
ಬೀದರ್: ಇದು 2025ನೇ ಇಸ್ವಿ ಆಗಿರುವುದರಿಂದ ಬೀದರ್ ಜಿಲ್ಲೆಯಲ್ಲಿ ಅಷ್ಟೇ ಮೊತ್ತದ (₹2,025 ಕೋಟಿ) ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏ. 16ರಂದು ಶಂಕುಸ್ಥಾಪನೆ ನೆರವೇರಿಸುವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

j3tvkannada
ಏ.16ರ ಸಂಜೆ 4ಕ್ಕೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿಯವರು ಎಲ್ಲಾ ಕಾಮಗಾರಿಗಳಿಗೆ ಅಲ್ಲೇ ಚಾಲನೆ ನೀಡುವರು. ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು ಅವುಗಳ ಉದ್ಘಾಟನೆ, ಇನ್ನಷ್ಟೇ ಆರಂಭವಾಗಲಿರುವ ಕಾಮಗಾರಿಗಳ ಶಂಕುಸ್ಥಾಪನೆ ಒಟ್ಟಿಗೆ ನೆರವೇರಿಸುವರು. ಸುಮಾರು 50 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಏ.15ರಿಂದ ನಾಗರಿಕ ವಿಮಾನಯಾನ ಸೇವೆ ಆರಂಭವಾಗಲಿದೆ. ಆದರೆ, ಮುಖ್ಯಮಂತ್ರಿಯವರು ಏ.17ರಂದು ಬೆಳಿಗ್ಗೆ ಐದು ಜನ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ವಿತರಿಸಿ ಚಾಲನೆ ನೀಡುವರು. ಏ.16ರ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ, ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ವೆಂಕಟೇಶ್, ಎನ್.ಎಸ್. ಬೋಸರಾಜ್, ಜಮೀರ್ ಅಹಮ್ಮದ್ ಖಾನ್, ರಹೀಂ ಖಾನ್, ಸತೀಶ್ ಜಾರಕಿಹೊಳಿ, ಡಾ.ಶರಣಪ್ರಕಾಶ ಪಾಟೀಲ ಮತ್ತಿತರರು ಪಾಲ್ಗೊಳ್ಳುವರು ಎಂದು ವಿವರಿಸಿದರು.
ಬೀದರ್-ಬೆಂಗಳೂರು ನಡುವೆ ನಾಗರಿಕ ವಿಮಾನಯಾನ, ಜಿಲ್ಲಾಡಳಿತ ಸಂಕೀರ್ಣ, ಮೆಹಕರ್ ಏತ ನೀರಾವರಿ ಯೋಜನೆ, ಔರಾದ್ ತಾಲ್ಲೂಕಿನ 36 ಕೆರೆ ತುಂಬಿಸುವುದು, ಭಾಲ್ಕಿಯಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣ ಪ್ರಮುಖ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು ಎಂದು ತಿಳಿಸಿದರು.
ಬೀದರ್ ಜಿಲ್ಲೆ ಸರ್ವಧರ್ಮ ಸಮನ್ವಯದ ನಾಡು. ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಬಸವಕಲ್ಯಾಣದ ಅನುಭವ ಮಂಟಪ, ಝರಣಿ ನರಸಿಂಹ ಸ್ವಾಮಿ ಕ್ಷೇತ್ರ, ಪಾಪನಾಶ, ಗುರುದ್ವಾರ, ಮಹಮೂದ್ ಗಾವಾನ್ ಮದರಸಾ, ಸೇಂಟ್ ಮೆಥೋಡಿಸ್ಟ್ ಚರ್ಚ್ ಇದೆ. ಈಗ ಹೊನ್ನಿಕೇರಿ ಅರಣ್ಯ ಪ್ರದೇಶವನ್ನು ಪರಿಸರ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುತ್ತಿದ್ದು, ಬೀದರ್ನಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ವಿಮಾನಯಾನ ಸೇವೆ ಮುಂದಿನ ದಿನಗಳಲ್ಲಿ ದೇಶ ವಿದೇಶಗಳ ಪ್ರವಾಸಿಗರಿಗೆ ನೆರವಾಗಲಿದೆ ಎಂದರು.