳಸುತ್ತಿದ್ದವರು, ಈಗ ಅನಿವಾರ್ಯವಾಗಿ ಬೇಕಾದ ಪದಾರ್ಥಗಳಿಗೆ ಮಾತ್ರ ಬಳಸುವಂತಾಗಿದೆ. ಹೋಟೆಲ್ ಉದ್ಯಮದವರ ಪಾಡು ಹೇಳತೀರದಾಗಿದೆ. ದೇವರ ಪೂಜೆಗೆ ತೆಂಗಿನಕಾಯಿಗಿಂತ ಹಣ್ಣುಗಳಿಗೆ ಆದ್ಯತೆ ನೀಡುವುದು ಸಾಮಾನ್ಯವಾಗಿದೆ.

j3tvkannada
1 ಕೆಜಿ ತೆಂಗಿನಕಾಯಿ ಬೆಲೆ 85 ರಿಂದ 90 ರೂಪಾಯಿ ಇದ್ದು, ಶತಕದ ಗಡಿಯತ್ತ ದಾಪುಗಾಲಿಡುತ್ತಿದೆ. ಒಂದು ಸಣ್ಣ ತೆಂಗಿನಕಾಯಿ 50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತೆಂಗು ಪ್ರಮುಖ ಬೆಳೆ ಅಲ್ಲದಿದ್ದರೂ, ಅಲ್ಲಲ್ಲಿ ತೆಂಗಿನ ಮರಗಳನ್ನು ಬೆಳೆಸಲಾಗುತ್ತಿದೆ. ಒಂದು ತೆಂಗಿನ ಸಸಿಯನ್ನು ನೆಟ್ಟು ಪೋಷಿಸಿ ಬೆಳೆಸಿದರೆ ಜೀವನಪೂರ್ತಿ ಕುಟುಂಬ ಸಾಗುತ್ತದೆ ಎಂಬ ಮಾತು ಬೆಲೆ ಏರಿಕೆಯ ಈ ಸಂದರ್ಭದಲ್ಲಿ ನಿಜವಾಗಿದೆ. ತೆಂಗು ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ, ಬೆಲೆ ಹೆಚ್ಚಳದ ಬಿಸಿ ಗ್ರಾಹಕರಿಗೆ ತಟ್ಟಿದೆ.
ಬೇಡಿಕೆಗೆ ತಕ್ಕ ಹಾಗೆ ಪೂರೈಕೆ ಇಲ್ಲ:
ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದಿರುವುದು ತೆಂಗು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಕಳೆದ ವರ್ಷ ಕೆಲ ಭಾಗಗಳಲ್ಲಿ ನೀರಿನ ಕೊರತೆಯಿಂದ ತೆಂಗಿನ ಮರಗಳು ಒಣಗಿ ಹೋಗಿದ್ದರೆ, ಮತ್ತೆ ಕೆಲವೆಡೆ ರೋಗಕ್ಕೆ ತುತ್ತಾಗಿ ನಾಶವಾಗಿವೆ. ಬೇಸಿಗೆ ಬಿಸಿಲು ಹೆಚ್ಚಾಗಿರುವುದರಿಂದ ಎಳನೀರಿಗೆ ಬೇಡಿಕೆ ಸಾಕಷ್ಟಿದೆ. ಹಾಗಾಗಿ, ರೈತರು ಎಳನೀರು ಹಂತದಲ್ಲೇ ಮಾರಾಟ ಮಾಡುತ್ತಿರುವುದರಿಂದ ಇಳುವರಿ ಕುಂಠಿತವಾಗಿ ತೆಂಗಿನಕಾಯಿಗೆ ಬೇಡಿಕೆ ಹೆಚ್ಚಾಗಿ, ಬೆಲೆ ಏರಿಕೆಯಾಗಿದೆ ಎಂದು ರೈತರು ಹೇಳುತ್ತಾರೆ.
ಕಳೆದ ಹಲವಾರು ವರ್ಷಗಳಿಂದ ಮಾರುಕಟ್ಟೆಯಲ್ಲಿ ತೆಂಗಿಗೆ ಉತ್ತಮ ಬೆಲೆ ಸಿಗದೆ ಬೇಸರಗೊಂಡು ತೆಂಗು ಕೃಷಿಯಿಂದಲೇ ಹಲವು ರೈತರು ದೂರ ಸರಿದಿದ್ದರು. ಈ ವರ್ಷ ಬಂಪರ್ ಬೆಲೆ ಇದೆ. ಆದರೆ ಬೆಳೆ ಇಲ್ಲದಂತಾಗಿದೆ. ತೆಂಗಿನಕಾಯಿ ವ್ಯಾಪಾರಿಗಳು ತುಮಕೂರು, ತಿಪಟೂರು, ಅರಸೀಕೆರೆ ಇತರೆ ಕಡೆಗಳಿಂದ ತೆಂಗಿನಕಾಯಿಯನ್ನು ತಂದು ವ್ಯಾಪಾರ ಮಾಡುತ್ತಿದ್ದಾರೆ.
ತೆಂಗಿನಕಾಯಿಯ ಚಿಪ್ಪಿಗೂ ಸಹ ಬೇಡಿಕೆ
ತೆಂಗಿನಕಾಯಿ ಮತ್ತು ಎಳನೀರು ಬೆಲೆ ಏರಿಕೆ ನಡುವೆ ತೆಂಗಿನಕಾಯಿಯ ಚಿಪ್ಪಿಗೂ ಸಹ ಬೇಡಿಕೆ ಬಂದಿದ್ದು, ಒಂದು ಟನ್ 28,000 ರೂ.ಗೆ ತಲುಪಿದೆ. ಈ ಹಿಂದಿನ ವರ್ಷಗಳಲ್ಲಿ ಒಂದು ಟನ್ 7ರಿಂದ 8 ಸಾವಿರ ರೂ.ಗೆ ಸಿಗುತ್ತಿತ್ತು. ಎರಡು ವರ್ಷಗಳ ಹಿಂದೆ 17 ಸಾವಿರ ರೂಪಾಯಿ ಇತ್ತು. ಆದರೆ ಈ ಬಾರಿ ಬರೋಬ್ಬರಿ 28 ಸಾವಿರ ರೂ.ಗೆ ತಲುಪಿದೆ. ರಾಜ್ಯದ ತೆಂಗಿನ ಚಿಪ್ಪಿಗೆ ಬಾರಿ ಬೇಡಿಕೆ ಬಂದಿದೆ.
“ದಿನದಿಂದ ದಿನಕ್ಕೆ ತೆಂಗಿನ ಕಾಯಿ ಬೆಲೆ ಏರಿಕೆಯಾಗುತ್ತಿದೆ. ಅರಸೀಕೆರೆ, ತುಮಕೂರು ಇತರೆಡೆಯಿಂದ ಹೆಚ್ಚು ತೆಂಗಿನಕಾಯಿ ತರಿಸುತ್ತಿದ್ದೇವೆ. ಇತ್ತೀಚೆಗೆ ಬೆಲೆ ಏರಿಕೆಯಿಂದ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ತೆಂಗಿನಕಾಯಿ ಸಮರ್ಪಕವಾಗಿ ಮಾರುಕಟ್ಟೆಗೆ ಬರುತ್ತಿಲ್ಲ.” ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ಎಸ್.ಶಿವಕುಮಾರ್.