
ಯಾದಗಿರಿ: ಗುರುಮಠಕಲ್ ತಾಲ್ಲೂಕು ವ್ಯಾಪ್ತಿಯಲ್ಲಿನ ಅಂಗವಿಕಲರ ಕಲ್ಯಾಣ, ಅವರ ಕುಂದು-ಕೊರತೆಗಳು, ಬೇಡಿಕೆಗಳು, ಸಮಸ್ಯೆಗಳು ಮತ್ತು ಅವುಗಳ ಪರಿಹಾರದ ನಿಟ್ಟಿನಲ್ಲಿ ಸಂಬಂಧಿತ ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆಯಲ್ಲಿ ನಮ್ಮ ಇಲಾಖೆ ಕೆಲಸ ಮಾಡಲಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಅಂಬ್ರೇಶ ಪಾಟೀಲ ಭರವಸೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿಯಲ್ಲಿ ಜರುಗಿದ ‘ವಿಕಲಚೇತನರ ಕುಂದು-ಕೊರತೆ ಸಭೆ’ಯಲ್ಲಿ ಮಾತನಾಡಿದ ಅವರು, ಅಂಗವಿಕಲರಿಗೆ ಮೀಸಲಿಟ್ಟ ಶೇ 5ರ ಅನುದಾನವನ್ನು ಕ್ರೋಡೀಕರಿಸಿ, ನಿಯಮಾನುಸಾರ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳೂ ಕಟ್ಟುನಿಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ತಾಲ್ಲೂಕಿನ ವಿವಿಧ ಗ್ರಾಮಗಳ ಅಂಗವಿಕಲರು ಮಾತನಾಡಿ, ಯುಡಿಐಡಿ(ಯುನಿಕ್ ಡಿಸೇಬಿಲಿಟಿ ಐಡೆಂಟಿಟಿ) ವಿತರಣೆ, ಅಂಗವಿಕಲ ಸ್ನೇಹಿ ಕಟ್ಟಡಗಳು, ಶೌಚಾಲಯ, ಅಂಗವಿಕಲರ ಪಿಂಚಣಿ, ರೈಲ್ವೆ ಮತ್ತು ಬಸ್ ಪಾಸ್, ತ್ರಿಚಕ್ರ ವಾಹನ, ಸಾಧನ-ಸಲಕರಣೆಗಳ ಕುರಿತಾದ ಸಮಸ್ಯೆಗಳು, ತಾಲ್ಲೂಕಿಗೊಂದು ‘ವಿಕಲಚೇತನರ ಸಮುದಾಯ ಭವನ’ದ ವ್ಯವಸ್ಥೆ ಹಾಗೂ ಅಂಗವಿಕಲರ ದಿನಾಚರಣೆಗೆ ಸಂಬಂಧಿಸಿದಂತೆ ಸಭೆಯ ಗಮನ ಸೆಳೆದರುಟಿಎಚ್ಒ ಡಾ.ಹಣಮಂತರೆಡ್ಡಿ ಮಾತನಾಡಿ ಯುಡಿಐಡಿ ಸಮಸ್ಯೆಯನ್ನು ಬಗೆಹರಿಸಲಾಗುತ್ತಿದೆ. ಶೀಘ್ರವೇ ಸಮಸ್ಯೆಯು ಕೊನೆಗೊಳ್ಳಲಿದೆ ಎಂದು ತಿಳಿಸಿದರು.