
ಕಲಬುರಗಿ : ಅಧುನಿಕತೆಯ ಭರಾಟೆಯಲ್ಲಿ ನಾವಿಂದು ನಮ್ಮ ಸಂಸ್ಕೃತಿ, ಪರಂಪರೆಯನ್ನು ಮರೆಯುತ್ತಿದ್ದೇವೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದು ಪ್ರಾಂಶುಪಾಲರಾದ ಪ್ರೇಮಿಳಾ ಅಂಬಾರಾಯ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡ ‘ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ ಘೋಷಣೆಯೊಂದಿಗೆ ಜನಪದ ಉತ್ಸವ ಕಾರ್ಯಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ರಾಜ್ಯಾದ್ಯಂತ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಜಾನಪದ ಉತ್ಸವ ಆಯೋಜಿಸುವ ಮೂಲಕ ಸಾಂಪ್ರದಾಯಿಕ ಜಾನಪದ ಕಲೆ, ಸಂಸ್ಕೃತಿ ಪುನರುಜ್ಜಿವನಗೊಳಿಸುವ ಕೆಲಸವನ್ನು ಸರ್ಕಾರ ಮಾಡುತ್ತಿರುವುದು ಉತ್ತಮವಾಗಿದೆ. ಇಂದು ಯಾಂತ್ರಿಕತೆಯ ಪ್ರಭಾವ ಹೆಚ್ಚಾಗಿ ಜಾನಪದ ಕಲೆ, ನಮ್ಮ ಪರಂಪರೆ ಅವನತಿ ಹೊಂದುತ್ತಿದೆ. ಜಾನಪದ ಜಾತ್ರೆ ಉತ್ಸವಗಳ ಯುವ ಪೀಳಿಗೆಯಲ್ಲಿ ಜಾನಪದ ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಪ್ರಮುಖ ವೇದಿಕೆಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.

ಪ್ರಾಧ್ಯಾಪಕ ರವಿಚಂದ್ರ ಕಂಟೆಕುರೆ ಮಾತನಾಡಿ, ‘ಪದವಿ ಕಾಲೇಜುಗಳಲ್ಲಿ ಜಾನಪದ ಉತ್ಸವಗಳನ್ನು ಪ್ರೋತ್ಸಾಹಿಸುವಲ್ಲಿ ಸರ್ಕಾರದ ಕಾರ್ಯದಿಂದ ವಿದ್ಯಾರ್ಥಿಗಳಲ್ಲಿ ಜಾನಪದ ಸಂಸ್ಕೃತಿಯ ಬಗ್ಗೆ ಮೆಚ್ಚುಗೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ. ಜಾನಪದ ಕಲೆ, ಸಂಸ್ಕೃತಿ ನಮ್ಮ ಹೆಮ್ಮೆಯಾಗಿದೆ ಎಂದರು. ಹಿಂದೂಸ್ಥಾನಿ ಸಂಗೀತ ಕಲಾವಿದ ಮಹಾದೇವಪ್ಪ ಪೂಜಾರಿ ಅವರು ಜಾನಪದ ಉತ್ಸವ ಉದ್ಘಾಟಿಸಿದರು. ಶಿವಪ್ಪ ಭೂಸನೂರ ಸ್ವಾಗತಿಸಿದರು. ಪ್ರೊ. ಗೀತಾ ನಿರೂಪಿಸಿದರು. ಉಪನ್ಯಾಸಕ ರಾಜಶೇಖರ ಪಾಟೀಲ ವಂದಿಸಿದರು. ಪ್ರಾದ್ಯಾಪಕರಾದ ರಮೇಶ ಮಾಳಗೆ, ಅರವಿಂದ ಭದ್ರಶೆಟ್ಟಿ, ದೊಂಡಿಬಾ ನಿಕ್ಕಂ, ಶರಣು ಬಾವಿ, ಅಕ್ಟರ್ ಅಲಿ, ನಾಗಮೂರ್ತಿ ಬಡಿಗೇರ, ಮಹಾದೇವ ಮೋಘಾ, ರಾಜು ಹಿರೇಮಠ, ರವಿಚಂದ್ರ ಬಿರಾದಾರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಗ್ರಾಮೀಣ ಸೊಗಡು, ಉಡುಪುಗಳು ಧರಿಸಿ ಮಿಂಚಿದರು. ಪಟ್ಟಣದ ಬಸ್ ನಿಲ್ದಾಣದಿಂದ ಎತ್ತಿನ ಬಂಡಿಯಲ್ಲಿ ಉತ್ಸವ ಕಾಲೇಜಿನ ಪ್ರಾಂಗಣಕ್ಕೆ ಮೆರವಣಿಗೆ ಮೂಲಕ ಸಾಗಿ ಬಂತು.