
ವಿಜಯಪುರ: ಮಹಾನಗರ ಪಾಲಿಕೆಯ 35 ಸದಸ್ಯರ ಸದಸ್ಯತ್ವವನ್ನು ಅನರ್ಹ ಮಾಡಿ ಬೆಳಗಾವಿಯ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಅವರು ಆದೇಶ ಹೊರಡಿಸಿದ್ದಾರೆ. ಬಿಜೆಪಿಯ (BJP) 17, ಕಾಂಗ್ರೆಸ್ನ 10, ಜೆಡಿಎಸ್ನ ಓರ್ವ ಸದಸ್ಯ, ಎಂಐಎಂ ಇಬ್ಬರು ಮತ್ತು ಐವರು ಪಕ್ಷೇತರರ ಸದಸ್ಯತ್ವ ಅನರ್ಹಗೊಳಿಸಲಾಗಿದೆ. 2022ರ ಪಾಲಿಕೆ ಚುನಾವಣೆಯಲ್ಲಿ ಸದಸ್ಯರು ಆಯ್ಕೆಯಾಗಿದ್ದರು. ಬಳಿಕ 2024ರ ಜ.9ರಂದು ಮೇಯರ್ ಚುನಾವಣೆ ನಡೆದಿತ್ತು. ಕಾಂಗ್ರೆಸ್ನ ಮೆಹೆಜಬೀನ್ ಹೊರ್ತಿ ಮೇಯರ್ ಮತ್ತು ದಿನೇಶ್ ಹಳ್ಳಿ ಉಪಮೇಯರ್ ಆಗಿ ಆಯ್ಕೆಗೊಂಡಿದ್ದರು. ಆದರೆ ಯಾವ ಸದಸ್ಯರು ಕಾನೂನು ಪ್ರಕಾರ ಆಸ್ತಿ ಘೋಷಿಸಿರಲಿಲ್ಲ.

ಪಾಲಿಕೆ ಚುನಾವಣೆಯಲ್ಲಿ ಆಸ್ತಿ ಘೋಷಣೆ ಸಂಬಂಧಿತ ಪ್ರಕರಣದಲ್ಲಿ ಮಾಜಿ ಸದಸ್ಯರ ಅರ್ಜಿಯನ್ನು ಪರಿಗಣಿಸಿದ ಬೀಳಗಿ ಕಲಬುರಗಿ ಪೀಠ, ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿತ್ತು. ಈ ಹಿನ್ನೆಲೆ ಅನರ್ಹಗೊಳಿಸಲಾಗಿದೆ. ಇದನ್ನು ಪ್ರಶ್ನಿಸಿ ಮಾಜಿ ಸದಸ್ಯ ಪ್ರಕಾಶ ಮಿರ್ಜಿ ಮೈನುದ್ದೀನ್ ಬೀಳಗಿ ಕಲಬುರಗಿ ಪೀಠ ಮೊರೆ ಹೋಗಿದ್ದರು. ಹೈಕೋರ್ಟ್ ಸರ್ಕಾರಕ್ಕೆ ಕ್ರಮ ತೆಗೆದುಕೊಳ್ಳಲು ಸೂಚಿಸಿತ್ತು. ಈ ಹಿನ್ನೆಲೆ ಪರಿಶೀಲನೆ ಮಾಡಿ ಅನರ್ಹತೆ ಮಾಡಿ ಆದೇಶ ಹೊರಡಿಸಲಾಗಿದೆ. ಹೀಗಾಗಿ ಮಹಾನಗರ ಪಾಲಿಕೆಗೆ ಮತ್ತೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಪಾಲಿಕೆ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹೆಜಬೀನ್ ಹೊರ್ತಿ ಒಟ್ಟು 22 ಮತ ಪಡೆದು ಮೇಯರ್ ಆಗಿ ಆಯ್ಕೆಯಾಗಿದ್ದರು. ಎಸ್ಟಿಗೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನ ದಿನೇಶ್ ಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದರು. 10 ಕಾಂಗ್ರೆಸ್ ಸದಸ್ಯರು, ಐವರು ಪಕ್ಷೇತರರು, ಇಬ್ಬರು ಎಐಎಂಐಎಂ, ಓರ್ವ ಜೆಡಿಎಸ್ ಸದಸ್ಯರ ಬೆಂಬಲ ಹಾಗೂ ಶಾಸಕರಾದ ಎಂಬಿ ಪಾಟೀಲ್, ವಿಠ್ಠಲ್ ಕಟಕದೊಂಡ, ಪರಿಷತ್ ಸದಸ್ಯರಾದ ಸುನಿಲಗೌಡ ಪಾಟೀಲ್, ಪ್ರಕಾಶ್ ರಾಥೋಡ್ ಮತಗಳ ಬೆಂಬಲದೊಂದಿಗೆ ಕಾಂಗ್ರೆಸ್ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದರು.