

j3tvkannada
ಕೋಲಾರ : ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಕೆಲ ದಲಿತ ನಾಯಕರು ಘೋಷಣೆ ಕೂಗಿದರು.
ಹೋರಾಟಗಾರ ಬೀರಮಾನಹಳ್ಳಿ ಆಂಜನಪ್ಪ ಎಂಬುವವರು ವೇದಿಕೆ ಮುಂಭಾಗ ಬಂದು ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಕೊತ್ತೂರು ಮಂಜುನಾಥ್ ಪಾಲ್ಗೊಳ್ಳಬಾರದು ಎಂದು ಪಟ್ಟು ಹಿಡಿದರು.
2013ರಲ್ಲಿ ಮುಳಬಾಗಿಲು ವಿಧಾನಸಭೆ ಮೀಸಲು ಕ್ಷೇತ್ರದಲ್ಲಿ ಕೊತ್ತೂರು ಮಂಜುನಾಥ್ ಎಸ್.ಸಿ ಪ್ರಮಾಣಪತ್ರ ಪಡೆದು ಮೀಸಲಾತಿ ದುರುಪಯೋಗ ಪಡಿಸಿಕೊಂಡು ಗೆದ್ದಿದ್ದರು. ಮೀಸಲಾತಿ ಕದ್ದವರು ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಲ್ಲಿಸಬಾರದು. ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂದು ಧಿಕ್ಕಾರ ಕೂಗಿದರು. ತಕ್ಷಣವೇ ಪೊಲೀಸರು ಮಧ್ಯ ಪ್ರವೇಶಿಸಿ ವಶಕ್ಕೆ ಪಡೆದು ಶಾಸಕರನ್ನು ಹೊರಗೆ ಕರೆದುಕೊಂಡು ಹೋದರು.
ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಪೊಲೀಸರು ನೋಟಿಸ್ ಕೂಡ ನೀಡಿದ್ದಾರೆ. ಇನ್ನೊಂದೆಡೆ ರಮೇಶ್ ಹಾರೋಹಳ್ಳಿ ಸೇರಿದಂತೆ ಕೆಲ ಮುಖಂಡರು ಶಾಸಕರನ್ನು ಬೆಂಬಲಿಸಿ ಘೋಷಣೆ ಕೂಗಿದರು. ಅವರನ್ನೂ ಪೊಲೀಸರು ಸಭಾಂಗಣದಿಂದ ಹೊರಗೆ ಕಳುಹಿಸಿದರು.