
ಶಿವಮೊಗ್ಗ:ಸಾಗರ ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಗೆಹಳ್ಳ ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಮಂಗಳವಾರ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.

j3tvkannada
ಕಳೆದ ಕೆಲವು ದಿನಗಳಿಂದ ನೀರಿನ ಪೂರೈಕೆ ಸರಿಯಾಗಿ ಇಲ್ಲದ ಕಾರಣ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ. ಸರ್ಕಾರದ ಬಾವಿಯೊಂದಕ್ಕೆ ಪಂಚಾಯಿತಿ ಆಡಳಿತದ ಅನುಮತಿ ಪಡೆದು ಗ್ರಾಮಸ್ಥರು ಮೋಟರ್ ಅಳವಡಿಸಿ ನೀರನ್ನು ಪಡೆಯುತ್ತಿದ್ದಾರೆ. ಇದಕ್ಕೂ ಗ್ರಾಮದ ಹೊರಗಿನ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ. ಸರ್ಕಾರಿ ಬಾವಿಯಿಂದ ನೀರು ಪಡೆದುಕೊಳ್ಳಲು ಬೇಸಿಗೆಯ ಈ ಕಾಲದಲ್ಲಿ ಕೆಲವರು ತೊಂದರೆ ನೀಡುತ್ತಿರುವುದು ಗ್ರಾಮಸ್ಥರಿಗೆ ಕಿರಿಕಿರಿಯಾಗಿದೆ.
ಈ ಸಂಬಂಧ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್, ಕಾಗೆಹಳ್ಳ ಗ್ರಾಮಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಉಂಟಾಗಿರುವ ತೊಂದರೆಯನ್ನು ಬಗೆಹರಿಸುವುದಾಗಿ ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮರನಾಥ್, ಪ್ರಮುಖರಾದ ಸುರೇಶ್ ಶೆಟ್ಟಿ, ನಾಗರತ್ನ, ರಫೀಕ್, ಮಹಾಬಲೇಶ್ವರ, ಗದ್ದೆಮನೆ ಗಣಪತಿ ಹಾಗೂ ರಾಮು ಇದ್ದರು.