
ದಕ್ಷಿಣ ಕನ್ನಡ: ಇದೀಗ ಎಲ್ಲೆಡೆ ಮಾವಿನ ಸೀಸನ್. ಖಾಸಗಿ ತೋಟದ ಒಳಗಿರುವ ಮಾವಿನ ಮರಗಳಲ್ಲಿ, ರಸ್ತೆ ಬದಿಯಲ್ಲಿರುವ ಮಾವಿನ ಮರಗಳಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಾವಿನ ಹೂ ಮತ್ತು ಮಿಡಿಗಳು ತುಂಬಿ ಹೋಗಿವೆ. ಖಾಸಗಿ ತೋಟಗಳಲ್ಲಿರುವ ಮಾವಿನ ಮರಗಳ ಕಾಯಿಗಳನ್ನು ಅದಕ್ಕೆ ಸಂಬಂಧಪಟ್ಟವರು ಅವರಿಗೆ ಬೇಕಾದ ರೀತಿಯಲ್ಲಿ ಉಪಯೋಗಿಸುತ್ತಾರೆ. ಆದರೆ ರಸ್ತೆ ಬದಿಗಳಲ್ಲಿರುವ ಮರಗಳ ಮಾವಿನಕಾಯಿಗಳನ್ನು ತೆಗೆಯಲು ಅರಣ್ಯ ಇಲಾಖೆ ಟೆಂಡರ್ ಕರೆದು ವಿಲೇವಾರಿ ಮಾಡುತ್ತದೆ. ಆದರೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ವ್ಯವಸ್ಥೆಗೆ ಶಾಸಕ ಅಶೋಕ್ ಕುಮಾರ್ ರೈ (MLA Ashok Kumar Rai) ಕೊಕ್ ನೀಡಿದ್ದಾರೆ. ರಸ್ತೆ ಬದಿಯಲ್ಲಿರುವ ಮಾವಿನ ಮರಗಳನ್ನು ಯಾವುದೇ ಕಾರಣಕ್ಕೂ ಹರಾಜು ನೀಡಬಾರದು ಎಂದು ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.

ಈ ಮಾವಿನ ಮರದಲ್ಲಿರುವ ಮಾವುಗಳು ಹಕ್ಕಿಗಳಿಗೆ ಮತ್ತು ಸಾರ್ವಜನಿಕರು ಉಪಯೋಗಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಈ ಹಿಂದೆ ಹರಾಜು ಪಡೆದಿದ್ದ ಮಂದಿ ರಸ್ತೆ ಬದಿಯ ಮಾವಿನ ಮರಗಳಲ್ಲಿ ಮಾವಿನ ಮಿಡಿ ಆದ ತಕ್ಷಣವೇ ಅವುಗಳನ್ನೆಲ್ಲಾ ಕೊಯ್ದು ಮಾರಾಟ ಮಾಡುತ್ತಿದ್ದರು. ಇದರಿಂದ ಮಾವಿನ ಮರದಲ್ಲಿ ಮಾವಿನ ಹಣ್ಣು ಆಗುವುದೇ ತಪ್ಪಿದಂತಾಗಿತ್ತು. ಅಲ್ಲದೇ ಮರಗಳಲ್ಲಿ ಹಣ್ಣು ಆಗಲು ಕಾಯಿಗಳೇ ಇಲ್ಲದ ಕಾರಣ ಹಕ್ಕಿಗಳಿಗೆ ತಿನ್ನಲು ಮತ್ತು ಆ ಮರದ ವಂಶಾಭಿವೃದ್ಧಿಗೂ ಪ್ರಕ್ರಿಯೆ ಮುಳುವಾಗುತ್ತಿತ್ತು. ಹಕ್ಕಿಗಳು ಹಣ್ಣನ್ನು ತಿಂದು ಅದರ ಬೀಜವನ್ನು ಬೇರೊಂದು ಕಡೆ ಎಸೆಯುವುದರಿಂದ ಆ ಬೀಜಗಳು ಮೊಳಕೆಯೊಡೆದು ಮರವಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಕಾಡುಗಳಲ್ಲಿ ಮತ್ತು ಖಾಲಿ ಜಾಗಗಳಲ್ಲಿ ಕೇವಲ ಅಕೇಶಿಯಾ ಮರಗಳು ಮಾತ್ರ ಬೆಳೆಯಲು ಈ ವ್ಯವಸ್ಥೆ ಪರೋಕ್ಷವಾಗಿ ಕಾರಣವಾಗಿತ್ತು.