
ಶಿವಮೊಗ್ಗ : ಮಲೆನಾಡಿನಲ್ಲಿ ಚರ್ಚೆಗೆ ಕಾರಣವಾಗಿರುವ ಹೊಸ ರೈಲು ಯೋಜನೆ ಶಿವಮೊಗ್ಗ-ಶೃಂಗೇರಿ-ಮಂಗಳೂರು. ಹಲವು ವರ್ಷಗಳಿಂದ ಈ ರೈಲು ಮಾರ್ಗದ ಕುರಿತು ಬೇಡಿಕೆ ಇತ್ತು. ಅಂತಿಮವಾಗಿ ಕೇಂದ್ರ ಸರ್ಕಾರ ಈಗ ಈ ಯೋಜನೆ ಜಾರಿಗೆ ಮುಂದಿನ ಹೆಜ್ಜೆಯನ್ನು ಇಟ್ಟಿದೆ. ಅಂತಿಮ ಹಂತದ ಸಮೀಕ್ಷೆಗೆ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಯೋಜನೆ ಜಾರಿಯಾದರೆ ಮಲೆನಾಡು-ಕರಾವಳಿ ಕರ್ನಾಟಕದ ಸಂಪರ್ಕ ಸುಲಭವಾಗಲಿದೆ. ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶಿವಮೊಗ್ಗ-ಶೃಂಗೇರಿ-ಮಂಗಳೂರು ಮತ್ತು ತಾಳಗುಪ್ಪ-ಹೊನ್ನಾವರ ರೈಲು ಮಾರ್ಗದ ಅಂತಿಮ ಹಂತದ ಸಮೀಕ್ಷೆಗೆ ರೈಲ್ವೆ ಇಲಾಖೆ ಮಾರ್ಚ್ 19ರಂದು 23.09 ಕೋಟಿ ರೂ. ಅನುದಾನ ನೀಡಿದೆ ಎಂದು ಹೇಳಿದ್ದಾರೆ. ಈ ಎರಡೂ ಯೋಜನೆಗಳು ಸಹ ಶಿವಮೊಗ್ಗ ಜಿಲ್ಲೆಗೆ ಸಹಾಯಕವಾಗಿದೆ. ಹಲವು ವರ್ಷಗಳ ಹಿಂದೆ ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗ ಯೋಜನೆಗೆ ಒಪ್ಪಿಗೆ ಸಿಕ್ಕಿತ್ತು. ಆದರೆ ಯಾವುದೇ ಪ್ರಕ್ರಿಯೆ ಮುಂದುವರೆದಿರಲಿಲ್ಲ. ಆದ್ದರಿಂದ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿ ಯೋಜನೆಯ ಜಾರಿಗೆ ಮನವಿ ಸಲ್ಲಿಕೆ ಮಾಡಿದ್ದರು.

2024-25ರ ಬಜೆಟ್ ಸಂದರ್ಭದಲ್ಲಿಯೇ ಬಿ. ವೈ. ರಾಘವೇಂದ್ರ ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ಮಾರ್ಗದ ಸಮೀಕ್ಷೆಗೆ ಒಪ್ಪಿಗೆ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದರು. ಮಲೆನಾಡು ಮತ್ತು ಕರಾವಳಿ ಸಂಪರ್ಕಕ್ಕೆ ಈ ಯೋಜನೆ ಅತ್ಯಗತ್ಯವಾಗಿದೆ ಎಂದು ವಿವರಣೆ ನೀಡಿದ್ದರು. 2019ರಲ್ಲಿ ಯೋಜನೆಯ ಕುರಿತು ಪ್ರಸ್ತಾವ ಬಂದಾಗ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗವನ್ನು ತೀರ್ಥಹಳ್ಳಿ ಮೂಲಕ ಕೈಗೊಳ್ಳುವಂತೆ ರೈಲ್ವೆ ಸಚಿವಾಲಯಕ್ಕೆ ಮನವಿ ಸಲ್ಲಿಕೆ ಮಾಡಲಾಗಿತ್ತು. ಈಗ ಸಮೀಕ್ಷೆಗೆ ಅನುದಾನ ಬಿಡುಗಡೆಯಾಗಿದ್ದು, ಸಮೀಕ್ಷೆ ವರದಿ ರೈಲ್ವೆ ಸಚಿವಾಲಯಕ್ಕೆ ಸಲ್ಲಿಕೆಯಾಗಲಿದೆ. ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗದ ಆರ್ಥಿಕ ಲಾಭಗಳು, ಪರಿಸರದ ಮೇಲೆ ಉಂಟಾಗುವ ಪ್ರಭಾವ, ಯಾವ ಮಾರ್ಗದಲ್ಲಿ ಯೋಜನೆ ಸಾಗಲಿದೆ, ಭೂ ಸ್ವಾಧೀನ ಸೇರಿದಂತೆ ವಿವಿಧ ಮಾಹಿತಿಯನ್ನು ಒಳಗೊಂಡ ಸಮೀಕ್ಷೆಯನ್ನು ನಡೆಸಿ ರೈಲ್ವೆ ಸಚಿವಾಲಯಕ್ಕೆ ಸಲ್ಲಿಕೆ ಮಾಡಲಾಗುತ್ತದೆ.

