
ಕೊಪ್ಪಳ: ಯುಗಾದಿ ಎಂದರೆ ನವ ಸಂವತ್ಸರ, ಹಳೇ ಬೇರಿಗೆ ಹೊಸ ಚಿಗುರೊಡೆಯುವ ಕಾಲ. ಈ ಹಬ್ಬದ ಸಮಯದಲ್ಲಿ ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಹಬ್ಬದ ಆಚರಣೆ ಹಾಗೂ ಸಾಂಸ್ಕೃತಿಕವಾಗಿಯೂ ಅನೇಕ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ ಅದರಲ್ಲಿ ಹಗಲು ವೇಷಗಾರಿಕೆ ಪ್ರಮುಖವಾದದ್ದು.

ವೇಷ ಧರಿಸುವವರ ಉದ್ದೇಶ ಮನರಂಜನೆ ಮಾತ್ರವಲ್ಲ ಅದು ತಳಮಟ್ಟದ ಕಲಾವಿದರ ಬದುಕಿನ ಸಂಸ್ಕೃತಿಯ ಅವಿಭಾಜ್ಯ ಅಂಗ. ಹಗಲು ವೇಷಗಾರರು ತಮ್ಮ ಕಲೆಯ ಮೂಲಕ ಪೌರಾಣಿಕ ಕಥೆಗಳು, ಸಾಂಸ್ಕೃತಿಕ ಪರಂಪರೆ, ಧಾರ್ಮಿಕ ಕಥಾನಕಗಳನ್ನು ಜನರಿಗೆ ತಲುಪಿಸುತ್ತಾರೆ. ಆದರೆ, ಈ ಕಲೆಯು ನಿಧಾನವಾಗಿ ನಶಿಸಿ ಹೋಗುವ ಆತಂಕ ಎದುರಾಗಿದೆ.
ಅನೇಕ ತಲೆಮಾರಿನಿಂದ ನಡೆಸಿಕೊಂಡು ಬಂದಿರುವ ಈ ವೃತ್ತಿಯನ್ನು ಮುಂದುವರಿಸುತ್ತಾ ಹಗಲು ವೇಷಗಾರರು ಆರ್ಥಿಕ ಸಂಕಷ್ಟ, ಪರಿಸ್ಥಿತಿಯ ನಿರ್ದಯತೆ, ಸರ್ಕಾರದ ನಿರ್ಲಕ್ಷ್ಯ ಎಲ್ಲವನ್ನೂ ಎದುರಿಸುತ್ತಿದ್ದಾರೆ. ಹನುಮಸಾಗರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಗಲು ವೇಷಗಾರರು ಪೌರಾಣಿಕ ನಾಟಕಗಳ ಪ್ರದರ್ಶನ ನೀಡುತ್ತಿದ್ದಾರೆ. ಕಾಲಚಕ್ರದೊಂದಿಗೆ ಈ ಕಲೆಯ ಪ್ರಭಾವ ಕಡಿಮೆಯಾಗುತ್ತಿದ್ದರೂ, ತಮ್ಮ ಜೀವನ ಪಣಕ್ಕಿಟ್ಟು ಪರಂಪರೆ ಉಳಿಸುತ್ತಿದ್ದಾರೆ.
ಹಗಲು ವೇಷಗಾರರು ಸತ್ಯಹರಿಶ್ಚಂದ್ರ, ರಾಮಾಯಣ, ಬಸ್ಮಾಸುರ ಮೋಹಿನಿ, ಸುಂದರ ಉಪಸುಂದ, ಸಿಂಧೂರ ಲಕ್ಷ್ಮಣ ಹೀಗೆ ಅನೇಕ ನಾಟಕಗಳನ್ನು ಪ್ರದರ್ಶಿಸುತ್ತಾರೆ. ಒಂದು ಗ್ರಾಮದಲ್ಲಿ ಐದು ದಿನಗಳ ಕಾಲ ನಾಟಕ ಪ್ರದರ್ಶನ ನಡೆಸಿ ಪ್ರತಿ ವರ್ಷದ ಆಯ್ದ ಸಮಯದಲ್ಲಿ ಮಾತ್ರ ಈ ನಾಟಕಗಳನ್ನು ಮರುನಿರ್ವಹಿಸುತ್ತಾರೆ. ವಿಶೇಷವಾಗಿ ಯುಗಾದಿ ಮತ್ತು ದೀಪಾವಳಿ ಸಮಯದಲ್ಲಿ ಮಾತ್ರ ನಾಟಕಗಳ ಅಭಿನಯ ಇರುತ್ತದೆ. ಕಲಾವಿದರ ತಂಡದಲ್ಲಿ ಯಾರಾದರು ನಿಧನರಾದರೆ ಮೂರು ತಿಂಗಳು ರಂಗದ ಸಮೀಪವೇ ಹೋಗುವುದಿಲ್ಲ. ಇದು ಅವರು ಪಾಲಿಸಿಕೊಂಡು ಬಂದ ವಿಶೇಷ ಸಂಪ್ರದಾಯ.