
ಉತ್ತರ ಕನ್ನಡ : ಸರ್ಕಾರಿ ಜಾಗ ಒತ್ತುವರಿ ಮಾಡಿರುವ ಪ್ರಕರಣಗಳು ಪತ್ತೆ..ಕಂದಾಯ ಭೂಮಿ ಕಡಿಮೆ ಪ್ರಮಾಣದಲ್ಲಿರುವ ಜಿಲ್ಲೆಯಲ್ಲಿ ಕೃಷಿ ಭೂಮಿ ವಿಸ್ತರಣೆ, ರಿಯಲ್ ಎಸ್ಟೇಟ್ ವ್ಯವಹಾರದ ಕಾರಣಕ್ಕೆ 163 ಎಕರೆ ಸರ್ಕಾರಿ ಜಾಗ ಒತ್ತುವರಿ ಮಾಡಿರುವ ಪ್ರಕರಣಗಳು ಪತ್ತೆಯಾಗಿವೆ.

ಭೌಗೋಳಿಕವಾಗಿ ವಿಸ್ತಾರವಾಗಿರುವ ಜಿಲ್ಲೆಯಲ್ಲಿ ಶೇ 78ರಷ್ಟು ಅರಣ್ಯ ಭೂಮಿಯೇ ಇದೆ. ಸರ್ಕಾರಿ ಯೋಜನೆಗಳಿಗೆ ಭೂಮಿ ಸಿಗದ ಪರಿಣಾಮ ಹಲವು ಯೋಜನೆಗಳು ನನೆಗುದಿಗೆ ಬಿದ್ದಿರುವ ಉದಾಹರಣೆಗಳಿವೆ. 36,926 ಎಕರೆಯಷ್ಟು ಸರ್ಕಾರಿ ಭೂಮಿ ಪೈಕಿ 2005ಕ್ಕಿಂತ ಪೂರ್ವದಿಂದಲೇ 4,012 ಎಕರೆ ಒತ್ತುವರಿಯಾಗಿದ್ದನ್ನು ಕಂದಾಯ ಇಲಾಖೆ ಪತ್ತೆ ಹಚ್ಚಿತ್ತು. ಒತ್ತುವರಿಯಾದ ಜಾಗವನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯುವ ಪ್ರಯತ್ನ ನಿರಂತರ ಸಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿನ ಪ್ರಕರಣ, ರಸ್ತೆ ನಿರ್ಮಾಣಕ್ಕೆ ಬಳಕೆಯಾದ ಭೂಮಿ, ಅಕ್ರಮ ಸಕ್ರಮ ಯೋಜನೆ, ಬಗರ್ ಹುಕುಂ ಅಡಿಯಲ್ಲಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದ ಜಮೀನಿನ ಹೊರತಾಗಿಯೂ 163 ಎಕರೆಯಷ್ಟು ಭೂಮಿ ಒತ್ತುವರಿ ಉಳಿದುಕೊಂಡಿದೆ. ರೈತರಿಗಿಂತ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರು, ರಾಜಕೀಯ ಪ್ರಭಾವ ಇರುವವರ ಸುಪರ್ದಿಯಲ್ಲಿಯೇ ಸರ್ಕಾರಿ ಒತ್ತುವರಿ ಭೂಮಿ ಇದೆ. ಒತ್ತುವರಿ ತೆರವುಗೊಳಿಸಲು ಮುಂದಾದರೆ ಉನ್ನತಮಟ್ಟದಿಂದ ಒತ್ತಡ ಹೇರಿ ತಡೆಯುವ ಕೆಲಸಗಳು ನಡೆಯುತ್ತವೆ. ಹೀಗಾಗಿ ಹಲವೆಡೆ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸುವುದು ಸವಾಲಾಗಿದ’ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಅಳಲು ತೋಡಿಕೊಂಡರು.