
ದಾವಣಗೆರೆ: ರಾಜ್ಯದಲ್ಲಿ ಬೆಳ್ಳಿ, ಬಂಗಾರದಂತೆ ಅಡಿಕೆ ದರದಲ್ಲಿಯೂ ಏರಿಳಿತ ಆಗುತ್ತಿರುತ್ತದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಈ ತಿಂಗಳು ಅಂದ್ರೆ ಏಪ್ರಿಲ್ ಆರಂಭದಿಂದ ಇಲ್ಲಿಯವರೆಗೂ ಏರಿಕೆ ಆಗುತ್ತಲಿದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಹಲವೆಡೆಯೂ ಅಡಿಕೆ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಇಂದು ಅಡಿಕೆ ಧಾರಣೆ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಆಗಿದೆ. ಇದೀಗ ಕ್ವಿಂಟಾಲ್ ಅಡಿಕೆಯ ಗರಿಷ್ಠ ದರ 58,669 ರೂಪಾಯಿಗೆ ಏರಿಕೆ ಆಗಿದೆ. ಇದರಿಂದ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮತ್ತೆ ಹೆಚ್ಚಾದಂತಾಗಿದೆ.
ಇದೀಗ ಚನ್ನಗಿರಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್ಗಳಲ್ಲಿ) ಗರಿಷ್ಠ ದರ 58,669 ರೂಪಾಯಿ, ಕನಿಷ್ಠ ದರ 55,469 ರೂಪಾಯಿ ಇದ್ದು, ಸರಾಸರಿ ಬೆಲೆ 57,272 ರೂಪಾಯಿ ಇದೆ. ಬೆಟ್ಟೆ ಅಡಿಕೆ ಗರಿಷ್ಠ ದರ 43,789 ರೂಪಾಯಿ, ಕನಿಷ್ಠ ದರ 24,779 ರೂಪಾಯಿ, ಸರಾಸರಿ ದರ 31,222 ರೂಪಾಯಿ ಆಗಿದೆ. ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಅದರಲ್ಲೂ ಇದೀಗ ಬೇಸಿಗೆಗೂ ಮುನ್ನ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ.

j3tvkannada
ಈ ಹಿನ್ನೆಲೆ ಅಡಿಕೆ ತೋಟ ರಕ್ಷಣೆಗೆ ರೈತರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ. ಇದೇ ವರ್ಷದ ಅಂದರೆ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಿದ್ದ ಕ್ವಿಂಟಾಲ್ ಅಡಿಕೆ ದರ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಆಗಿನಿಂದಲೂ ಇಲ್ಲಿಯವರೆಗೂ ಸತತವಾಗಿ ಏರಿಕೆಯಾಗುತ್ತಲೇ ಬಂದಿದ್ದು, ಇದೀಗ ಪ್ರಸ್ತುತ 60,000 ಸನಿಹದಲ್ಲಿದೆ. ಇದರಿಂದ ಅಡಿಕೆ ಬೆಳೆಗಾರರು ಸಂತಸದಲ್ಲಿದ್ದಾರೆ. ಮತ್ತೊಂದೆಡೆ ಇದನ್ನು ಗಮನಿಸಿದರೆ, ಇನ್ನೂ ಕೆಲವೇ ದಿನಗಳಲ್ಲಿ 70,000 ರೂಪಾಯಿ ದಾಟಿದರೂ ಆಶ್ಚರ್ಯವಿಲ್ಲ.
2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಕಳೆದ ವರ್ಷ ಅಂದರೆ, 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ಬಂದು ತಲುಪಿತ್ತು. ಅದರಲ್ಲೂ ಚನ್ನಗಿರಿ ಅಡಿಕೆ ನಾಡು ಅಂತಾನೇ ಪ್ರಸಿದ್ಧಿಯಾಗಿದೆ. ಇದೀಗ ಇಳಿಕೆಯತ್ತ ಸಾಗಿದ್ದ ಅಡಿಕೆ ದರ ಮತ್ತೆ ಏರಿಕೆಯಾಗಿದ್ದು, ಇದರಿಂದ ಬೆಳೆಗಾರರು ಸಂತಸಗೊಂಡಿದ್ದಾರೆ. ಕಳೆದ ಬಾರಿ ಮುಂಗಾರು ಮಳೆ ಆರ್ಭಟದಿಂದ ಉತ್ತಮ ಫಸಲು ಏನೋ ಬಂದಿತ್ತು. ಆದ್ರೆ, ಬೆಲೆ ಮಾತ್ರ ಏರಿಕೆಯಾಗಿ ಮತ್ತೆ ಅದೇ ಆಡಿದ್ದೇ ಆಟ ಎಂಬಂತೆ ಇಳಿಯಾಗಿತ್ತು. ಇದೀಗ ಸುಧಾರಿದ್ದು, ತುಸು ಏರಿಕೆಯಾಗಿದೆ. ಇನ್ನೂ ಈ ಬಾರಿ ಕೂಡ ಮುಂಗಾರು ಆರ್ಭಟಿಸುವ ಮುನ್ಸೂಚನೆ ಇದ್ದು, ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಾಖಲೆ ಪ್ರಮಾಣದ ತಾಪಮಾನ ದಾಖಲಾಗುತ್ತಿದ್ದು, ಇದರಿಂದ ಬೆಳೆಗಾರರಿಗೆ ಆತಂಕ ಶುರುವಾಗಿದೆ. ಈ ನಡುವೆಯೇ ಹಲವೆಡೆ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಅದರಲ್ಲೂ ಮುಂದಿನ ದಿನಗಳಲ್ಲಿ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಾವಣಗೆರೆ ಜಿಲ್ಲೆ ಸಹ ದಕ್ಷಿಣ ಒಳನಾಡಿಗೆ ಸೇರಲಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಇದು ಎಲ್ಲಾ ಜಿಲ್ಲೆಗಳಿಗೂ ಆವರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.