
ಬಳ್ಳಾರಿ: ಜನರಿಗೆ ಎಷ್ಟೇ ತಿಳಿವಳಿಕೆ ನೀಡಿದರೂ ಸಮಾಜದಲ್ಲಿ ಕೆಲವೊಂದು ಅನಿಷ್ಟ ಪದ್ಧತಿಗಳು ಮಾತ್ರ ಇಂದಿಗೂ ಜೀವಂತವಾಗಿವೆ. ಅದರಲ್ಲಿ ದೇವದಾಸಿ ಪದ್ಧತಿ ಕೂಡ ಒಂದು ಎನ್ನಬಹುದು. ಈ ಅನಿಷ್ಟ ಪದ್ಧತಿಯನ್ನ ನಿಲ್ಲಿಸಲು ಅದೇಷ್ಟೇ ಕಠಿಣ ಕಾನೂನುಗಳನ್ನ ಜಾರಿಗೆ ತಂದಿದ್ದರೂ ಗೌಪ್ಯವಾಗಿ ಇಂದಿಗೂ ಈ ಪದ್ದತಿಗೆ ಅದೇಷ್ಟೋ ಬಲಿಯಾಗುತ್ತಿದ್ದಾರೆ. ಸದ್ಯ ಇದಕ್ಕೆ ಜಿಲ್ಲೆಯ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು, ಪೊಲೀಸರ ಜಾಣ ನಡೆಯಿಂದ ಯುವತಿ ದೇವದಾಸಿ ಆಗೋದ್ರಿಂದ ಜಸ್ಟ್ ಮಿಸ್ ಆಗಿದ್ದಾಳೆ.

j3tvkannada
ಕುಟುಂಬಸ್ಥರಿಂದಲೇ ದೇವದಾಸಿ ಪದ್ಧತಿಗೆ ದೂಡಲಾಗುತ್ತಿದ್ದ ಯುವತಿಯನ್ನು ಬಳ್ಳಾರಿ ಜಿಲ್ಲೆಯ ಕುರಿಗೋಡು ಪೊಲೀಸರು ರಕ್ಷಿಸಿ, ಆಕೆ ಪ್ರೀತಿಸಿದ್ದ ಯುವಕನ ಜೊತೆಗೆ ವಿವಾಹ ಮಾಡಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ವದ್ದಟ್ಟಿ ಕ್ರಾಸ್ನ ಯುವತಿ ತನ್ನದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಯುವತಿಯ ತಾಯಿ ಪ್ರೀತಿಯನ್ನು ವಿರೋಧಿಸಿದ್ದರು. ಅಲ್ಲದೇ ನೀನು ಏನಾದರೂ ಆ ಯುವಕನನ್ನ ಮದುವೆ ಆದರೆ ದೇವದಾಸಿ ಆಗಬೇಕಾಗುತ್ತದೆ ಎಂದು ನಿತ್ಯವೂ ಕಿರುಕುಳ ಕೊಡುತ್ತಿದ್ದರು.
ಯುವತಿ ತಾನು ಪ್ರೀತಿಸಿದ ಯುವಕನ ಕೈ ಹಿಡಿಯಲು ಮುಂದಾಗಿದ್ದರಿಂದ ಬಲವಂತವಾಗಿ ಯುವತಿಗೆ ಮುತ್ತು ಕಟ್ಟಿಸಿ, ದೇವದಾಸಿ ಮಾಡಲು ತಾಯಿ ಯತ್ನಿಸಿದ್ದರು. ದೇವದಾಸಿ ಮಾಡುವ ತಾಯಿಯ ನಿರ್ಧಾರ ಒಪ್ಪದ ಯುವತಿ, ಪುನರ್ವಸತಿ ಕಲ್ಪಿತ ದೇವದಾಸಿಯರ ವಿಮೋಚನಾ ಸಂಘವನ್ನು ಸಂಪರ್ಕ ಮಾಡಿದ್ದಳು. ಆಗ ದೇವದಾಸಿ ವಿಮೋಚನಾ ಸಂಘದವರು ಕೂಡಲೇ ಕುರುಗೋಡು ಠಾಣೆಯ ಪಿ.ಎಸ್.ಐ ಸುಪ್ರಿತ್ ಅವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಲರ್ಟ್ ಆದ ಪಿ.ಎಸ್ಐ ಯುವತಿ ಮತ್ತು ಯುವಕನ ಕುಟುಂಬದವರನ್ನು ಠಾಣೆಗೆ ಕರೆಯಿಸಿ ದೇವದಾಸಿ ಪದ್ಧತಿಯ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ನೀಡಿ ಮನವೊಲಿಸಿದ್ದಾರೆ.
ಆಗ ಪ್ರೀತಿಸಿದ ಇಬ್ಬರನ್ನೂ ಒಂದು ಮಾಡಲು ನಿರ್ಧರಿಸಿ, ಎಲ್ಲರ ಸಮ್ಮುಖದಲ್ಲಿಯೇ ಕುರುಗೋಡಿನ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ವಿವಾಹ ಮಾಡಿಸಿದ್ದಾರೆ. ಈ ಮೂಲಕ ದೇವದಾಸಿ ಪದ್ದತಿಗೆ ತಳ್ಳಲ್ಪಡ್ತಿದ್ದ ಯುವತಿಯನ್ನ ರಕ್ಷಿಸಿ, ತಾನು ಪ್ರೀತಿಸಿದ ಯುವಕನ ಕೈ ಹಿಡಿಯುವಂತೆ ಮಾಡಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಈ ಘಟನೆಯನ್ನ ಗಮನಿಸಿದರೆ ಇನ್ನೂ ಮುತ್ತು ಕಟ್ಟಿ ದೇವದಾಸಿ ಬಿಡುವ ಪದ್ಧತಿ ಸಮಾಜದಲ್ಲಿ ಜೀವಂತವಾಗಿದೆ ಅನ್ನೋದು ಸ್ಪಷ್ಟವಾಗಿದೆ. ಈ ಪದ್ಧತಿಯನ್ನು ತಡೆಗಟ್ಟಲು ಸರ್ಕಾರ ಕಾಯ್ದೆ ಕಟ್ಟಳೆಗಳನ್ನು ಜಾರಿ ಮಾಡಿದ್ದರೂ ತೆರೆಮರೆಯಲ್ಲಿ ಇನ್ನೂ ಜೀವಂತವಾಗಿದೆ. ಇನ್ನೂ ಯುವತಿಯನ್ನ ದೇವದಾಸಿಯನ್ನಾಗಿ ಮಾಡಲು ಹೊರಟಿದ್ದ ಮಾಹಿತಿ ಬಂದ ಕೂಡಲೇ ಕಾರ್ಯಪ್ರವೃತ್ತರಾಗಿ ಆಗಬೇಕಿದ್ದ ಅನಾಹುತವನ್ನ ತಡೆದಿರುವ ಪೊಲೀಸರ ಕಾರ್ಯವು ಕೂಡ ಇಲ್ಲಿ ಪ್ರಶಂಸನೀಯವಾಗಿದೆ..