
ಹಿರಿಯೂರು: ಚಿತ್ರದುರ್ಗ-ಹಿರಿಯೂರು ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ 1991ರಲ್ಲಿ ನಿರ್ಮಾಣಗೊಂಡಿದ್ದ ಲಕ್ಕವ್ವನಹಳ್ಳಿ ಒಡ್ಡು (ಚೆಕ್ ಡ್ಯಾಂ) ಈಗ ನಿರುಪಯುಕ್ತವಾಗಿದ್ದು, ನಗರಸಭೆ ಆಡಳಿತ ಬದ್ಧತೆ ತೋರಿದಲ್ಲಿ ಇದನ್ನು ಸುಂದರ ಪ್ರವಾಸಿ ತಾಣವನ್ನಾಗಿಸುವ ಎಲ್ಲ ಸಾಧ್ಯತೆಗಳಿವೆ.
1982ರಲ್ಲಿ ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿ ಆಗಿದ್ದಾಗ ಹಿರಿಯೂರು ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಉದ್ದೇಶದಿಂದ ₹85 ಲಕ್ಷ ವೆಚ್ಚದಲ್ಲಿ ಒಡ್ಡು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಪ್ರತಿ 15 ದಿನಕ್ಕೊಮ್ಮೆ ವಾಣಿವಿಲಾಸ ಜಲಾಶಯದಿಂದ ವೇದಾವತಿ ನದಿ ಮೂಲಕ ಈ ಒಡ್ಡಿಗೆ ನೀರು ಹರಿಸಿ, ಅದನ್ನು ಶುದ್ದೀಕರಿಸಿ ಎರಡೂ ನಗರಗಳಿಗೆ ಪೂರೈಸಲಾಗುತ್ತಿತ್ತು. ನದಿ ಪಾತ್ರದ ಹಳ್ಳಿಗಳ ಜನ ಕುಡಿಯುವ ನೀರನ್ನು ಮಲಿನಗೊಳಿಸುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರು ದೂರುತ್ತಿದ್ದರು.
2016ರಲ್ಲಿ ಶಾಸಕರಾಗಿದ್ದ ಡಿ. ಸುಧಾಕರ್ ಅವರು ಸಾರ್ವಜನಿಕರ ಬೇಡಿಕೆಗೆ ಮಣಿದು ಲಕ್ಕವ್ವನಹಳ್ಳಿ ಒಡ್ಡಿನ ಬದಲಾಗಿ, ಜಲಾಶಯದಿಂದ ನೇರವಾಗಿ ₹40 ಕೋಟಿ ವೆಚ್ಚದಲ್ಲಿ ಪೈಪ್ಲೈನ್ ಮೂಲಕ ನೀರು ತರುವ ಯೋಜನೆಗೆ ಸರ್ಕಾರದ ಮಂಜೂರಾತಿ ತಂದಿದ್ದರು. ಎಂಟು ವರ್ಷದಿಂದ ನಗರದ ಜನತೆಗೆ ಪೈಪ್ಲೈನ್ ಮೂಲಕ ವಾಣಿವಿಲಾಸ ಜಲಾಶಯದಿಂದ ಶುದ್ಧ ನೀರು ಸಿಗುತ್ತಿದೆ. ಆದರೆ ಕುಡಿಯುವ ನೀರಿನ ಸಂಗ್ರಹಕ್ಕೆಂದು ನಿರ್ಮಿಸಿದ್ದ ಲಕ್ಕವ್ವನಹಳ್ಳಿ ಒಡ್ಡು ನಿರುಪಯುಕ್ತವಾಗಿದೆ. ಪಂಪ್ಸೆಟ್ ಕೊಠಡಿಗಳು, ಪರಿವರ್ತಕಗಳು ಶಿಥಿಲವಾಗಿವೆ.
ಒಡ್ಡಿನಲ್ಲಿ ಈತ್ತಿಚಿನ ದಿನಗಳಲ್ಲಿ ಹೂಳು ತುಂಬುತ್ತಿದೆ. ಮಳೆಯಾದಾಗ, ವೇದಾವತಿ ನದಿಗೆ ನಿರ್ಮಿಸಿರುವ ಒಡ್ಡು ತುಂಬಿ ಹರಿಯುತ್ತದೆ. ಅಲ್ಲದೇ ಚಳ್ಳಕೆರೆ, ಮೊಳಕಾಲ್ಕೂರು ತಾಲ್ಲೂಕುಗಳಿಗೆ ವಾಣಿವಿಲಾಸದ ನೀರನ್ನು ಇದೇ ಒಡ್ಡಿನ ಮೂಲಕ ಹರಿಸುವ ಕಾರಣ, ಇದು ಬಹುತೇಕ ವರ್ಷವಿಡೀ ಜೀವಂತವಾಗಿರುತ್ತದೆ. ಆದರೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಒಡ್ಡು ನಗರಸಭೆಗೂ ಬೇಕಿಲ್ಲ, ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಗೂ ಬೇಕಿಲ್ಲದಂತಾಗಿದ್ದು, ಇದರ ಅಂಚಿನಲ್ಲಿ ಗಿಡಗಳು ಪೊದೆಯಂತೆ ಬೆಳೆದು ಇಡೀ ಪರಿಸರವನ್ನು ಮಲಿನಗೊಳಿಸಿವೆ.

