
ಗಂಗಾವತಿ: ಹೋಂ ಸ್ಟೇಗಳ ನಿರ್ಮಾಣ ಸೇರಿ ಆರಂಭಕ್ಕೆ ಪರವಾನಗಿ ನೀಡುವ ಅಧಿಕಾರ ಗ್ರಾಮ ಪಂಚಾಯಿತಿಗಳಿಗೆ ಇರದಿದ್ದರೂ, ತಾಲ್ಲೂಕಿನ ಸಾಣಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಮತ್ತು ಕಾರ್ಯದರ್ಶಿ ಮಂಜುನಾಥ ಅವರು ಕಾನೂನುಬಾಹಿರವಾಗಿ ಸಾಣಾಪುರ ಗ್ರಾಮದ ನಿವಾಸಿಗಳಿಗೆ ಗ್ರಾ.ಪಂ ಹೆಸರಿನಲ್ಲಿ ಹೋಂ ಸ್ಟೇಗಳಿಗೆ ಪರವಾನಗಿ ಪತ್ರ ನೀಡಿದ ವಿಷಯ ಬೆಳಕಿಗೆ ಬಂದಿದೆ.
ಸಾಣಾಪುರ ಗ್ರಾ.ಪಂ ವ್ಯಾಪ್ತಿಗೆ ಬರುವ ಸಾಣಾಪುರ, ವಿರುಪಾಪುರಗಡ್ಡೆ, ರಂಗಾಪುರ, ಹನುಮನಹಳ್ಳಿ ಗ್ರಾಮದಲ್ಲಿ ಸ್ಥಳೀಯರು ಮತ್ತು ಅನ್ಯ ಜಿಲ್ಲೆಯವರು ಕಂದಾಯ ಭೂಮಿ ಗುತ್ತಿಗೆ ಪಡೆದು ಹಲವು ವರ್ಷಗಳಿಂದ ಆಕ್ರಮವಾಗಿ ರೆಸಾರ್ಟ್, ಹೊಟೇಲ್ ನಿರ್ಮಿಸಿಕೊಂಡು ವ್ಯಾಪಾರ-ವಹಿವಾಟು ನಡೆಸಲಾಗುತ್ತಿದೆ.

ಕಂದಾಯ ಭೂಮಿ ಪರಿವರ್ತಿಸಿಕೊಳ್ಳದೇ, ರೆಸಾರ್ಟ್, ಹೊಟೇಲ್, ಹೋಂ ಸ್ಟೇಗಳಿಗೆ ನಿರ್ಮಾಣಕ್ಕೆ ಅವಕಾಶವಿರದಿದ್ದರೂ, ಕೆಲವರು ರಾಜಕೀಯ ಪ್ರಭಾವ ಬಳಸಿ, ರೆಸಾರ್ಟ್ ನಿರ್ಮಿಸಿಕೊಂಡು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ. ಕಳೆದ 3 ವರ್ಷಗಳಲ್ಲಿ 2-3 ಬಾರಿ ಆಕ್ರಮ ರೆಸಾರ್ಟ್ ಗಳನ್ನು ತೆರವುಗೊಳಿಸಿದ್ದರೂ ಮತ್ತೆ ರೆಸಾರ್ಟ್ ಗಳು ನಿರ್ಮಾಣವಾಗುವುದಂತೂ ನಿಂತಿಲ್ಲ.
ಕೆಲವರು ರೆಸಾರ್ಟ್, ಹೋಟೆಲ್, ಹೋಂ ಸ್ಟೇಗಳಿಗೆ ದಾಖಲೆಗಳನ್ನು ಸೃಷ್ಟಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಇದನ್ನ ಬಂಡವಾಳ ಮಾಡಿಕೊಂಡ ಗ್ರಾ.ಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಆಕ್ರಮ ಚಟುವಟಿಕೆಗಳಿಗೆ ನೆರವಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಾಣಾಪುರ ಗ್ರಾಮದಲ್ಲಿ ಕೆಲವರ್ಷಗಳ ಹಿಂದೆ ಯುವಕ ಹೋಂ ಸ್ಟೇದಲ್ಲಿ ನೇಣಿಗೆ ಶರಣಾಗಿ ಸಾವನ್ನಪ್ಪಿದ್ದ. ಸಾಣಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಪಟ್ಟ, ಡಿಮಾಂಡ್ ಅಲ್ಲಿ ಇರದ, ಅರಣ್ಯ ಸೇರದ ಸ್ಥಳಗಳಿಗೆ ಕಟ್ಟಡ ಪರವಾನಗಿ ನೀಡಿ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಈ ಬಗ್ಗೆ ಪ್ರಶ್ನಿಸಿದರೇ, ಗ್ರಾ.ಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಸರ್ವಾಧಿಕಾರದ ಮಾತುಗಳನ್ನ ಆಡುತ್ತಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಹೋಂಸ್ಟೇ ಪರವಾನಗಿ ಪತ್ರದಲ್ಲಿ ಏನಿದೆ: ಸಾಣಾಪುರ ಗ್ರಾ.ಪಂನಿಂದ ನೀಡಿದ ಹೋಂ ಸ್ಟೇ ಪರವಾನಗಿ ಪತ್ರದಲ್ಲಿ
