
ರಾಯಚೂರು:ಲಿಂಗಸುಗೂರು ತಾಲ್ಲೂಕಿನ ಪ್ರವಾಹ ಪೀಡಿತ ನಡುಗಡ್ಡೆಗಳಿಗೆ ಸಂಪರ್ಕ ಸೇತುವೆ ಕಲ್ಪಿಸುವ, ಶಾಶ್ವತ ಪರಿಹಾರ ಒದಗಿಸುವ ಸರ್ಕಾರದ ಭರವಸೆಗಳು ಬರೀ ಮಾತಲ್ಲೇ ಉಳಿದಿವೆ.

j3tvkannada
ಮಳೆ ಬರದಿದ್ದರೂ ಕಷ್ಟ, ಬಂದರೂ ಕಷ್ಟ ಎಂಬುದು ಕೃಷ್ಣಾ ನದಿ ಪ್ರವಾಹದಲ್ಲಿ ದ್ವೀಪವಾಗಿ ಬದಲಾಗುವ ತಾಲ್ಲೂಕಿನ ಮಾದರಗಡ್ಡಿ, ಕರಕಲಗಡ್ಡಿ, ವೆಂಕಮ್ಮನಗಡ್ಡಿ ವಾಸಿಗಳ ಅಳಲು. ಕೃಷ್ಣಾ ನದಿ ಉಕ್ಕಿ ಹರಿಯುವ ಜುಲೈ-ಆಗಸ್ಟ್ನಲ್ಲಿ ಎದುರಾಗುವ ಸಂಕಷ್ಟ ಇವರಿಗೆ ವರ್ಷವಿಡೀ ಆತಂಕವಾಗಿ ಕಾಡುತ್ತದೆ. ನದಿಯಲ್ಲಿ ಎಷ್ಟೇ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರೂ ತೆಪ್ಪದಲ್ಲಿ ತಿರುಗಾಟ ಮಾತ್ರ ಇನ್ನೂ ತಪ್ಪಿಲ್ಲ.
ಕಾರ್ಯರೂಪಕ್ಕೆ ಬಾರದ ಸೇತುವೆ: ನಡುಗಡ್ಡೆಗಳಿಗೆ ಮತ್ತು ಕೃಷ್ಣಾ ತೀರದ ಗ್ರಾಮಗಳಿಗೆ ಸೇತುವೆ ನಿರ್ಮಾಣ ಭರವಸೆ ಬರೀ ಮಾತಲ್ಲೇ ಉಳಿದಿದೆ. ಕಡದರಗಡ್ಡಿಯಿಂದ ಗೋನವಾಟ್ಸಗೆ, ಯಳಗುಂದಿಯಿಂದ ಕರಕಲಗಡ್ಡಿ ನಡುಗಡ್ಡೆ, ಕರಕಲಗಡ್ಡಿಯಿಂದ ಮಾದರಗಡ್ಡಿಗೆ ಕಾಲ್ನಡಿಗೆ ಸೇತುವೆ ನಿರ್ಮಾಣಕ್ಕಾಗಿ ಸರ್ವೆ ಮಾಡಿ 2019ರಲ್ಲಿ ಕೆ.ಕೆ.ಆರ್.ಡಿ.ಬಿ ಯಿಂದ ₹4.40 ಕೋಟಿ ಅನುದಾನ ಒದಗಿಸಲಾಗಿತ್ತು. ಆದರೂ ಸೇತುವೆ ನಿರ್ಮಾಣವಾಗಲಿಲ್ಲ.