j3tv@kannda
ಪ್ರವಾಸಿತಾಣಕ್ಕೆ ಸೂಕ್ತ:
ಒಡ್ಡಿನಲ್ಲಿ ಸುಮಾರು ಒಂದೂವರೆ ಕಿ.ಮೀ. ದೂರದವರೆಗೆ ನೀರು ನಿಲ್ಲುತ್ತದೆ. ಒಡ್ಡಿನ ಎರಡೂ ಬದಿ ಉದ್ಯಾನ ನಿರ್ಮಿಸಿ, ಒಡ್ಡಿನಲ್ಲಿ ದೋಣಿ ವಿಹಾರಕ್ಕೆ ವ್ಯವಸ್ಥೆ ಮಾಡಿದಲ್ಲಿ ನಗರದ ಜನತೆಗೆ ಕೂಗಳತೆಯ ದೂರದಲ್ಲಿ ಸುಂದರ ಪ್ರವಾಸಿ ತಾಣವೊಂದು ಸಿಕ್ಕಂತಾಗುತ್ತದೆ. ಸರ್ಕಾರದಿಂದ ಹಣಕಾಸು ನೆರವು ದೊರೆಯುವುದು ಕಷ್ಟ ಎನಿಸಿದಲ್ಲಿ ಖಾಸಗಿಯವರ ಜತೆ ಒಡಂಬಡಿಕೆ ಮಾಡಿಕೊಂಡು ಅಭಿವೃದ್ಧಿ ಪಡಿಸಬಹುದು ಎಂಬುದು ಸಾರ್ವಜನಿಕ ವಲಯದಲ್ಲಿ ಹಲವು ವರ್ಷಗಳಿಂದ ಕೇಳಿ ಬಂದಿರುವ ಆಗ್ರಹ.
ಒಡ್ಡಿನಲ್ಲಿ ಸಂಗ್ರಹವಾಗಿರುವ ಮಣ್ಣು ತುಂಬ ಫಲವತ್ತತೆಯಿಂದ ಕೂಡಿದ್ದು ಉಚಿತವಾಗಿ ತುಂಬಲು ಅವಕಾಶ ಕೊಟ್ಟಲ್ಲಿ ತಿಂಗಳೊಪ್ಪತ್ತಿನಲ್ಲಿ ಹೂಳು ಮಣ್ಣು ರೈತರ ತೋಟಗಳನ್ನು ಸೇರುತ್ತದೆ. ನಂತರ ನದಿಯಂಚಿನ ಒತ್ತುವರಿ ತೆರವುಗೊಳಿಸಿ ಕಾಂಪೌಂಡ್ ಗೋಡೆ ಅಥವಾ ತಂತಿ ಬೇಲಿ ಅಳವಡಿಸಬೇಕು. ಗಿಡಗಂಟಿ-ಹುಲ್ಲಿನ ತೆಗೆದ್ದಾರೆ ಇದೊಂದು ಸುಂದರ ಪ್ರವಾಸಿ ತಾಣವಾಗುತ್ತದೆ ಎನ್ನುವುದು ನಾಗರೀಕರ ಅನಿಸಿಕೆ.
ಲಕ್ಕವ್ವನಹಳ್ಳಿ ಒಡ್ಡಿನ ಮೇಲ್ಬಾಗದಲ್ಲಿ ವೇದಾವತಿ ನದಿ ಪಾತ್ರದಲ್ಲಿನ ಒತ್ತುವರಿ ತೆರವುಗೊಳಿಸಬೇಕು ಒಡ್ಡಿನಲ್ಲಿ ತುಂಬಿರುವ ಫಲವತ್ತಾದ ಹೂಳನ್ನು ರೈತರಿಗೆ ಉಚಿತವಾಗಿ ನೀಡಬೇಕು ಸರ್ಕಾರ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಬೇಕು ಲಕ್ಕವ್ವನಹಳ್ಳಿ ರಸ್ತೆಯಿಂದ ಒಡ್ಡಿನ ಕಡೆ ಹೋಗುವ ರಸ್ತೆಯನ್ನು ವಿಸ್ತರಣೆ ಮಾಡಬೇಕು ಒಡ್ಡು ತುಂಬಿದ ನಂತರ ಮುಂದೆ ಸಾಗುವ ವೇದಾವತಿ ನದಿಯನ್ನು ಸ್ವಚ್ಛಗೊಳಿಸಬೇಕು ವೇದಾವತಿ ನದಿಗೆ ತಡೆಗೋಡೆ ನಿರ್ಮಿಸಬೇಕು ಪೊದೆಯನ್ನು ಸ್ವಚ್ಛಗೊಳಿಸಿ ಆಲಂಕಾರಿಕ ಗಿಡಗಳನ್ನು ಬೆಳೆಸಬೇಕು ವಾಯುವಿಹಾರಿಗಳಿಗೆ ವಾಕಿಂಗ್ ಪಥ ಒಡ್ಡಿನ ಮೇಲ್ಬಾಗದಲ್ಲಿರುವ ಹಳ್ಳಿಗಳಿಂದ ತ್ಯಾಜ್ಯ ಹರಿಸದಂತೆ ಕ್ರಮ ಕೈಗೊಳ್ಳಬೇಕು.