
ರಾಯಚೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘದ ಪದಾಧಿಕಾರಿಗಳು ನಗರದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಮಂಗಳವಾರ ಸಹಿ ಸಂಗ್ರಹ ಅಭಿಯಾನ ನಡೆಸಿದರು.

ಹಾಲು, ವಿದ್ಯುತ್, ಮೊಸರು, ಗ್ಯಾಸ್ ಸಿಲಿಂಡರ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಹಾಲು, ಮೊಸರಿಗೆ ಪ್ರತಿ ಲೀಟರ್ ಗೆ ₹4 ಹೆಚ್ಚಳ ಮಾಡಿದ್ದು, ವಿದ್ಯುತ್ ದರವೂ ಸಹ ಪ್ರತಿ ಕಿಲೋವ್ಯಾಟ್ಗೆ ₹25 ಹೆಚ್ಚಳ ಮಾಡಿದನ್ನು ಖಂಡಿಸಿದರು. ದೇಶದಲ್ಲಿ ಶೇ10 ರಷ್ಟು ಜನರು ಸಂಪತ್ತಿನ 80 ರಷ್ಟು ಅನುಭವಿಸುತ್ತಿದ್ದು, ಶೇ90 ರಷ್ಟು ಪ್ರಜೆಗಳು 20 ರಷ್ಟು ಸಂಪತ್ತಿನಲ್ಲಿ ಹರಿದು ಹಂಚಿ ತಿನ್ನುತ್ತಿದ್ದಾರೆ. ಈಗ ಶೇ 20 ರಷ್ಟರಲ್ಲಿಯೂ ಮೇಲ್ಪಂಕ್ತಿಯ ಜನರೇ ಹೆಚ್ಚು ಆದಾಯವನ್ನು ಗಿಟ್ಟಿಸಿಕೊಂಡು ಉಳಿದ 90 ರಷ್ಟು ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಉಳ್ಳವರು ಅದ್ದೂರಿ ಮದುವೆ, ಐಷಾರಾಮಿ ಭೋಗ ಬದುಕಿನಲ್ಲಿ ತೇಲಾಡುತ್ತಿದ್ದರೆ ಇನ್ನೊಂದೆಡೆ ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರು, ಹಿಂದುಳಿದ ವರ್ಗದ ಜನರು ಸ್ಥಿತಿ ಶೋಚನೀಯವಾಗಿದೆ ಎಂದು ಅಸಮಾಧಾನ ಹೊರಹಾಕಿದರು.