ಇದೇ ಸ್ಥಳದಲ್ಲಿ 2020-21ನೇ ಸಾಲಿನಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ಮಂಡಳಿಯ ಆಗಿನ ಅಧ್ಯಕ್ಷರಾಗಿದ್ದ ಕೆ.ಶಿವನಗೌಡ ನಾಯಕ ಮೂರು ಕಡೆಗಳಲ್ಲಿ ಸೇತುವೆ ನಿರ್ಮಾಣಕ್ಕಾಗಿ ₹25 ಕೋಟಿ ಅನುದಾನ ಒದಗಿಸಿದ್ದರು. ಇದಕ್ಕಾಗಿ 2022ರಲ್ಲಿ ಕಡದರಗಡ್ಡಿ ಗ್ರಾಮದ ಬಳಿ ಸರ್ವೆ ಮಾಡಿ, ಮಣ್ಣು ಪರೀಕ್ಷೆ ಮಾಡಲಾಗಿತ್ತು. ಅದೂ ಕಾರ್ಯರೂಪಕ್ಕೆ ಬರಲಿಲ್ಲ. ಇದೀಗ ಮೂರು ನಡುಗಡ್ಡೆಗಳಿಗೆ ಕಾಲ್ನಡಿಗೆ ಸೇತುವೆ ನಿರ್ಮಾಣ ಹಾಗೂ ಶೀಲಹಳ್ಳಿ ಸೇತುವೆ ಎತ್ತರಿಸಲು 2025ರ ಫೆಬ್ರವರಿಯಲ್ಲಿ ಸಮೀಕ್ಷೆ ಮಾಡಿ, ಡಿ.ಪಿ.ಆರ್ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ.
ನಡುಗಡ್ಡೆ ನಿವಾಸಿಗಳು ಮೂಲ ಸೌಕರ್ಯ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಪ್ರವಾಹದ ಸಂದರ್ಭದಲ್ಲಿ ನದಿ ದಾಟುವಾಗ ತೆಪ್ಪದಿಂದ ಬಿದ್ದು ಒಬ್ಬರು ನೀರು ಪಾಲಾಗಿದ್ದಾರೆ. ಹಲವು ವರ್ಷ ಕಳೆದಿವೆ. ಅವರ ದೇಹ ಪತ್ತೆಯಾಗದ ಕಾರಣ ಜಿಲ್ಲಾಡಳಿತ ಮೃತ ಎಂದು ಘೋಷಿಸಲು ಸಿದ್ಧವಿಲ್ಲ. ಸಂತ್ರಸ್ತ ಕುಟುಂಬಕ್ಕೆ ಪರಿಹಾರವನ್ನೂ ಕೊಡಲು ಸಿದ್ಧವಿಲ್ಲ. ಸಮಸ್ಯೆ ಮುಂದೂಡು ಹೋಗುವ ಬದಲು ಶಾಶ್ವತ ಪುನರ್ವಸತಿ ಕಲ್ಪಿಸಬೇಕು ಎಂಬುದು ನಡುಗಡ್ಡೆ ವಾಸಿಗಳ ಒತ್ತಾಯ.
ಮಳೆಗಾಲದಲ್ಲಿ ನಡುಗಡ್ಡೆ ಬಿಡುವಂತೆ ಅಧಿಕಾರಿಗಳು ಸೂಚನೆ ಕೊಡುತ್ತಾರೆ. ಕೃಷ್ಣಾ ನದಿಗೆ ಪ್ರವಾಹ ಬಂದಾಗ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ನದಿಯ ಆಚೆ ನಿಂತು ಫೋಟೊ ತೆಗೆಸಿಕೊಂಡು ಹೋಗುತ್ತಾರೆ. ಅಧಿಕಾರಿಗಳು ಎರಡು ವರ್ಷ ಇಲ್ಲಿ ಬಂದು ಕೆಲಸ ಮಾಡಿ ಹೋಗುತ್ತಾರೆ. ಹೊಸ ಅಧಿಕಾರಿಗಳು ಬಂದ ನಂತರ ಮತ್ತೆ ನಾವು ಸಮಸ್ಯೆ ತೋಡಿಕೊಳ್ಳಬೇಕು. ಸಮಸ್ಯೆಗೆ ಮಾತ್ರ ಶಾಶ್ವತ ಪರಿಹಾರ ದೊರಕುತ್ತಿಲ್ಲ ಎಂದು ಸಂತ್ರಸ್ತರು ಬೇಸರ ವ್ಯಕ್ತಪಡಿಸುತ್ತಾರೆ.