
ರಾಮನಗರ : ತಾಲ್ಲೂಕಿನ ಬಿಡದಿ ಪುರಸಭೆ ಸಿಬ್ಬಂದಿ ಬುಧವಾರ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿದ್ದ ಅನಧಿಕೃತ ಅಂಗಡಿ ಹಾಗೂ ಪಾದಚಾರಿ ಮಾರ್ಗದ ವ್ಯಾಪಾರಿಗಳನ್ನು ತೆರವುಗೊಳಿಸಿದರು. ಬೆಳಗ್ಗೆ 6ಕ್ಕೆ ಬೃಹತ್ ನಿರ್ಮಾಣ ಯಂತ್ರಗಳ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮುಂದಾದರು. ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಆರಂಭವಾದ ಕಾರ್ಯಾಚರಣೆಯನ್ನು ಬೀದಿಬದಿ ವ್ಯಾಪಾರಿಗಳು ವಿರೋಧಿಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಸೂಚನೆ ನೀಡದೆ ದೌರ್ಜನ್ಯ ಮಾಡಲಾಗುತ್ತಿದೆ. ಇದು ಕಾನೂನುಬಾಹಿರ. ನ್ಯಾಯಸಮ್ಮತವಲ್ಲದ ನಡೆ ಎಂದು ಆರೋಪಿಸಿದರು. ಇದಕ್ಕೆ ಕಿವಿಗೊಡದ ಸಿಬ್ಬಂದಿ ತೆರವು ಕಾರ್ಯಾಚರಣೆ ಮುಂದುವರೆಸಿದರು. ಪುರಸಭೆ ಅಧ್ಯಕ್ಷ ಎಂ.ಎನ್. ಹರಿಪ್ರಸಾದ್, ಮುಖ್ಯಾಧಿಕಾರಿ ಕೆ.ಜಿ.ರಮೇಶ್, ಬಿಡದಿ ಇನ್ಸ್ಪೆಕ್ಟರ್ ಶಂಕರ್ ನಾಯಕ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಮೊದಲಿಗೆ ಬಿಜಿಎಸ್ ವೃತ್ತದ ಬಳಿ ಹಾಗೂ ಪುರಸಭೆ ಮುಖ್ಯರಸ್ತೆಯಲ್ಲಿ ಫುಟ್ಪಾತ್ ತೆರವು ಕಾರ್ಯಾಚರಣೆ ನಡೆಸಿದರು.

j3tvkannada
ಬಿಡದಿ ಬೆಳೆಯುತ್ತಿದ್ದು, ಸರ್ಕಾರಿ ಜಾಗ ಹಾಗೂ ಪಾದಚಾರಿ ಮಾರ್ಗ ಒತ್ತುವರಿಯಿಂದ ಸಾರ್ವಜನಿಕರು ಮತ್ತು ವಾಹನಗಳ ಓಡಾಟಕ್ಕೆ ಬಹಳ ತೊಂದರೆಯಾಗುತ್ತಿತ್ತು. ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇದರಿಂದ ಯಾವುದೇ ನಾಗರಿಕರಿಗೆ ತೊಂದರೆಯಾಗಿಲ್ಲ ಎಂದು ಸ್ಥಳದಲ್ಲಿದ್ದ ಪುರಸಭೆ ಅಧ್ಯಕ್ಷ ಎಂ.ಎನ್. ಹರಿಪ್ರಸಾದ್ ಸ್ಪಷ್ಟಪಡಿಸಿದರು. ಬಿಡದಿ ಪ್ರವೇಶಿಸಲು ಮತ್ತು ಹೊರ ಬರಲು ಒಂದೇ ಮುಖ್ಯರಸ್ತೆಯಿದೆ. ಪೇಟೆಗೆ ಬರುವವರು ಮತ್ತು ಪುರಸಭೆಗೆ ಬರುವ ವಾಹನಗಳ ಸಂಚಾರದಿಂದ ವಾಹನ ದಟ್ಟನೆ ಸಮಸ್ಯೆ ಎದುರಾಗುತ್ತಿದೆ. ವಾಹನಗಳ ಪಾರ್ಕಿಂಗ್ ಸಮಸ್ಯೆ ಉಲ್ಬಣವಾಗಿದೆ. ಹೀಗಾಗಿ ಒತ್ತುವರಿ ತೆರವು ಅನಿವಾರ್ಯವಾಗಿದೆ ಎಂದು ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡರು. ಏಕಾಏಕಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿಲ್ಲ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಒಂದು ತಿಂಗಳ ಹಿಂದೆಯೇ ಎಲ್ಲರಿಗೂ ನೋಟಿಸ್ ನೀಡಲಾಗಿತ್ತು. ಸುಂದರ ಪಟ್ಟಣ ನಿರ್ಮಿಸುವುದು ಪುರಸಭೆಯ ಉದ್ದೇಶ ಎಂದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಜಿ.ಲೋಹಿತ್ ಕುಮಾರ್, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಸಿ. ಉಮೇಶ್, ಎನ್.ಕುಮಾರ್, ಶ್ರೀನಿವಾಸ್, ರೇಣುಕಯ್ಯ, ಶಿವರಾಮ್, ಶಶಿಕುಮಾರ್, ಮಹೇಶ್, ನಾಗೇಶ್, ಪುರಸಭೆ ಅಧಿಕಾರಿಗಳಾದ ನಂಜುಂಡಸ್ವಾಮಿ, ಶ್ಯಾಮ್, ಶೃತಿ, ಶಿಲ್ಪ ಹಾಜರಿದ್ದರು.