
ಕೋಲಾರ : ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಇದೇ ತಿಂಗಳ 14 ರಂದು ನಗರದಲ್ಲಿ ಅದ್ದೂರಿಯಾಗಿ ನಡೆಸಲು ವಿವಿಧ ಸಂಘಟನೆಗಳು ತೀರ್ಮಾನಿಸಿದ್ದು ಈ ಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆಕರ್ಷಕ ಪಲ್ಲಕ್ಕಿ, ಸ್ತಬ್ಧಚಿತ್ರಗಳಿಗೆ ನಗದು ಬಹುಮಾನ ದೊರೆಯಲಿದೆ ಎಂದು ದಲಿತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ತಿಳಿಸಿದರು.

j3tvkannada
ಈ ಬಾರಿ ಜಯಂತಿಯ ಮೆರವಣಿಗೆಯಲ್ಲಿ ಭಾಗವಹಿಸುವ ಪಲ್ಲಕ್ಕಿ, ಸ್ತಬ್ದಚಿತ್ರ ತೇರುಗಳಿಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿಧಾನ ಪರಿಷತ್ ಎಂ.ಎಲ್. ಅನಿಲ್ ಕುಮಾರ್ ಸಹಕಾರದಲ್ಲಿ ಶಾಸಕರಾದ ಕೊತ್ತೂರು ಮಂಜುನಾಥ್ ಮೊದಲ ಬಹುಮಾನವಾಗಿ ₹ 1 ಲಕ್ಷ, ಎರಡನೇ ಬಹುಮಾನವಾಗಿ ₹ 75 ಸಾವಿರ ಹಾಗೂ ಮೂರನೇ ಬಹುಮಾನವಾಗಿ ₹ 50 ಸಾವಿರ ಮತ್ತು ಮೆರವಣಿಗೆಯಲ್ಲಿ ಭಾಗವಹಿಸುವ ಪ್ರತಿ ಪಲ್ಲಕ್ಕಿಗೂ ₹10 ಸಾವಿರ ಗೌರವಧನ ನೀಡುವುದಾಗಿ ಪ್ರಕಟಿಸಿದ್ದಾರೆ ಎಂದರು. ಜಯಂತಿಯಂದು ಬೆಳಿಗ್ಗೆ 9 ಗಂಟೆಗೆ ನಗರದ ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಜನಪ್ರತಿನಿಧಿಗಳು, ದಲಿತ ಹಾಗೂ ಅಲ್ಪಸಂಖ್ಯಾತ ಮುಖಂಡರು ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಮೆರವಣಿಗೆಯಲ್ಲಿ ಭಾಗವಹಿಸುವ ಪಲ್ಲಕ್ಕಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಚಾಲನೆ ನೀಡುತ್ತಾರೆ. ತಾಲ್ಲೂಕಿನ ಎಲ್ಲಾ ಗ್ರಾಮಗಳಿಂದ ಅಂಬೇಡ್ಕರ್ ಪಲ್ಲಕ್ಕಿಗಳನ್ನು ತರಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ಸುಗೊಳಿಸಬೇಕು ಎಂದು ಮನವಿ ಮಾಡಿದರು.