
ಮೈಸೂರು : ಆಕ್ಸಿಜನ್ ಸೌಲಭ್ಯ ಇಲ್ಲದೇ ಸರ್ಕಾರಿ ಆಂಬುಲೆನ್ಸ್ನಲ್ಲಿ ಮಗು ಮೃತಪಟ್ಟ ಘಟನೆಯು ನಂಜನಗೂಡಿನಲ್ಲಿ ನಡೆದಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಮೈಸೂರಿನ ಕೆಆರ್ ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ಘಟನೆಯಾಗಿದ್ದು, ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಎನ್ನಲಾಗಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಆಕ್ಸಿಜನ್ ಸೌಲಭ್ಯ ಇಲ್ಲದೇ ಸರ್ಕಾರಿ ಆಂಬುಲೆನ್ಸ್ನಲ್ಲಿ ಮಗು ಸಾವಿಗೀಡಾದ ಘಟನೆಯು ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಮೈಸೂರಿನ ಕೆಆರ್ ಆಸ್ಪತ್ರೆಗೆ ತೆರಳುತ್ತಿದ್ದ ಆಂಬುಲೆನ್ಸ್ ಇದಾಗಿತ್ತು. ನಂಜನಗೂಡು ನಗರದ ಶ್ರೀರಾಂಪುರ ಬಡಾವಣೆಯ ರತ್ನಮ್ಮ ಮತ್ತು ಕುಮಾರ್ ಎಂಬ ದಂಪತಿಯ ನವಜಾಶ ಶಿಶು ಮೃತಪಟ್ಟಿದೆ. ಮಗುವಿನ ಸಾವಿನಿಂದ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

ಮಾರ್ಚ್ 17 ರಂದು ಹೆರಿಗೆಗೆ ಎಂದು ನಂಜನಗೂಡು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತಾಯಿ ರತ್ನಮ್ಮ ದಾಖಲಾಗಿದ್ದರು. ಅದೇ ದಿನ ಹೆರಿಗೆ ಆಗಿತ್ತು. ಮಗು ಆರೋಗ್ಯಕರವಾಗಿದ್ದರೂ ಮೈ ಬಣ್ಣ ಕೆಲವೇ ಸಮಯದಲ್ಲಿ ನೀಲಿ ಬಣ್ಣಕ್ಕೆ ತಿರುಗಿತ್ತು.
ಹುಟ್ಟಿದ ಮಗು ನೀಲಿ ಬಣ್ಣಕ್ಕೆ ತಿರುಗಿದ ಪರಿಣಾಮ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ದಾದಿಯರು ಗಾಬರಿಯಾಗಿದ್ದರು.
ನಂತರ ಮಗುವಿನ ಸ್ಥಿತಿ ನೋಡಿ ಪೋಷಕರು ಕೂಡ ಆತಂಕಕ್ಕೆ ಒಳಗಾಗಿದ್ದರು.
ಮೈಸೂರಿ ಆಸ್ಪತ್ರೆಗೆ ದಾಖಲಿಸಲು ಆಸ್ಪತ್ರೆಯ ಸಿಬ್ಬಂದಿ ಮುಂದಾಗಿ ಆಂಬುಲೆನ್ಸ್ನಲ್ಲಿ ಕಳಿಸಿದಾಗ ಈ ಘಟನೆ ನಡೆದಿದೆ. ಮೈಸೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯದಲ್ಲೇ ಮಗು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದೆ.
ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದ ಪೋಷಕರು
ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ನಲ್ಲಿ ಆಕ್ಸಿಜನ್ ಕೊರತೆ ಇದೆ ಎಂದು ತಿಳಿದಿದ್ದರೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿ ಮೈಸೂರಿಗೆ ರವಾನೆ ಮಾಡಿದ್ದಾರೆ. ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಪೋಷಕರ ಆರೋಪ ಮಾಡಿದ್ದಾರೆ.