ಚಿಕ್ಕಬಳ್ಳಾಪುರ: ನಗರದಲ್ಲಿ ಸಾಮಾನ್ಯಕ್ಕಿಂತ ವಿಪರೀತವಾಗಿ ಬಿಸಿಲು ಹೆಚ್ಚಾಗಿದ್ದು, ಜನ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಬಾಯಾರಿಕೆ, ತಲೆನೋವು, ತಲೆ ತಿರುಗುವಿಕೆ, ಮಾಂಸ ಖಂಡಗಳ ಸೆಳೆತ, ಅತಿ ಹೆಚ್ಚಾಗಿ ಬೆವರುವುದು, ವಾಂತಿ, ತೀವ್ರಗೊಂಡ ಹೃದಯ ಬಡಿತ, ಪ್ರಜ್ಞೆ ತಪ್ಪುವಿಕೆ ಮತ್ತು ಮೂರ್ಚೆ ರೋಗ ಬರುವುದು ಸನ್ ಸ್ಟ್ರೋಕ್ನ ಲಕ್ಷಣವಾಗಿದೆ. ಇನ್ನೊಂದೆಡೆ ತೋಟಗಳಿಗೆ ನೀರು ಹರಿಸುವುದೇ ಕಷ್ಟವಾಗಿದೆ. ಎಷ್ಟೇ ನೀರು ಹರಿಸಿದರೂ ಬೆಳೆಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ.
ಬೆಳಗ್ಗೆ 9ರ ನಂತರ ಮನೆಯಿಂದ ಹೊರ ಬರುವುದೇ ಕಷ್ಟ. ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಸಾಮಾನ್ಯವಾಗಿ 30 ರಿಂದ 32 ಡಿಗ್ರಿ ಸೆಲ್ಸಿಯಸ್ ಇರುತ್ತಿದ್ದ ಬಿಸಿಲ ತಾಪ, ಈ ಬಾರಿ 34ರಿಂದ 36 ಡಿಗ್ರಿ ಸೆಲ್ಸಿಯಸ್ವರೆಗೂ ಏರಿಕೆಯಾಗಿದೆ. ಜಿಲ್ಲೆಯ ಕೆರೆ, ಕಟ್ಟೆಗಳ ಒಡಲು ಆಗಲೇ ಬರಿದಾಗಿವೆ. ಹಗಲಿನ ವೇಳೆ ಸುಡುವ ಬಿಸಿಲು, ರಾತ್ರಿ ವೇಳೆ ಸೆಕೆಯ ಉಪಟಳದಿಂದ ಜನರು ಬೇಸತ್ತು ಹೋಗಿದ್ದಾರೆ. ಫ್ಯಾನ್, ಎ.ಸಿ ಇಲ್ಲದೆ ಇರಲು ಸಾಧ್ಯವೇ ಇಲ್ಲಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾದ್ಯಂತ ಕಳೆದ ಎರಡು-ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗದ ಕಾರಣ ಜಿಲ್ಲೆಯ ಕೆರೆ, ಕಟ್ಟೆಗಳ ಒಡಲು ಆಗಲೇ ಬರಿದಾಗಿವೆ. ಬೇಸಿಗೆ ಶುರುವಾಗುತ್ತಿದ್ದಂತೆ ಕೆರೆಗಳಲ್ಲಿದ್ದ ಅಲ್ಪಸ್ವಲ್ಪ ನೀರು ಕೂಡಾ ಕಮರಿ ಹೋಗಿದೆ. ಇನ್ನೊಂದೆಡೆ ಅಂತರ್ಜಲ ಪ್ರಮಾಣವೂ ಕಡಿಮೆಯಾಗಿದ್ದು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಯಲುಸೀಮೆ ಪ್ರದೇಶವಾದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಇದೇ ಪರಿಸ್ಥಿತಿ ಇದೆ. ಸರಕಾರಿ ಕಚೇರಿಗಳಿಗೆ ಅಧಿಕಾರಿಗಳು ಮತ್ತು ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಲು ಪರದಾಡುವಂತಾಗಿದೆ. ದಿನವಿಡೀ ನಡೆಯುತ್ತಿದ್ದ ವಾರದ ಸಂತೆಗಳು ಬೆಳಗ್ಗೆ 10 ಗಂಟೆವರೆಗೆ ಮತ್ತು ಸಂಜೆ 4ರ ನಂತರ ವಹಿವಾಟು ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲಿನಿಂದ ಪಾರಾಗಬೇಕಾದರೆ ಸಾಧ್ಯವಾದಷ್ಟು ನೆರಳಿನಲ್ಲೇ ಇರಬೇಕು. ಹೆಚ್ಚು ನೀರು, ನಿಂಬೆ ರಸ, ಹಣ್ಣಿನ ರಸ ಅಥವಾ ನೀರು ಮಜ್ಜಿಗೆಯನ್ನು ಹೆಚ್ಚಾಗಿ ಸೇವಿಸಬೇಕು. ದೇಹವನ್ನು ತಂಪಾಗಿರಿಸಿಕೊಳ್ಳಬೇಕು.