
ಶಿವಮೊಗ್ಗ: ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಭಾರತದಲ್ಲಿ ನದಿಗಳಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ಅವುಗಳ ಸ್ವಚ್ಛತೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಅದಕ್ಕೆ ರಾಜ್ಯದಲ್ಲಿ ಹರಿಯುವ 12 ನದಿಗಳ ಈಗಿನ ಸ್ಥಿತಿಯೇ ಸಾಕ್ಷಿ. ರಾಜ್ಯ ಸರಕಾರದ ಅಧಿಕೃತ ಮೂಲಗಳ ಪ್ರಕಾರ, ಕರ್ನಾಟಕದಲ್ಲಿ ನದಿಗಳ ಮಲೀನಯುತ ಪ್ರದೇಶದ ಉದ್ದಳತೆ 693.75 ಕಿ.ಮೀ.ಗಳಷ್ಟಿದೆ. ಒಟ್ಟು 112 ಕಲ್ಮಶಯುಕ್ತ ಮಲೀನ ನೀರಿನ ಚರಂಡಿಗಳನ್ನು ಗುರುತಿಸಲಾಗಿದೆ. ಆದರೆ, ಈಗಲೂ ನದಿಗಳಿಗೆ ಸೇರುತ್ತಿರುವ ಈ ನೀರು ತಡೆಯುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ನಡೆದಿಲ್ಲ.
‘ಗಂಗಾ ಸ್ನಾನ, ತುಂಗಾ ಪಾನ’ ನಾಣ್ನುಡಿಗೆ ತದ್ವಿರುದ್ಧವಾಗಿ ಎರಡೂ ನದಿಗಳು ಮಲೀನಗೊಂಡಾಗಿದೆ. ತುಂಗೆಯ ನೀರಿನಲ್ಲಿ ನಿಗದಿಗಿಂತ ಅಧಿಕ ಪ್ರಮಾಣದಲ್ಲಿ ಅಲ್ಯೂಮಿನಿಯಂ ಅಂಶ ಪತ್ತೆಯಾಗಿದೆ. ಪ್ರತಿ ಲೀಟರ್ ನೀರಿನಲ್ಲಿ 0.03ರಿಂದ 0.063 ಎಂಎಲ್ ಅಲ್ಯೂಮಿನಿಯಂ ಇರಬೇಕು. ಆದರೆ, ತುಂಗಾ ನದಿಯ ನೀರಿನಲ್ಲಿ 0.021ರಿಂದ 13.4 ಎಂಎಲ್ವರೆಗೆ ಅಲ್ಯೂಮಿನಿಯಂ ಇರುವುದು ಈ ಹಿಂದೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಪ್ರಕಟಿಸಿರುವ ವರದಿಯಿಂದ ದೃಢಪಟ್ಟಿದೆ. ವಿಚಿತ್ರವೆಂದರೆ, ಗಂಗಾಮೂಲದಲ್ಲೂಅಲ್ಯೂಮಿನಿಯಂ ಇರುವುದು ಖಾತರಿಯಾಗಿದೆ. ಜತೆಗೆ, ಶೃಂಗೇರಿಯಿಂದ ಆರಂಭಗೊಂಡು ನದಿ ಕಲುಷಿತಗೊಳ್ಳುತ್ತಲೇ ಇದೆ.

ನದಿ ತೀರದಲ್ಲಿರುವ ಕೈಗಾರಿಕೆಗಳಿಂದ ಹಾಗೂ ವಸತಿ ಪ್ರದೇಶಗಳಿಂದ ತ್ಯಾಜ್ಯಯುಕ್ತ ನೀರನ್ನು ಕೆಲವು ನದಿಗಳಿಗೆ ಹರಿದು ಬಿಡುತ್ತಿರುವ ಕಾರಣ ರಾಜ್ಯದ ಹಲವಾರು ನದಿಗಳು ಮಲೀನಗೊಂಡಿರುವುದಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ನದಿಯ ಪಾತ್ರ ಒತ್ತುವರಿ, ಚರಂಡಿ ನೀರು ಸಂಸ್ಕರಣೆ ಮಾಡದೇ ನೇರವಾಗಿ ನದಿಗೆ ಬಿಡುತ್ತಿರುವುದು, ಜನರು ತಮ್ಮ ಮನೆಯ ಕಸ, ಕೊಳಚೆ, ಹೂವು, ಜಾನುವಾರುಗಳ ಮಾಂಸ ನದಿಗೆ ಎಸೆಯುತ್ತಿರುವುದು, ಅವೈಜ್ಞಾನಿಕ ಮರಳುಗಾರಿಕೆ, ಮೀನು, ಆಮೆ ಮುಂತಾದ ನದಿಯ ನೀರು ಸ್ವಚ್ಛ ಮಾಡುವ ಜಲಚರಗಳ ಮೊಟ್ಟೆ ನಾಶ ಮಾಡುತ್ತಿರುವುದು ವಿವಿಧ ಕಾರಣಗಳಿಂದ ನದಿಯ ಮಾಲಿನ್ಯ ನಿರಂತರ ಹೆಚ್ಚುತ್ತಲೇ ಇದೆ. ಜಲಮೂಲಗಳಲ್ಲಿ ಅಧಿಕ ಬಿಒಡಿ ಹೆಚ್ಚಿನ ಸಾವಯವ ಹೊರೆಯನ್ನು ಸೂಚಿಸುತ್ತದೆ. ಹಾನಿಕಾರಕ ಬ್ಯಾಕ್ಟಿರಿಯಾ ಮತ್ತು ರೋಗಕಾರಕಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಿಂದ ಕಾಲರಾ, ಟೈಫಾಯಿಡ್, ಭೇದಿ, ಹೆಪಟೈಟಿಸ್ನಂತಹ ರೋಗಗಳು ಹರಡುತ್ತವೆ. ಹೆಚ್ಚುವರಿಯಾಗಿ ಕೈಗಾರಿಕೆ ತ್ಯಾಜ್ಯ ವಿಸರ್ಜನೆ ಮತ್ತು ಅಧಿಕ ಬಿಒಡಿಯು ಭಾರಿ ಲೋಹಗಳು, ಕೀಟನಾಶಕ, ಔಷಧೀಯ ತ್ಯಾಜ್ಯಗಳಂತಹ ವಿಷಕಾರಿ ರಾಸಾಯನಿಕಗಳನ್ನು ನೀರಿನಲ್ಲಿ ಒಳಗೊಂಡಿರಬಹುದು. ಇದು ದೀರ್ಘಕಾಲೀನ ಆರೋಗ್ಯದ ಅಪಾಯಗಳನ್ನು ತಂದೊಡ್ಡುತ್ತದೆ. ಅಧಿಕ ಬಿಒಡಿ ಇರುವ ಜಲಮೂಲಗಳು ಮೀಥೇನ್ (ಇಏ4) ಮತ್ತು ಕಾರ್ಬನ್ ಡೈ ಆಕ್ಸೈಡ್ (ಇO2) ಅನ್ನು ಬಿಡುಗಡೆ ಮಾಡುತ್ತದೆ. ಇದು ಜಾಗತಿಕ ತಾಪಮಾನ ಏರಿಕೆಗೆ ಪ್ರಮುಖ ಪಾತ್ರ ವಹಿಸುತ್ತದೆ.