ತುಮಕೂರು:ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರಿಂದ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಪಟ್ಟಣ ಪಂಚಾಯಿತಿವರೆಗೂ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಓರ್ವ ಎ.ಎಸ್ .ಪಿ, ಇಬ್ಬರು ಡಿ.ವೈ.ಎಸ್. ಪಿ ನೇತೃತ್ವದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಈ ಪ್ರತಿಭಟನೆ ನಡೆಯಿತು. ಕೊರಟಗೆರೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಸ್ವಕ್ಷೇತ್ರವಾಗಿದೆ. ಇಲ್ಲಿ 2022 ನವೆಂಬರ್ 2 ರಂದು ಕನ್ನಡ ಧ್ವಜ ಸ್ತಂಭವನ್ನು ನಿರ್ಮಿಸಲಾಗಿತ್ತು. ಕೊರಟಗೆರೆ ಪಟ್ಟಣ ಪಂಚಾಯಿತಿಯಿಂದ ಅನುಮತಿ ಪಡೆಯದೆ ಕನ್ನಡ ಧ್ವಜ ಸ್ಥಂಭವನ್ನು ನಿರ್ಮಾಣ ಮಾಡಲಾಗಿತ್ತು ಎಂಬ ಕಾರಣಕ್ಕಾಗಿ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಆಗುತ್ತದೆ ಎಂದು ಕನ್ನಡ ಧ್ವಜ ಸ್ತಂಭವನ್ನು ತೆರವುಗೊಳಿಸಲಾಗಿತ್ತು.
ಕಳೆದ 23 ರಂದು ತಡರಾತ್ರಿ ಕೊರಟಗೆರೆ ತಹಶಿಲ್ದಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ತೆರವುಗೊಳಿಸಿದ ಧ್ವಜಸ್ತಂಭವನ್ನು ಮತ್ತೆ ನಿರ್ಮಾಣ ಮಾಡುವಂತೆ ಹಾಗೂ ಕನ್ನಡ ಮಾತೆಗೆ ಅವಮಾನ ಮಾಡಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಯಿತು.