
ಬೆಂಗಳೂರು : ನಟ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಪ್ರಕಣರದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದ್ದು, ದರ್ಶನ್ ಮತ್ತೆ ‘ಡೆವಿಲ್’ ಸಿನಿಮಾದಲ್ಲಿ ಪಾಲ್ಗೊಂಡಿದ್ದು, ಫ್ಯಾನ್ಸ್ ಕುಣಿದಾಡಿದ್ದರು. ಇದೀಗ ನಟ ದರ್ಶನ್ ಶತ್ರು ಸಂಹಾರ ಪೂಜೆ ಮಾಡಿಸಲು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ಖಾಕಿ ಅಲರ್ಟ್ ಆಗಿದ್ದು, ದರ್ಶನ್ಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನಟ ದರ್ಶನ್ ಕೇರಳ ಕಣ್ಣೂರಿನ ಪ್ರಸಿದ್ಧ ದೇವಾಲಯಕ್ಕೆ ಭಾನುವಾರ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಈ ವೇಳೆ ನಟ ದರ್ಶನ್ ಅವರು ಕೊಲೆ ಆರೋಪಿಯೊಬ್ಬರ ಜೊತೆಗೆ ಹೋಗಿದ್ದಾರೆ. ಇದರ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ನಟ ದರ್ಶನ್ ದೇಗುಲ ಭೇಟಿ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬಂದಿದೆ.

ನಟ ದರ್ಶನ್ ತೂಗುದೀಪ್ ಕೇರಳದ ಕಣ್ಣೂರಿನ ಭಗವತಿ ದೇವಾಲಯಕ್ಕೆ ಭೇಟಿ ನೀಡಿ ಶತ್ರು ಸಂಹಾರ ಸೇರಿದಂತೆ ವಿಶೇಷ ಪೂಜೆ ಮಾಡಿಸಿದ್ದಾರೆ. ಈ ವೇಳೆ ಅವರ ಪುತ್ರ ವಿನೀಶ್, ಪತ್ನಿ ವಿಜಯಲಕ್ಷ್ಮೀ ದರ್ಶನ್ ಹಾಗೂ ನಟ ಧನ್ವೀರ್ ಗೌಡ ಸಹ ಅವರೊಂದಿಗೆ ಇದ್ದಾರೆ. ಬಹು ದಿನಗಳ ಬಳಿಕ ಕುಟುಂಬ ಸಮೇತರಾಗಿ ದೇಗುಲ ಭೇಟಿ ಕೊಟ್ಟ ದರ್ಶನ್ ಜೊತೆಗೆ ಮತ್ತೊಬ್ಬ ಕೊಲೆ ಆರೋಪಿ ಪ್ರಜ್ವಲ್ ರೈ ಇದ್ದಾನೆ.
ಯಾರು ಕೊಲೆ ಆರೋಪಿ ಪ್ರಜ್ವಲ್ ರೈ ?
ಈ ಕೊಲೆ ಆರೋಪಿ ಅಸಲಿಗೆ ರೇಣುಕಾಸ್ವಾಮಿ ಪ್ರಕರಣದ ಆರೋಪಿಯಲ್ಲ. ಬದಲಾಗಿ ಈತ ನಟ ದರ್ಶನ್ ರೀತಿಯಲ್ಲಿ ಪ್ರಮುಖ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 2017ರಲ್ಲಿ ನಡೆದಿದ್ದ ಕರೋಪಾಡಿ ಜಲೀಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ರೈ ಜೊತೆಗೆ 11ಮಂದಿ ಬಂಧನವಾಗಿತ್ತು. ಅದೇ ಪ್ರಜ್ವಲ್ ರೈ ನಟ ದರ್ಶನ್ ಜೊತೆಗೆ ಕೇರಳ ಕಣ್ಣೂರಿಗೆ ಭೇಟಿ ನೀಡಿದ್ದಾನೆ. ದೇಗುಲ ಪ್ರವೇಶಿಸುವ ವಿಡಿಯೋದಲ್ಲಿ ನಟ ದರ್ಶನ್ ಜೊತೆಗೆ ಪ್ರಜ್ವಲ್ ರೈ ಸಹ ಕಾಣಿಸಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇಬ್ಬರು ಕೊಲೆ ಆರೋಪಿಗಳಿಂದ ಶತ್ರು ಸಂಹಾರ ಪೂಜೆ ಇಬ್ಬರು ಕೊಲೆ ಪ್ರಕರಣಗಳ ಆರೋಪಿಗಳು ಒಟ್ಟಿಗೆ ಹೋಗಿ ದೇಗುಲ ಪೂಜೆ ಮಾಡಿಸಿದ್ದಾರೆ. ತಮ್ಮ ನೆಚ್ಚಿನ ನಟ ಡಿ ಬಾಸ್ ದರ್ಶನ್ ಇನ್ಮುಂದೆ ಸಿನಿ ರಂಗದಲ್ಲಿ ಬ್ಯುಸಿ ಆಗಲಿದ್ದಾರೆ. ಅದರೊಂದಿಗೆ ಪ್ರಕರಣ ಕುರಿತು ವಿಚಾರಣೆ, ಇನ್ನಿತರ ಕಾನೂನು ಸವಾಲುಗಳನ್ನು ನಿರ್ವಹಿಸುತ್ತಾರೆ. ಇನ್ನೂ ಅವರ ಜೀವನ ಮತ್ತೆ ಮೊದಲಿನಂತೆ ಸುಗಮವಾಗಲಿದೆ ಎಂದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿತ್ತು. ಆದರೆ ಈ ಕೊಲೆ ಆರೋಪಿಯೊಂದಿಗಿನ ದೇಗುಲ ಭೇಟಿಯಿಂದ ಅವರಿಗೆ ತೊಂದರೆ ಎದುರಾಗುತ್ತಾ? ಎಂಬ ಆತಂಕ ಸಹ ಅಭಿಮಾನಿಗಳಲ್ಲಿದೆ.

ಜೈಲಲ್ಲೂ ರೌಡಿಗಳ ಜೊತೆ ದರ್ಶನ್ ಸಹವಾಸ ಏಕೆಂದರೆ ಈ ಹಿಂದೆ ಜೈಲಿನಲ್ಲಿದ್ದಾಗ ವಿಲ್ಸನ್ ಗಾರ್ಡನ್ ನಾಗಾ ಸೇರಿದಂತೆ ಕೆಲವು ರೌಡಿ ಶೀಟರ್ ಗಳ ಜೊತೆಗೆ ಸ್ನೇಹ ಬೆಳೆಸಿದ್ದರಿಂದ ದರ್ಶನ್ ತೂಗುದೀಪ್ಗೆ ಸಂಕಷ್ಟ ಎದುರಾಗಿತ್ತು. ಜೈಲಲ್ಲಿ ಅವರೊಟ್ಟಿಗೆ ಕೂತಿರುವ ಫೋಟೋ ವೈರಲ್ ಆಗಿತ್ತು. ವೈಯಕ್ತಿಕವಾಗಿ ನಟ ದರ್ಶನ್ಗೆ ಅದರಿಂದ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಇದೀಗ ದರ್ಶನ್ ಷರತ್ತುಬದ್ಧ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಎಂದಿನಂತೆ ಸಿನಿಮಾ ಕಾರ್ಯಗಳಲ್ಲಿ ಬ್ಯೂಸಿಯಾಗಿದ್ದಾರೆ. ಈ ಮಧ್ಯೆ ಶತ್ರು ಸಂಹಾರ ಪೂಜೆಗೆಂದು ದೇವಸ್ಥಾನಕ್ಕೆ ತೆರಳಿದಾಗ ಅವರೊಂದಿಗೆ ಬೇರೆ ಕೊಲೆಯ ಆರೋಪಿ ಜೊತೆಗಿರುವುದು ಮತ್ತೆ ಸಮಸ್ಯೆ ತರಬಹುದು ಎನ್ನಲಾಗಿದೆ. ಪೊಲೀಸರು ಈ ಬಗ್ಗೆ ಸ್ಪಷ್ಟನೆ ಕೇಳಬಹುದು, ನೋಟಿಸ್ ನೀಡಬಹುದು ಎಂಬ ಮಾತುಗಳು ಕೇಳಿ ಬಂದಿವೆ.