ಯೋಜನೆ ಕಾರ್ಯ ಸಾಧು ಎಂದು ಸಚಿವಾಲಯ ತೀರ್ಮಾನ ಮಾಡಿ ವರದಿಗೆ ಒಪ್ಪಿಗೆ ನೀಡಿದರೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರು ಮಾಡಲು ಹಸಿರು ನಿಶಾನೆ ತೋರಿಸಲಾಗುತ್ತದೆ. ಸದ್ಯ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗದ ಪ್ರಾಥಮಿಕ ಕೆಲಸಗಳು ಆರಂಭವಾಗಬೇಕಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಂಪರ್ಕಕ್ಕೆ ಕೇವಲ ರಸ್ತೆ ಮಾರ್ಗವಿದೆ. ಶೃಂಗೇರಿ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಪ್ರತಿದಿನ ನೂರಾರು ಭಕ್ತರು ಇಲ್ಲಿನ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶಿವಮೊಗ್ಗ-ಶೃಂಗೇರಿ ರೈಲು ಯೋಜನೆ ಜಾರಿಯಾದರೆ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಚಿಕ್ಕಮಗಳೂರು ಜಿಲ್ಲೆಗೆ ರೈಲು ಸೌಕರ್ಯಗಳು ಹೆಚ್ಚಾಗುತ್ತಿದ್ದು, ಪ್ರವಾಸಿಗರಿಗೆ ಅನುಕೂಲವಾಗಿದೆ. ಸದ್ಯ ಚಿಕ್ಕಮಗಳೂರು ನಗರಕ್ಕೆ ಬೆಳಗ್ಗೆ ಮತ್ತು ಸಂಜೆ ರೈಲುಗಳು ಬರುತ್ತದೆ. ಶಿವಮೊಗ್ಗ, ಕಡೂರಿನಿಂದ ಮಾತ್ರ ರೈಲು ಸಂಪರ್ಕವಿದೆ. ಹಾಸನ-ಚಿಕ್ಕಮಗಳೂರು ನೇರ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಗೆ ಹೆಚ್ಚು ರೈಲುಗಳ ಸಂಚಾರ ಆರಂಭವಾದರೆ ಅಲ್ಲಿಂದ ಮೈಸೂರು, ಕರಾವಳಿ ಕರ್ನಾಟಕಕ್ಕೆ ಸಾಗಲು ಅನುಕೂಲವಾಗಲಿದೆ. 2025-26ನೇ ಸಾಲಿನ ಬಜೆಟ್ನಲ್ಲಿ ರಾಜ್ಯದ ಹಲವು ನೂತನ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ ಸಿಕ್ಕಿದೆ. ಆದರೆ ಯಾವ ಯೋಜನೆ ಕೈಗೊಳ್ಳಲು ಇಲಾಖೆ ಅನುಮೋದನೆ ನೀಡಲಿದೆ ಎಂದು ಕಾದು ನೋಡಬೇಕಿದೆ.