ಕರ್ನಾಟಕ ಸರ್ಕಾರ ಚಿಹ್ನೆ, ಗ್ರಾ.ಪಂ ಹೆಸರು ಮತ್ತು ಸೀಲು, ಅಧ್ಯಕ್ಷ, ಕಾರ್ಯದರ್ಶಿಗಳ ಸೀಲು ಮತ್ತು ಸಹಿ, ಕೈಬರಹದಲ್ಲಿ ಪರವಾನಗಿ ಪಡೆದವರ ಹೆಸರು, ವಹಿವಾಟಿನ ಸ್ವರೂಪದ ಮಾಹಿತಿ ಒಳಗೊಂಡಿದೆ. ಈ ಪರವಾನಗಿ ಪತ್ರ ಸಾಣಾಪುರ ಗ್ರಾಮದ 1ವಾರ್ಡನ ನಿವಾಸಿ ಪ್ರೇಮಾ ಗಂಡ ಪ್ರವೀಣಕುಮಾರ ಎನ್ನುವವರಿಗೆ ನೀಡಲಾಗಿದೆ. ಇನ್ನೂ ಸಾಕಷ್ಟು ಜನರಿಗೆ ಗ್ರಾ.ಪಂ ಅಧಿಕಾರಿ, ಜನಪ್ರತಿನಿಧಿಗಳು ಪರವಾನಗಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಗ್ರಾ.ಪಂಗಿಲ್ಲ ಪರವಾನಗಿ ನೀಡುವ ಅಧಿಕಾರ: ಸಾಣಾಪುರ, ಆನೆಗೊಂದಿ ಗ್ರಾ.ಪಂ ವ್ಯಾಪ್ತಿಗೆ ಬರುವ ಗ್ರಾಮಗಳು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಲಿದ್ದು, ಇಲ್ಲಿ ಯಾವ ಕಟ್ಟಡ ನಿರ್ಮಾಣ ಮಾಡಬೇಕಿದ್ದರೂ, ಹಂಪಿ ಪ್ರಾಧಿಕಾರದ ಪರವಾನಗಿ ಅಗತ್ಯ. ಹಾಗೆಯೇ ಪ್ರವಾಸೋದ್ಯಮ, ತಾಲ್ಲೂಕು ಆಡಳಿತದ ಪರವಾನಗಿ ಸಹಿ ಅಗತ್ಯವಿರುತ್ತದೆ. ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರು ಅಧಿಕೃತವಲ್ಲದ ಗ್ರಾ.ಪಂ ಪರವಾನಗಿಯಲ್ಲಿ ವಹಿವಾಟು ನಡೆಸುತ್ತಿದ್ದಾರೆ.
ಮಾಹಿತಿ ಕೇಳಿ ಪಿಡಿಒಗೆ ಪತ್ರ: ಸಾಣಾಪುರ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿನ ಅನಧಿಕೃತ ರೆಸಾರ್ಟ್ಗಳು ಮಾಹಿತಿ ನೀಡುವಂತೆ ಜನವರಿ 2025ರಲ್ಲಿ ಕಂದಾಯ ಇಲಾಖೆ ಸೂಚಿಸಲಾಗಿತ್ತು. ಆದರೆ, ಗ್ರಾ.ಪಂ ಪಿಡಿಒ ಮಾಹಿತಿ ನೀಡಿರಲಿಲ್ಲ. ಈಚೆಗೆ ಅನನ್ಯರಾವ್ ಸಾವು, ವಿದೇಶಿ ಮಹಿಳೆ ಮತ್ತು ಸ್ಥಳೀಯ ಹೋಂ ಸ್ಟೇ ಒಡತಿ ಮೇಲೆ ಅತ್ಯಾಚಾರ, ಒಬ್ಬನ ಕೊಲೆ ನಂತರ ಮಾ.13ಕ್ಕೆ ಮಾಹಿತಿ ನೀಡಲು ತಿಳುವಳಿಕೆ ಪತ್ರ ನೀಡಿದಾಗ, ವರದಿ ನೀಡಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಗ್ರಾ.ಪಂಗೆ ಬಾರದ ಕಾರ್ಯದರ್ಶಿಯಿಂದ ಸಹಿ: ಸಾಣಾಪುರ ಗ್ರಾ.ಪಂನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ ಅವರು ಸರಿಯಾಗಿ ಗ್ರಾ.ಪಂಗೆ ಬರಲ್ಲ. ಆದರೂ ಹೋಂಸ್ಟೇ ಪರವಾನಗಿ ಪತ್ರದಲ್ಲಿ ಕಾರ್ಯದರ್ಶಿ ಸಹಿ ಒಳಗೊಂಡಿದೆ.