
ಬೆಳಗಾವಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ನಾವು ನಾಟಕ ಪ್ರದರ್ಶಿಸುತ್ತೇವೆ. ಸಾಮಾಜಿಕ ನಾಟಕಕ್ಕೆ 25 ಸಾವಿರ, ಪೌರಾಣಿಕ ನಾಟಕಕ್ಕೆ 30 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ. ಇದು ಯಾವುದಕ್ಕೂ ಸಾಲುತ್ತಿಲ್ಲ. ಜನರಿಂದ ಹಣ ಸಂಗ್ರಹಿಸಿ ನಾಟಕವಾಡಲೂ ಕಷ್ಟವಾಗುತ್ತಿದೆ. ಪ್ರೋತ್ಸಾಹಧನ ಹೆಚ್ಚಿಸದಿದ್ದರೆ ಕಲಾವಿದರ ಬದುಕು ಬಿಗಡಾಯಿಸಲಿದೆ. ಎಂದು ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿಯ ಕರ್ನಾಟಕ ಸರ್ವ ಕಲಾವಿದರ ಹಿತರಕ್ಷಣಾ ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ್ರವರು ಜೆ.3ಟಿ.ವಿ ಯೊಂದಿಗೆ, ಹೀಗೆ ಬೇಸರ ಹಂಚಿಕೊಂಡರು.

ಇದು ಅವರೊಬ್ಬರ ಸಂಕಷ್ಟವಲ್ಲ. ಜಿಲ್ಲೆಯ ವಿವಿಧ ವೇದಿಕೆಗಳಲ್ಲಿ ನಾಟಕಗಳನ್ನು ಪ್ರದರ್ಶಿಸುವ ಬಹುತೇಕ ಕಲಾವಿದರು ಮತ್ತು ತಂಡಗಳ ನೋವು. ರಂಗಭೂಮಿ ಕ್ಷೇತ್ರಕ್ಕೆ ಏಣಗಿ ಬಾಳಪ್ಪನವರಂಥ ಖ್ಯಾತ ಕಲಾವಿದರನ್ನು ಸಮರ್ಪಿಸಿದ ಜಿಲ್ಲೆ ಬೆಳಗಾವಿ. ಇಲ್ಲಿ 200ಕ್ಕೂ ಅಧಿಕ ರಂಗಭೂಮಿ ಕಲಾವಿದರಿದ್ದಾರೆ. ವಿವಿಧ ಜಾತ್ರೆಗಳು, ಸಂಘ ಸಂಸ್ಥೆಗಳು ಮತ್ತು ಮಠಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಅವರು ನಿಯಮಿತವಾಗಿ ನಾಟಕ ಪ್ರದರ್ಶಿಸುತ್ತಿದ್ದಾರೆ. ಆದರೆ, ನಾಟಕ ಪ್ರದರ್ಶನಕ್ಕಾಗಿ ನೀಡಲಾಗುವ ಪ್ರೋತ್ಸಾಹಧನ ಮೊತ್ತ ಕಡಿಮೆ ಇರುವುದು ಕಲಾವಿದರ ನಿರಾಸೆಗೆ ಕಾರಣವಾಗಿದೆ.